ಅದ್ದೂರಿ ಹನುಮ ಜಯಂತಿ ಮೆರವಣಿಗೆ

KannadaprabhaNewsNetwork |  
Published : Dec 05, 2025, 01:30 AM IST
57 | Kannada Prabha

ಸಾರಾಂಶ

ಶ್ರೀರಾಮ, ಸೀತಾಮಾತೆ, ಲಕ್ಷ್ಮಣರನ್ನೊಳಗೊಂಡು ಆಂಜನೇಯನ ಮೂರ್ತಿಗೆ ಸ್ವಾಮಿಗಳಿಂದ ಪೂಜೆ

ಕನ್ನಡಪ್ರಭ ವಾರ್ತೆ ಹುಣಸೂರು

ಹನುಮಂತೋತ್ಸವ ಸಮಿತಿ ಮತ್ತು ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ನಗರದಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಸಮಾರಂಭ 25 ಸಾವಿರಕ್ಕೂ ಹೆಚ್ಚು ಹನುಮ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಪಟ್ಟಣಾದ್ಯಂತ ಎಲ್ಲೆಲ್ಲೂ ವಾಯುಪುತ್ರನ ಹವಾ.. ರಸ್ತೆಗಳಲ್ಲಿ ರಾರಾಜಿಸಿದ ಕೇಸರಿ ಬಾವುಟ..ಎಲ್ಲೆಲ್ಲೂ ಹನುಮನಿಗೆ ಮೊಳಗಿದ ಉದ್ಘೋಷ..ನಿರೀಕ್ಷೆಗೂ ಮೀರಿದ ಜನಸಾಗರದ ಮಧ್ಯೆ..ವಾಯುಪುತ್ರನ ಕುರಿತಾದ ಹಾಡಿಗೆ ಯುವಸಮೂಹ ಹುಚ್ಚೆದ್ದು ಕುಣಿಯಿತು. 25 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಒಟ್ಟಾಗಿ ಸೇರಿ ಇಡೀ ನಗರವನ್ನು ಕೇಸರಿಮಯವಾಗಿಸಿದರು.

ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ

ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ಬೆಳಗ್ಗೆ 11.30ರ ವೇಳೆಗೆ ಸಂಪ್ರದಾಯದಂತೆ ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶೀ ನಟರಾಜ ಸ್ವಾಮೀಜಿ ಮತ್ತು ಮಾದಳ್ಳಿ ಉಕ್ಕಿನಕಂತ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಗಳ ಸಾನಿಧ್ಯದಲ್ಲಿ ನಂದಿಧ್ವಜಕ್ಕೆ ಗಣ್ಯರು ಪೂಜೆ ಸಲ್ಲಿಸಿದರು. ನಂತರ ಶ್ರೀರಾಮ, ಸೀತಾಮಾತೆ, ಲಕ್ಷ್ಮಣರನ್ನೊಳಗೊಂಡು ಆಂಜನೇಯನ ಮೂರ್ತಿಗೆ ಸ್ವಾಮಿಗಳಿಂದ ಪೂಜೆ ಸಲ್ಲಿಸಿದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ. ಹರೀಶ್‌ ಗೌಡ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮತ್