ಶರಾವತಿ ಕಣಿವೆ ಸಮಸ್ಯೆ ಇಂದಿಗೂ ಮುಗಿದಿಲ್ಲ: ನಾ.ಡಿ. ಬೇಸರ

KannadaprabhaNewsNetwork |  
Published : Dec 26, 2023, 01:32 AM IST
೨೫ಕೆ.ಎಸ್.ಎ.ಜಿ.೨ | Kannada Prabha

ಸಾರಾಂಶ

ಸಾಗರ ತಾಲೂಕಿನ ಜನತೆಯನ್ನು ಇಡೀ ಕರ್ನಾಟಕ ಮರೆಯುವಂತಿಲ್ಲ. ರಾಜ್ಯಕ್ಕೆ ಬೆಳಕು ನೀಡಿ, ಕತ್ತಲೆಯಲ್ಲೇ ಇರುವ ಇಲ್ಲಿಯ ಶರಾವತಿ ಕಣಿವೆಯ ಇಂಚಿಂಚು ಭೂಮಿಯಲ್ಲೂ ಜನರ ನಾಡಿಮಿಡಿತ ಅಡಗಿದೆ. ಇಲ್ಲಿಯ ಸಮಸ್ಯೆಗಳು ಹಲವಾರು ದಶಕಗಳಿಂದ ಬಗೆಹರಿಯದಿರುವ ಬಗ್ಗೆ ನಾಡಿನ ಹಿರಿಯ ಸಾಹಿತಿ ನಾ.ಡಿಸೋಜ ಬೇಸರ ವ್ಯಕ್ತಪಡಿಸಿದ್ದಾರೆ. ಶರಾವತಿ ಕಣಿವೆ ಸಮಸ್ಯೆ ಹಿಂದೆ ಹೇಗಿತ್ತೋ, ಇವತ್ತಿಗೂ ಹಾಗೆಯೇ ಮುಂದುವರಿದಿದೆಯೇ ಹೊರತು, ಮುಗಿದಿಲ್ಲ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಶರಾವತಿ ಕಣಿವೆಯ ಸಮಸ್ಯೆ ಹಿಂದೆ ಹೇಗಿತ್ತೋ, ಇವತ್ತಿಗೂ ಹಾಗೆಯೇ ಮುಂದುವರಿದಿದೆಯೇ ಹೊರತು, ಮುಗಿದಿಲ್ಲ ಎಂದು ಸಾಹಿತಿ ಡಾ. ನಾ.ಡಿಸೋಜ ಬೇಸರ ವ್ಯಕ್ತಪಡಿಸಿದರು.

ಜನಸ್ಪಂದನ ಟ್ರಸ್ಟ್ ಮತ್ತು ಸುವ್ವಿ ಪಬ್ಲಿಕೇಷನ್ಸ್ ವಿವಿಧ ಸಂಘಟನೆಗಳ ಸಹಕಾರದಲ್ಲಿ ಆಯೋಜಿಸಿರುವ ತಮ್ಮ ಸಮಗ್ರ ಕೃತಿ ಬಿಡುಗಡೆ ಹಾಗೂ ಸಾಹಿತ್ಯೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣದ ಬಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶರಾವತಿ ನದಿಗೆ ಅಣೆಕಟ್ಟು ಕಟ್ಟಿ ನಾಡಿನ ಜನತೆಗೆ ಬೆಳಕು ಕೊಡುತ್ತಾರೆ ಎಂದು ಸಂತಸದಲ್ಲಿದ್ದೆವು. ಆದರೆ, ಅದು ಇಂದಿಗೂ ಸಂಕಟವಾಗಿಯೇ ಮುನ್ನಡೆದಿದೆ. ಅವ್ಯಾಹತವಾಗಿ ಪರಿಸರ ನಾಶ, ಪಶ್ಚಿಮಘಟ್ಟದ ಶ್ರೇಣಿಗಳಲ್ಲಿ ಹವಾಮಾನದ ವೈಪರೀತ್ಯದ ಸಮಸ್ಯೆ ಈಗ ನಮ್ಮನ್ನು ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತ್ಯದಲ್ಲಿ ಆಕಾಶ ಕೆಳಗಿನ ಸತ್ಯ:

