ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಗುಣಪಡಿಸಲು ಹಾಗೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಪಾರ ಜ್ಞಾನ ಹೊಂದಿದ್ದು, ಹೀಗಾಗಿ ಬಹುಹಿಂದಿನಿಂದಲೂ ವೈದ್ಯರನ್ನು ದೈವ ಸಮಾನವೆಂದು ಪರಿಗಣಿಸುತ್ತಾ ಬರಲಾಗುತ್ತಿದೆ.
ಬ್ಯಾಡಗಿ: ವೈದ್ಯಕೀಯ ಅಭ್ಯಾಸದ ಪ್ರಯಾಣ ಬಹಳಷ್ಟು ಆಕರ್ಷಕವಾಗಿದ್ದು, ಸಮಾಜದ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡುವಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ. ಆಯುರ್ವೇದದಿಂದ ಇತ್ತೀಚಿನ ಅಲೋಪತಿ ಹಾಗೂ ಶಸ್ತ್ರಸಜ್ಜಿತ ವೈದ್ಯರವರೆಗೆ ದಿನದ 24 ಗಂಟೆಯೂ ನಿರಂತರ ಸೇವೆಯಲ್ಲಿರಲಿದ್ದಾರೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕಾಸ್ಪತ್ರೆ ಸಭಾಭವನದಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರವೀಲ್ ವತಿಯಿಂದ ವೈದ್ಯರ ದಿನಾಚರಣೆ ಹಾಗೂ ಲೆಕ್ಕಪರಿಶೋಧಕರ(ಚಾರ್ಟರ್ಡ್ ಅಕೌಂಟೆಂಟ್ಸ್) ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಗುಣಪಡಿಸಲು ಹಾಗೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಪಾರ ಜ್ಞಾನ ಹೊಂದಿದ್ದು, ಹೀಗಾಗಿ ಬಹುಹಿಂದಿನಿಂದಲೂ ವೈದ್ಯಾಧಿಕಾರಿಗಳನ್ನು ದೈವ ಸಮಾನವೆಂದು ಪರಿಗಣಿಸುತ್ತಾ ಬರಲಾಗುತ್ತಿದೆ ಎಂದರು.ಜನರ ಪ್ರಾಣ ರಕ್ಷಣೆ: ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳು ಅಧಿಕ ಹೊರೆಯಾಗಿದೆ. ಕೋವಿಡ್ನಂತಹ ಕಠಿಣ ಸವಾಲುಗಳ ಹೊರತಾಗಿಯೂ, ವೈದ್ಯರು ಸಮರ್ಪಣಾ ಮನೋಭಾವದೊಂದಿಗೆ ರೋಗಿಗಳಿಗೆ ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದು, ಲಕ್ಷಾಂತರ ಜನರ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಸಾರ್ವ ಜನಿಕರು ವೈದ್ಯರ ಜತೆ ಸಂಯಮದಿಂದ ನಡೆದುಕೊಳ್ಳಬೇಕಿದ್ದು, ಅವರನ್ನು ಗೌರವಿಸುವ ಕೆಲಸ ಎಲ್ಲರಿಂದಾಗಬೇಕಾಗಿದೆ ಎಂದರು.ಆರೋಗ್ಯ ವ್ಯಾಪಾರೀಕರಣ: ಮಾಲತೇಶ ಅರಳಿಮಟ್ಟಿ ಮಾತನಾಡಿ, ವೈದ್ಯಕೀಯ ಅಭ್ಯಾಸದ ಬೆಳವಣಿಗೆ ವೇಗವಾಗಿ ನಡೆಯುತ್ತಿದ್ದು, ವೈದ್ಯರ ಪಾತ್ರವೂ ತೀವ್ರ ಬದಲಾವಣೆ ಕಂಡಿದೆ. ವೈದ್ಯರ ಜ್ಞಾನ ಮತ್ತು ಕೌಶಲ್ಯಗಳಿಗೆ ವೈದ್ಯಕೀಯ ಕ್ಷೇತ್ರಗಳಲ್ಲಿ ಮನ್ನಣೆ ಸಿಗುತ್ತಿದೆ, ಅದರ ಜತೆಗೆ ಇತ್ತೀಚೆಗೆ ಆರೋಗ್ಯ ವ್ಯಾಪಾರೀಕರಣವಾಗುತ್ತಿರುವುದು ದುರದೃಷ್ಟಕರ. ಇದರಿಂದ ವೈದ್ಯರು ಮತ್ತು ರೋಗಿಗಳ ನಡುವಿನ ಉತ್ತಮ ಸಂಬಂಧ ಹಾಳಾಗುತ್ತಿವೆ. ಪ್ರತಿವರ್ಷ ರೋಟರಿ ಸಂಸ್ಥೆ ವತಿಯಿಂದ ವೈದ್ಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಡಾ. ಚೇತನ, ಡಾ. ಕಾಂತೇಶ ಭಜಂತ್ರಿ, ಡಾ. ಚೇತನ ಹೆಡಿಯಾಲ ಸೇರಿದಂತೆ ರೋಟರಿ ಸಂಸ್ಥೆಯ ಎಸ್.ಎಂ. ಬೂದಿಹಾಳಮಠ ನಿರಂಜನ ಶೆಟ್ಟಿಹಳ್ಳಿ, ಲೆಕ್ಕಪರಿಶೋಧಕ ವೈಭವ ವಾಳ್ವೇಕರ, ಜೆ.ಎಚ್. ಪಾಟೀಲ, ಕಿರಣ ಗೋಕಾವಿ, ರೋಟರಿ ಕ್ಲಬ್ಬಿನ ಸದಸ್ಯ ವಿಶ್ವನಾಥ ಅಂಕಲಕೋಟಿ, ಸತೀಶ ಅಗಡಿ, ಪವಾಡಪ್ಪ ಆಚನೂರ, ಆನಂದಗೌಡ ಸೊರಟೂರ, ಪರಶುರಾಮ ಮೇಲಗಿರಿ, ಇನ್ನರವೀಲ್ನ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಪ್ರತಿಭಾ ಮೇಲಗಿರಿ, ಲಕ್ಷ್ಮೀ ಉಪ್ಪಾರ, ಪುಷ್ಪ ಇಂಡಿಮಠ, ವಿಜಯಲಕ್ಷ್ಮೀ ಗೌಡರ, ಸಂಧ್ಯಾರಾಣಿ ದೇಶಪಾಂಡೆ, ವಿಜಯಲಕ್ಷ್ಮೀ ಯಾದವಾಡ, ಶೋಭಾ ಅಂಗಡಿ, ವಿಜಯಲಕ್ಷ್ಮೀ ಪಾಟೀಲ ಸೇರಿದಂತೆ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.