ಫೋಟೋ - 30ಎಂವೈಎಸ್ 38
ಮೈಸೂರಿನ ರಂಗಾನಂದ ರಂಗ ತಂಡವು ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ಕರ್ನಾಟಕ ರಮಾರಮಣ ಶ್ರೀಕೃಷ್ಣದೇವರಾಯ ನಾಟಕ ಪ್ರದರ್ಶನಗೊಂಡಿತು.
ಕಾಕೋಳು ಸರೋಜಾ ರಾವ್ ರಚಿಸಿರುವ, ರಂಗಸ್ವಾಮಿ ನಿರ್ದೇಶಿಸಿದ ಈ ನಾಟಕವು ವಿಜಯನಗರ ಸಾಮ್ರಾಜ್ಯದ ಕುರಿತು ಬೆಳಕು ಚೆಲ್ಲಲಿದೆ. ದಕ್ಷಿಣ ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟವನ್ನು ಸುವರ್ಣಯುಗ ಎಂದು ಕರೆಯಲಾಗುತ್ತದೆ. ರಮಾರಮಣ ಶ್ರೀಕೃಷ್ಣದೇವರಾಯ ಪರಾಕ್ರಮ, ಆದರ್ಶ ಆಡಳಿತ, ಪ್ರಜಾಪಾಲನೆ ಇವೆಲ್ಲ ಎಷ್ಟು ಮುಖ್ಯವೋ ಮಹಾಮಂತ್ರಿ ತಿಮ್ಮರಸು ಅವರ ದಕ್ಷ ಮಾರ್ಗದರ್ಶನ, ಸ್ವಾಮಿನಿಷ್ಠೆ ಮತ್ತು ಪರಿಶ್ರಮ ಇವುಗಳೂ ಅಷ್ಟೇ ಮುಖ್ಯ.ಕೃಷ್ಣದೇವರಾಯರು ತಮ್ಮ ಮಗ ತಿರುಮಲರಾಯನಿಗೆ ಪಟ್ಟಕಟ್ಟಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚೈತ್ರಯಾತ್ರೆಗೆ ಹೋದ ನಂತರ ಅರಮನೆಯಲ್ಲಿ ನಡೆಯುವ ಸಂಚು, ಕೃತ್ರಿಮತೆ, ದೌರ್ಜನ್ಯ ಮುಂತಾದವುಗಳನ್ನು ನಾಟಕ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತದೆ. ಮೋಸದಿಂದ ತಿರುಮಲನಿಗೆ ಪಂಪಾಪತಿ ವಿರೂಪಾಕ್ಷನ ಪ್ರಸಾದದಲ್ಲಿ ವಿಷ ಬೆರೆಸಿ ಕೊಲ್ಲಲಾಗುತ್ತದೆ. ಅಚ್ಯುತರಾಯನ ಕುತಂತ್ರದಿಂದಾಗಿ ಕೊಲೆಯ ಆರೋಪ ನಿಷ್ಠಾವಂತ ತಿಮ್ಮರಸು ಅವರ ಮೇಲೆ ಬರುತ್ತದೆ.
ರಂಗಸ್ವಾಮಿ ಅವರು ನಾಟಕವನ್ನು ಸೊಗಸಾಗಿ ನಿರ್ದೇಶಿಸಿದ್ದಾರೆ. ವರನಟ ಡಾ. ರಾಜ್ ಕುಮಾರ್ ಅವರ ನೆನಪಿನಲ್ಲಿ ವರ್ಷಪೂರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವ ರಂಗಾನಂದ ತಂಡ ಉತ್ತಮ ರೀತಿಯಲ್ಲಿ ತನ್ನ ರಂಗಯಾತ್ರೆಯನ್ನು ಆರಂಭಿಸಿದೆ. ಕೃಷ್ಣದೇವರಾಯನಾಗಿ ರಂಗಸ್ವಾಮಿಯವರು ಭಾವಪೂರ್ಣವಾಗಿ ನಟಿಸಿದ್ದಾರೆ. ತಿಮ್ಮರಸು ಪಾತ್ರದಲ್ಲಿ ನಾಗೇಂದ್ರ ಸಿ.ಎಫ್.ಟಿ.ಆರ್.ಐ, ಅಚ್ಯುತರಾಯನ ಪಾತ್ರದಲ್ಲಿ ನಾಗಭೂಷಣ, ಗೋವಿಂದರಾಜುವಿನ ಪಾತ್ರದಲ್ಲಿ ಪ್ರತಾಪ್, ದೇವರಸನ ಪಾತ್ರದಲ್ಲಿ ಬೆನಕ ನಾಗರಾಜ್ ಮನೋಜ್ಞವಾಗಿ ನಟಿಸಿದ್ದಾರೆ.
ಪೂರಕ ಮಾಹಿತಿ: ಎನ್. ಧನಂಜಯ.