ಶರಾವತಿ ಕಣಿವೆಯ ಪ್ರದೇಶದಲ್ಲಿಯೇ ನಾನು ಸರ್ಕಾರಿ ನೌಕರಿಯನ್ನು ನಿರ್ವಹಿಸಲು ಆರಂಭಿಸಿದೆ. ಇಲ್ಲಿ ನಡೆಯುವ ಎಲ್ಲ ಆಕಾಶದ ಕೆಳಗಿನ ಸತ್ಯಗಳನ್ನು ಯಥಾವತ್ತಾಗಿ ನನ್ನ ಕಥೆ, ಕಾದಂಬರಿಗಳಲ್ಲಿ ಮೂಡಿಸಿದ್ದೇನೆ. ಅಲ್ಲಿ ಆಗುವ ತಪ್ಪುಗಳನ್ನು ನಾನು ಬರೆದಾಗ ಅಧಿಕಾರಿಗಳು ಒಬ್ಬರಿಗೊಬ್ಬರು ಚರ್ಚೆ ಮಾಡುತ್ತಿದ್ದರೆ ಹೊರತು, ನನ್ನ ಬಳಿ ಪ್ರಶ್ನಿಸುವ ಧೈರ್ಯ ಮಾಡುತ್ತಿರಲಿಲ್ಲ. ಶರಾವತಿ ನದಿ ಮತ್ತು ಪರಿಸರದ ಕುರಿತು ನಮ್ಮೆಲ್ಲ ಕಥೆಗಳು ಜೀವ ತುಂಬಿಕೊಳ್ಳುತ್ತವೆ. ಇಂದಿಗೂ ನಾನು ಆ ಆಲೋಚನಾ ಕ್ರಮದಿಂದ ಹೊರಬಂದಿಲ್ಲ. ಇದು ನನ್ನ ಮನಸ್ಸಿನಲ್ಲಿ ಇಂದಿಗೂ ದಟ್ಟವಾಗಿ ಬೇರೂರಿದೆ ಎಂದು ಹೇಳಿದರು.

ಸಮಗ್ರ ಕೃತಿ:

ಸುವ್ವಿ ಪ್ರಕಾಶನದ ಮುಖ್ಯಸ್ಥ ಬಿ.ಎನ್. ಸುನೀಲ್ ಕುಮಾರ್ ಮಾತನಾಡಿ, ನಾ.ಡಿಸೋಜಾ ಅವರ ಎಷ್ಟೋ ಕಥೆಗಳ ಮೂಲ ಪ್ರತಿಗಳು ಅವರಲ್ಲೇ ಲಭ್ಯವಿರಲಿಲ್ಲ. ಅಂಥವುಗಳನ್ನು ಸಂಗ್ರಹಿಸಿ ಸಮಗ್ರ ಕೃತಿಯೊಂದನ್ನು ಹೊರತಂದಿದ್ದೇವೆ. ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿ, ಕನ್ನಡದ ಕಥೆ ಮತ್ತು ಕಾದಂಬರಿ ಲೋಕಕ್ಕೆ ಅವರು ನೀಡಿರುವ ಕೊಡುಗೆಯನ್ನು ನಾವುಗಳು ಸ್ಮರಿಸಬೇಕು. ಅದಕ್ಕಾಗಿ ನಮ್ಮ ಈ ಪ್ರಯತ್ನ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ, ಫಿಲೋಮಿನಾ ಡಿಸೋಜ ಹಾಜರಿದ್ದರು.

- - - ಬಾಕ್ಸ್‌ ಸುವ್ವಿ ಪ್ರಕಾಶನ ಪ್ರಯತ್ನ ಮೆಚ್ಚುವಂಥದ್ದು ಒಬ್ಬ ಸಾಹಿತಿಗೆ ತಾನು ರಚಿಸಿದ ಕಥೆ, ನಾಟಕ, ಕಾವ್ಯ, ಕಾದಂಬರಿ ಎಲ್ಲವೂ ಅವನ ಜೀವಿತಾವಧಿಯಲ್ಲಿಯೇ ಸಮಗ್ರ ಕೃತಿಯಾಗಿ ಹೊರಹೊಮ್ಮುವುದು ಹೆಮ್ಮೆ ತರುತ್ತದೆ. ಇಂತಹ ಒಂದು ವಿಶಿಷ್ಟ ಪ್ರಯತ್ನವನ್ನು ಸುವ್ವಿ ಪಬ್ಲಿಕೇಷನ್ ಮಾಡುತ್ತಿದೆ, ನನ್ನ ಎಲ್ಲ ಕಾದಂಬರಿಗಳು 6 ಸಾವಿರ ಪುಟಗಳಲ್ಲಿ 9 ಮಾಲಿಕೆಯಲ್ಲಿ ಹೊರಬರುತ್ತಿರುವುದು ವಿಶೇಷವಾದುದು. ನನ್ನ ಎಲ್ಲ ಕಥೆ, ಕಾದಂಬರಿಗಳನ್ನು ಸಮಗ್ರವಾಗಿ ಹೊರತಂದಿರುವ ಸುವ್ವಿ ಪ್ರಕಾಶನದ ಪ್ರಯತ್ನ ಮೆಚ್ಚುವಂತದ್ದು ಎಂದು ಡಿಸೋಜಾ ಮೆಚ್ಚುಗೆ ವ್ಯಕ್ತಪಡಿಸಿದರು.

- - - -25ಕೆ.ಎಸ್.ಎ.ಜಿ.2:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!