ರಾಮನಗರ: ರಾಮ, ರಹೀಮ ಎಲ್ಲರಿಗೂ ದೇವರು ಒಬ್ಬನೇ. ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತವಾಗಿ ಎಲ್ಲರೂ ಆತನ ಮಕ್ಕಳು. ಬೇರೆ ಬೇರೆ ಹೆಸರಿನಲ್ಲಿ ಪೂಜೆ, ಆರಾಧನೆ ಮಾಡುತ್ತೇವೆ. ಶ್ರೀರಾಮನ ಪತ್ನಿ ಸೀತಾಮಾತೆ, ಸಹೋದರ ಲಕ್ಷ್ಮಣರ ಜೊತೆಯಲ್ಲಿ ರಾಮನಗರದ ಬೆಟ್ಟದಲ್ಲಿ ವಾಸವಾಗಿದ್ದರು ಎಂಬುದಕ್ಕೆ ಇಲ್ಲಿನ ಪಾದಗಳೇ ಸಾಕ್ಷಿಯಾಗಿವೆ. ಶ್ರೀರಾಮ ದೇವರ ಆಶೀರ್ವಾದದಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಶಾಂತಿ ಸಮಾಧಾನದಿಂದ ಬದುಕು ಕಟ್ಟಿಕೊಂಡಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ರಾಮೋತ್ಸವದ ಅಂಗವಾಗಿ ಚಲನಚಿತ್ರ ಗೀತೆಗಳು, ನೃತ್ಯ, ಶ್ರೀರಾಮನ ಹೆಸರಿನಲ್ಲಿ ಮನೆಗೊಂದು ರಂಗೋಲಿ, ಮೆಹಂದಿ ಬಿಡಿಸುವುದು, ಬೆಂಕಿ ಇಲ್ಲದೇ ಅಡುಗೆ ಮಾಡುವುದು, ಮ್ಯಾರಾಥಾನ್ ನಡಿಗೆ ಈ ಸ್ಪರ್ಧೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಹುಮಾನ ಖಚಿತ, ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮಕ್ಕಳಿಗೆ ಒಂದೊಂದು ಟೀಶರ್ಟ್ ಹಾಗೂ ಬಹುಮಾನ ನೀಡಲಾಗುತ್ತಿದೆ. ಗೆಲ್ಲುವ ತಂಡಗಳಿಗೆ ಪ್ರತ್ಯೇಕ ನಗದು ಬಹುಮಾನ ವಿತರಿಸಲಾಗುವುದು. ಈಗಾಗಲೇ ಕ್ರಿಕೆಟ್ ಪಂದ್ಯ ಆಡಿರುವ ಪ್ರತಿ ಆಟಗಾರರಿಗೆ ಕಿಟ್, ಟೀ-ಶರ್ಟ್ ವಿತರಣೆ ಮಾಡಲಾಗಿದೆ. ಈ ದಿನ ಕಬಡ್ಡಿ ತಂಡಕ್ಕೆ ನೆಟ್, ಬಾಲ್ ಪ್ರತಿಯೊಬ್ಬರಿಗೂ ಶ್ರೀರಾಮ ದೇವರ ಭಾವಚಿತ್ರ ಮುದ್ರಿಸಿರುವ ಟೀಶರ್ಟ್, ಕಬಡ್ಡಿ ಆಟಗಾರರಿಗೆ ನೀಕ್ಯಾಪ್, ಶೌಲ್ಡರ್ಕ್ಯಾಪ್, ಒಂದು ಗಿಫ್ಟ್ ಹಾಗೂ ವಾಲಿಬಾಲ್, ಥ್ರೋಬಾಲ್ ಆಟಗಾರರಿಗೂ ನೀಡಲಾಗುವುದು ಎಂದು ತಿಳಿಸಿದರು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 2026ನೇ ಜನವರಿ ಮಾಸದಲ್ಲಿ ತಿರುಪತಿ ಶ್ರೀ ವೆಂಕಟೇಶ್ವರಸ್ವಾಮಿಯ ಕಲ್ಯಾಣೋತ್ಸವ ಏರ್ಪಡಿಸಲಾಗುವುದು. ಪ್ರತಿ ಭಕ್ತಾದಿಗಳಿಗೂ ತಿರುಪತಿ ಲಾಡು, ಮನೆ ಮನೆಗೆ ತಿರುಪತಿ ಪ್ರಸಾದ ವಿತರಣೆ ಮಾಡಲಾಗುವುದು. ರಾಮೋತ್ಸವದ ಕೊನೆಯ ದಿನ ರಾಮನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ನೂರಾರು ದೇವಸ್ಥಾನಗಳಿಂದ ಆಗಮಿಸುವ ಪ್ರತಿ ದೇವರಿಗೆ ಹೂವಿನ ಅಲಂಕಾರದೊಡನೆ ಪಲ್ಲಕ್ಕಿ ಉತ್ಸವದಲ್ಲಿ ಇಡೀ ದಿನ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಈ ಮೂಲಕ ರಾಮೋತ್ಸವ ಕಾರ್ಯಕ್ರಮ ರಾಮನಗರ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದು ಹೇಳಿದರು.