ಕೊಟ್ಟೂರು: ಸರ್ ಎಂ.ವಿಶ್ವೇಶ್ವರಯ್ಯ, ಸಾಹಿತಿಗಳು ನಿರಂತರವಾಗಿ ನಡೆಸಿದ ಶ್ರಮದ ಫಲವಾಗಿ 1938ರಲ್ಲಿ ಕಸಾಪ ಸ್ಥಾಪನೆಯಾಗಲು ಕಾರಣವಾಯಿತು ಎಂದು ಕೂಡ್ಲಿಗಿ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಇಮಾಮಸಾಹೇಬ್ ಹಡಗಲಿ ಹೇಳಿದರು.
1009ರಲ್ಲಿಯೇ ಪರಿಷತ್ ಹುಟ್ಟಿನ ಕುರಿತು ನಡೆದ ಚರ್ಚೆಗೆ ನಾಲ್ವಡಿ ಕೃಷ್ಣರಾಯರು ಸಮ್ಮತಿಸಿದ್ದರು. 1913ರಲ್ಲಿ ನಡೆದ ಪ್ರಜಾಪ್ರತಿನಿಧಿ ಸಭೆಯಲ್ಲಿ ಬಿಎಂಶ್ರೀಯವರ ಭಾಷಣ ಪ್ರಭಾವದಿಂದ ಪರಿಷತ್ ಹುಟ್ಟಿಗೆ ಚಿಗುಯೊಡೆಯಿತು. 1915ರ ಮೇ 5ರಂದು ಕರ್ನಾಟಕ ಸಾಹಿತ್ಯ ಪರಿಷತ್ ಹೆಸರಿನೊಂದಿಗೆ ಸ್ಥಾಪನೆಯಾಯಿತು. 1938ರಲ್ಲಿ ರಂ.ರಾ. ದಿವಾಕರ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ನಡೆದ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರುನಾಮಕರಣಗೊಂಡಿತು. ಬಿಎಂಟಿಸಿ ಪ್ರತಿವರ್ಷ ನೃಪತುಂಗ ಹೆಸರಲ್ಲಿ ಪ್ರಶಸ್ತಿ ನೀಡುತ್ತಿದೆ. 1760 ಪುಸ್ತಕಗಳನ್ನು ಪ್ರಕಟಿಸಿರುವ ಪರಿಷತ್ನ ಭಂಡಾರದಲ್ಲಿ 70 ಸಾವಿರ ಪುಸ್ಕಕಗಳಿವೆ ಎಂದರು.
ಕಸಾಪಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎಂಬುದಕ್ಕೆ ನನ್ನ ಆಕ್ಷೇಪವಿದೆ. ಪರಿಷತ್ನ್ನು ಸಂಘಟಿಸಿ, ಕನ್ನಡ ಕಾರ್ಯಕ್ರಮಗಳನ್ನು ಭಾಷಾ ವಿಚಾರವನ್ನು ವಿಸ್ತರಿಸಲು ಸಮರ್ಥವಾದ ಸಂಘಟನಕಾರನೂ ಅಧ್ಯಕ್ಷನಾಗಬಹುದು. ಕೇವಲ ₹400 ನೀಡಿ ಪರಿಷತ್ ಸದಸ್ಯರಾಗಬೇಕು. ಕೊಟ್ಟೂರು ತಾಲೂಕು ಸಾಹಿತ್ಯ ಭವನಕ್ಕೆ ಜಾಗ ನಿಗದಿ ಮಾಡಿಕೊಂಡರೆ ಕನ್ನಡ- ಸಂಸ್ಕೃತಿ ಸಚಿವರಿಂದ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕಲ್ಪಿಸಿಕೊಡುವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ ಮಾತನಾಡಿ, ನಮ್ಮ ಕಚೇರಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದೇವೆ. ಪರಿಷತ್ನ ಎಲ್ಲ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತೇವೆ. ಕನ್ನಡ ಭವನ ನಿರ್ಮಾಣಕ್ಕೆ ಪಪಂ ಜಾಗ ಗುರುತಿಸಲು ಕ್ರಮ ವಹಿಸುತ್ತೇನೆ ಎಂದರು.
ತುಂಗಭದ್ರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಅರವಿಂದ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಈಶ್ವರಪ್ಪ ತುರಕಾಣಿ, ಸದಸ್ಯ ಶೆಟ್ಟಿ ಶಶಿಕಲಾ ನಿರ್ವಹಿಸಿದರು.