ಹಾವೇರಿ: ಧರ್ಮದ ಆಚರಣೆ ಉಳಿದಿರುವುದು ಜೈನ ಧರ್ಮದಲ್ಲಿ ಮಾತ್ರ. ಜೈನ ಧರ್ಮದಲ್ಲಿ ಕಠಿಣ ಧರ್ಮಾಚರಣೆಗಳಿವೆ. ಸಲ್ಲೇಖನ ವ್ರತನಿಯಮದಲ್ಲಿ ಒಂದೊಂದು ಆಹಾರ ಪದಾರ್ಥ ತ್ಯಾಗಮಾಡಿ, ಪ್ರಾಣತ್ಯಾಗ ಮಾಡುವುದು ಜೈನ ಧರ್ಮದಲ್ಲಿ ಮಾತ್ರ ಎಂದು ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಮೊದಲನೆಯದು ಮನುಷ್ಯ ವರ್ಗ, ಇದರಲ್ಲಿ ಅವರು ಕಟ್ಟೆಮೇಲೆ ಕುಳಿತು ಅದು-ಇದು ಮಾತನಾಡಿ, ಕಾಲಹರಣ ಮಾಡುವರು. ಎರಡನೇ ವರ್ಗ ರಾಕ್ಷಸಮಾನವರು, ಇವರು ತಾವು ಅನುಭವಿಸಿದ ಕೆಡಕನ್ನು ಬೇರೆಯವರು ಅನುಭವಿಸುವಂತೆ ಮಾಡುತ್ತಾರೆ. ಮೂರನೇಯವರು ಮಹಾಮಾನವರು, ಇವರು ದಾನ-ಧರ್ಮಗಳಲ್ಲಿ ತೊಡಗಿರುತ್ತಾರೆ ಹಾಗೂ ನಾಲ್ಕನೇಯವರು ದೇವಮಾನವರು, ಇವರು ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ ಎನ್ನುವ ಸ್ವಭಾವ ಹೊಂದಿರುತ್ತಾರೆ ಎಂದರು.
ಇಂದು ಎಲ್ಲ ವ್ಯಾಪಾರಿಕರಣವಾಗಿದೆ. ಎಲ್ಲರಲ್ಲೂ ಸ್ವಾರ್ಥಗುಣ ಸೇರಿಕೊಂಡಿದೆ. ಸ್ವಾರ್ಥ ಬಿಟ್ಟು ನಿಸ್ವಾರ್ಥ ಸೇವಾ ಗುಣ ಬೆಳೆಸಿಕೊಂಡಾಗ ಜೀವನ ಅರ್ಥಪೂರ್ಣವಾಗುತ್ತದೆ. ಸಮಾಜದಲ್ಲಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು, ದಶಧರ್ಮಗಳ ಸೂತ್ರವನ್ನು ಪಾಲಿಸುವ ಮೂಲಕ ಧರ್ಮಜ ಮಾರ್ಗದಲ್ಲಿ ನಡೆಯಬೇಕು ಎಂದರು.ಬೆಂಗಳೂರಿನ ವೈದ್ಯರು, ಧಾರ್ಮಿಕ ಪ್ರವಚನಕಾರ ಡಾ. ನೀರಜಾ ನಾಗೇಂದ್ರಕುಮಾರ ಅವರು ಉತ್ತಮ ಕ್ಷಮಾ ಧರ್ಮದ ಕುರಿತು ಮಾತನಾಡಿ, ಇಂದು ಕ್ರೋಧ, ರಾಗ, ದ್ವೇಷ, ಮೋಹ ಹೆಚ್ಚಾಗಿವೆ. ಸಂಸಾರ ಜೀವನದಲ್ಲಿ ಪಾಪಕರ್ಮಗಳನ್ನು ಮಾಡಲಾಗುತ್ತದೆ. ಮನಸ್ಸಿನ ಕಷಾಯಗಳನ್ನು ತೊಡೆದುಹಾಕಲು ದಶಲಕ್ಷಣ ಪರ್ವ ಅತ್ಯಂತ ಉಪಯುಕ್ತವಾಗಿದೆ. ದಶಧರ್ಮದ ಬೆಳಕಿನಲ್ಲಿ ನಡೆದರೆ ಜೀವನ ಸರಳ ಹಾಗೂ ಸುಂದರವಾಗಿರುತ್ತದೆ ಎಂದು ಆಚಾರ್ಯರು ಹೇಳಿದ್ದಾರೆ. ದ್ವೇಷದಿಂದ ಆರೋಗ್ಯ ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಕೋಪದ ಭರದಲ್ಲಿ ಕೊಲೆಗಳು ನಡೆಯುತ್ತಿರುವುದು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತವೆ. ಹಾಗಾಗಿ ಕೋಪವನ್ನು ನಿಗ್ರಹಿಸಬೇಕು, ಎಲ್ಲರನ್ನೂ ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ಕ್ಷಮಾ ಗುಣವನ್ನು ಬೆಳೆಸಿಕೊಂಡರೆ ಉತ್ತಮ ಗತಿಗೆ ಹೋಗುತ್ತಿರಿ ಎಂದರು.