ಶ್ರೀ ರಾಮನ ಹೆಸರಿನಲ್ಲಿ ರಾಮೋತ್ಸವ ಪ್ರತಿವರ್ಷ ಆಯೋಜಿಸಿ, ಕ್ಷೇತ್ರಾದ್ಯಂತ ಇರುವ ಎಲ್ಲಾ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ವಾಕಿಂಗ್ ಮತ್ತು ವ್ಯಾಯಾಮ ಮಾಡುವಂತೆ ಮಕ್ಕಳಿಗೆ ಬೇಕಾದ ನೀರಿನ ಚಿಲುಮೆಗಳು ಬರಲಿವೆ. ಸುಮಾರು 300 ಎಕರೆ ಪ್ರದೇಶದಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಬಡವರಿಗೆ ಉಚಿತ ನಿವೇಶನ, ಮನೆ ನೀಡುವ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದರ ಮೂಲಕ ವೇದಿಕೆಯಲ್ಲಿರುವ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಜಾತಿಬೇಧವಿಲ್ಲದಂತೆ ಒಂದೇ ತಾಯಿ ಮಕ್ಕಳಂತೆ ಮತದಾರರ ಋಣ ತೀರಿಸುವ ದೃಷ್ಟಿಯಿಂದ ರಾಮೋತ್ಸವ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಿಗೆ ಕ್ರೀಡಾಕೂಟ ಆಯೋಜಿಸಿದ್ದೇವೆ ಎಂದರು.
ಕಾರ್ಯಕ್ರಮದ ಪ್ರಮುಖ ಉದ್ದೇಶ ಹೋಬಳಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಥಳೀಯ ಮತ್ತು ಸುಪ್ತ ಪ್ರತಿಭೆಗಳನ್ನು ಹೊರ ಜಗತ್ತಿನ ಮುಂದೆ ಅನಾವರಣ ಮಾಡಬೇಕು. ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ರಾಮೋತ್ಸವದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಇಕ್ಬಾಲ್ ಹುಸೇನ್ ಮನವಿ ಮಾಡಿದರು.ಈ ವೇಳೆ ನಗರಸಭಾಧ್ಯಕ್ಷ ಕೆ.ಶೇಷಾದ್ರಿ, ಉಪಾಧ್ಯಕ್ಷೆ ಆಯಿಷಾ ಬಾನು, ನಗರಸಭಾ ಸದಸ್ಯರು, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ರಾಮನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್, ರಾ.ಚ.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಎನ್.ಆರ್.ವೆಂಕಟೇಶ್, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ನಗರಸಭಾ ಸದಸ್ಯರಾದ ಬೈರೇಗೌಡ, ಸಮದ್, ನಿಜಾಂ ಷರೀಫ್, ಅಜ್ಮತ್, ಗೌರಮ್ಮ ಗುರುವೇಗೌಡ, ವಿಜಯಕುಮಾರಿ, ತಾಲೂಕು ಭೂ ಮಂಜೂರಾತಿ ಸದಸ್ಯ ರವಿ ಮತ್ತಿತರರು ಉಪಸ್ಥಿತರಿದ್ದರು.
14ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರೇಷ್ಮೆ ನಗರಿಯಲ್ಲಿ ರಾಮೋತ್ಸವ - 2025 ಕ್ರೀಡೋತ್ಸವದಲ್ಲಿ ವಿಜೇತ ಆಟಗಾರರಿಗೆ ಶಾಸಕ ಇಕ್ಬಾಲ್ ಹುಸೇನ್ ಬಹುಮಾನ ವಿತರಿಸಿದರು.