ಕಾರವಾರ: ಶಿರಸಿಗೆ ತಹಶೀಲ್ದಾರ್ ನೇಮಕ ಆಗಬೇಕೆಂದು ಆಗ್ರಹಿಸಿ ಸೋಮವಾರ ನಗರದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಮತ್ತು ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರವಾರ ಚಲೋ ಸಫಲವಾಗಿದ್ದು, ಜಿಲ್ಲಾಧಿಕಾರಿ ಶಿರಸಿಯ ಉಪ ತಹಶೀಲ್ದಾರ್ ಆಗಿದ್ದ ರಮೇಶ ಹೆಗಡೆ ಅವರನ್ನು, ಸೋಮವಾರದಿಂದಲೇ ಅನ್ವಯವಾಗುವಂತೆ ತಹಶೀಲ್ದಾರ್ ಗ್ರೇಡ್ 1 ಹೆಚ್ಚುವರಿ ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಶಿರಸಿಗೆ ಕಾಯಂ ತಹಶೀಲ್ದಾರ್ ಇಲ್ಲದೇ ಜನಸಾಮಾನ್ಯರಿಗೆ ಅತೀವ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ, ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮೇ19 ರಂದೇ ಶಿರಸಿಯಲ್ಲಿ ಸಹಾಯಕ ಆಯುಕ್ತರಿಗೆ ಮನವಿ ನೀಡಿ, ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಮತ್ತು ಸಮಯಾವಕಾಶವನ್ನೂ ನೀಡಿದ್ದರು. ಆದರೆ ಅದಾಗಿ ತಿಂಗಳು ಕಳೆದರೂ ತಹಶೀಲ್ದಾರ್ ನೇಮಕಾತಿ ವಿಚಾರ ನಡೆಯದ ಕಾರಣ, ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಸೋಮವಾರ ''''''''ಕಾರವಾರ ಚಲೋ'''''''' ಹೋರಾಟವನ್ನು ಕೈಗೆತ್ತಿಕೊಂಡಿದ್ದರು.ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ವಿಸ್ತಾರವಾಗಿರುವ ಶಿರಸಿ ತಾಲೂಕಿಗೆ ನಾಲ್ಕು ತಿಂಗಳಿಂದ ದಂಡಾಧಿಕಾರಿ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ, ಶಾಲಾ ಮಕ್ಕಳಿಗೆ, ಬಡವರಿಗೆ ಅತೀವ ತೊಂದರೆಯಾಗುತ್ತಿದೆ ಈ ಕೂಡಲೇ ಶಿರಸಿಗೆ ಕಾಯಂ ತಹಶೀಲ್ದಾರ್ ಅವರನ್ನು ನೇಮಕ ಮಾಡಲು ಸರಕಾರವನ್ನು ಅವರು ಒತ್ತಾಯಿಸಿದರು.
ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಬೆಲೆ ಇಲ್ಲದಂತಾಗಿದೆ. ಅತಿ ದೊಡ್ಡ ತಾಲೂಕು ಕ್ಷೇತ್ರವಾಗಿರುವ ಶಿರಸಿಗೆ ನಾಲ್ಕು ತಿಂಗಳಿಂದ ತಹಶೀಲ್ದಾರ್ ಇಲ್ಲದಿರುವುದು ಅತಿದೊಡ್ಡ ಸಮಸ್ಯೆಯಾಗಿದೆ. ಕೇವಲ ತಹಸೀಲ್ದಾರ್ ಮಾತ್ರ ಅಲ್ಲದೆ ಎಸಿಯು ಪ್ರಭಾರಿಯಾಗಿದ್ದು ಜನರಿಗೆ ವಾರದಲ್ಲಿ 2 ದಿನ ಮಾತ್ರ ಲಭ್ಯರಿರುತ್ತಾರೆ. ಇದರಿಂದಾಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಬೆಳಗ್ಗಿನಿಂದ ಸಂಜೆ ತನಕ ತಹಸೀಲ್ದಾರ್ ಕಚೇರಿ ಎದುರು ಕಾದು ಕೊನೆಗೂ ತಹಸೀಲ್ದಾರ್ ಭೇಟಿಯಾಗಲಾರದೆ ಸಮಸ್ಯೆಯನ್ನು ಪರಿಹರಿಸಿಕೊಳ್ಳದೆ ಕಣ್ಣೀರು ಹಾಕಿ ಹೋಗುವ ಸ್ಥಿತಿ ಇದೆ. ಈ ರೀತಿ ಜನರ ಕಣ್ಣಲ್ಲಿ ಕಣ್ಣೀರು ಹಾಕಿಸುವುದು ಶಾಸಕರಾದ ಭೀಮಣ್ಣನವರ ಸ್ಥಾನಕ್ಕೆ ಶೋಭೆ ತರುತ್ತದೆಯೇ ಎಂದು ಅವರು ಪ್ರಶ್ನಿಸಿದರು.ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಶಿರಸಿಗೆ ಕಾಯಂ ತಹಸೀಲ್ದಾರ ನೇಮಕಕ್ಕೆ ಆಗ್ರಹಿಸಿದರು.
ಮತ್ತೀಘಟ್ಟ ಗ್ರಾಪಂ ಸದಸ್ಯ ನಾರಾಯಣ ಹೆಗಡೆ, ತಹಸೀಲ್ದಾರ ಇಲ್ಲದೆ ಜನರು ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿದರು.ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರವಾರ ಚಲೋ ಹೋರಾಟದಲ್ಲಿ ಬಿಜೆಪಿ ಪ್ರಮುಖರಾದ ನಾರಾಯಣ ಹೆಗಡೆ ಮತ್ತೀಘಟ್ಟ, ಚಂದ್ರಶೇಖರ ಹೆಗಡೆ, ಮಂಜುನಾಥ ಪಾಟೀಲ್ ದಾಸನಕೊಪ್ಪ, ರವಿ ದೇವಾಡಿಗ, ನಿರ್ಮಲಾ ಶೆಟ್ಟಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.