ಕನ್ನಡಪ್ರಭ ವಾರ್ತೆ ಮದ್ದೂರು
ಇಂಡಿಯಾ ಒಕ್ಕೂಟದಿಂದ ದೂರ ಸರಿದಿದ್ದೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋಲಿಗೆ ಕಾರಣವಾಯಿತು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ವಿಶ್ಲೇಷಿಸಿದರು.ತಾಲೂಕಿನ ಬೆಸಗರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಆಡಳಿತ ನಡೆಸುತ್ತಿದ್ದರು. ಕಳೆದ ಎರಡು ಬಾರಿಯೂ ಅವರು ಕಾಂಗ್ರೆಸ್ ಜೊತೆಗೆ ಅಲೆಯನ್ಸ್ ಮಾಡಿಕೊಂಡಿದ್ದರು. ಈ ಬಾರಿ ಕೇಜ್ರಿವಾಲ್ ಅಲೆಯನ್ಸ್ ಬಿಟ್ಟು ಹೋಗಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.
ಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ 15 ಸ್ಥಾನಗಳು ಬಿಜೆಪಿ ಪಡೆಯಿತು. ಉಳಿದವನ್ನು ಕಳೆದುಕೊಂಡಿಲ್ಲವೇ. ಆಗ ಮೋದಿಯವರ ವರ್ಚಸ್ಸು ಕುಂದಿದೆ ಎಂದು ಹೇಳಲಿಲ್ಲ. ದೆಹಲಿಯಲ್ಲಿ ಗೆದ್ದ ಮಾತ್ರಕ್ಕೆ ಮೋದಿ ಅವರ ವರ್ಚಸ್ಸು ವೃದ್ಧಿಸಿದೆ. ಕಳೆದ ಬಾರಿ 100 ಸ್ಥಾನಗಳನ್ನು ಗೆದ್ದಿದ್ದರು. ಈ ಬಾರಿ ಏಕೆ ಕಡಿಮೆಯಾಯಿತು. ಆಗ ಅವರ ವರ್ಚಸ್ಸು ಕಡಿಮೆಯಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.ಗೆದ್ದಾಗ ಹೆಗಲು ಮುಟ್ಟಿ ನೋಡಿಕೊಳ್ಳುವುದು, ಈ ರೀತಿ ಮಾತನಾಡುವುದು, ಸೋತಾಗ ಮತ್ತೊಂದು ಮಾತನಾಡುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಅದಕ್ಕೆ ಹೆಚ್ಚಿನ ಮನ್ನಣೆ ಕೊಡುವ ಅಗತ್ಯವಿಲ್ಲ. ಆಂಧ್ರದಲ್ಲಿ ಚಂದ್ರಬಾಬುನಾಯ್ಡು ಅವರು ಸೋಲಲಿಲ್ಲವೇ, ತೆಲಂಗಾಣದಲ್ಲಿ ಕೆ.ಸಿ.ಚಂದ್ರಶೇಖರ್ ಅವರನ್ನು ಯಾರೂ ಸೋಲಿಸಲಾಗದು ಎನ್ನುತ್ತಿದ್ದರು. ಅವರು ಸೋಲೊಪ್ಪಿಕೊಳ್ಳಲಿಲ್ಲವೇ ಎಂದು ಉದಾಹರಣೆ ಸಮೇತ ವಿವರಿಸಿದರು.
ರೇವಣ್ಣ ನಮ್ಮ ಮಾತು ಕೇಳಿದ್ದರೆ?:ಮಾಜಿ ಮಂತ್ರಿ ಎಚ್.ಡಿ.ರೇವಣ್ಣನವರು ಅಧಿಕಾರದಲ್ಲಿದ್ದಾಗ ನಮ್ಮ ಮಾತು ಕೇಳಿದ್ದರೇ. ಅವರು ಏನಾದರೂ ಹೇಳಬಹುದು. ಅವರ ಮಾತನ್ನು ಕೇಳಿಕೊಂಡು ತೀರ್ಮಾನ ಮಾಡಲಾಗದು ಎಂದು ಹಾಸನದಲ್ಲಿ ಕೃಷಿ ಸ್ಥಾಪನೆ ಬಗ್ಗೆ ಕೇಳಿದ ಪ್ರಶ್ನೆಯೆಗೆ ಪ್ರತಿಕ್ರಿಯಿಸಿದರು.
ನಾವು ರಾಜ್ಯದ ಜನರ ಮಾತು ಕೇಳುತ್ತೇವೆ. ಈಗಾಗಲೇ ಮಂಡ್ಯದ ವಿ.ಸಿ. ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆಗೆ ಎಲ್ಲ ಸಿದ್ಧತೆಯೂ ಆಗಿದೆ. ಈಗ ಮತ್ತೆ ಬೇರೆ ತೀರ್ಮಾನ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ರೇವಣ್ಣ ಅವರು ಮಂತ್ರಿಗಳಾಗಿದ್ದವರು, ಮಾಜಿ ಪ್ರಧಾನಿಗಳ ಮಗ, ಮಾಜಿ ಮುಖ್ಯಮಂತ್ರಿಯ ಸಹೋದರ. ಅವರು ಹೇಳಿದರೆ ತಪ್ಪೇನಿಲ್ಲ. ನಮ್ಮ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದರು.
ಸಿಂಗಲ್ ವೋಟ್ನಿಂದ ರಾಮಕೃಷ್ಣಗೆ ಸೋಲು:ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಮದ್ದೂರು ತಾಲೂಕಿನಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಹರೀಶ್ ಮತ್ತು ಕದಲೂರು ರಾಮಕೃಷ್ಣ ಇಬ್ಬರ ಪೈಕಿ ಓರ್ವ ಅಭ್ಯರ್ಥಿ ಸಿಂಗಲ್ ವೋಟ್ ಹಾಕಿಸಿಕೊಂಡಿದ್ದೇ ಕದಲೂರು ರಾಮಕೃಷ್ಣ ಅವರ ಸೋಲಿಗೆ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಮತಯಾಚನೆ ಮಾಡಬೇಕು. ಯಾರೂ ಸಹ ಸಿಂಗಲ್ ಓಟ್ ಕೇಳಬಾರದು ಎಂದು ನಾನು ಹಾಗೂ ಶಾಸಕ ಉದಯ್ ಇಬ್ಬರೂ ತಾಕೀತು ಮಾಡಿದ್ದೆವು. ಆದರೆ, ಹರೀಶ್ ಅವರು ಸಿಂಗಲ್ ಓಟ್ ಹಾಕಿಸಿಕೊಂಡ ಕಾರಣ ಕದಲೂರು ರಾಮಕೃಷ್ಣ ಅವರ ಸೋಲಿಗೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.ಆದರೆ, ಹರೀಶ್ ಅವರು ಮತಯಾಚನೆ ಮಾಡುವಾಗ ಇಬ್ಬರೂ ಒಟಿಗೆ ಮತಯಾಚನೆ ಮಾಡಿದ್ದೆವು. ವೈಯಕ್ತಿಕವಾಗಿ ನನಗೆ ಸಿಂಗಲ್ ವೋಟ್ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ನಾನು ಮತ್ತು ಶಾಸಕ ಉದಯ್ ಇಬ್ಬರೂ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗೀಗೌಡ, ಲಿಂಗನದೊಡ್ಡಿ ರಾಮಕೃಷ್ಣ, ಪಣ್ಣೇದೊಡ್ಡಿ ವಿಜಯೇಂದ್ರ, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ. ಅಮರ್ಬಾಬು ಇದ್ದರು.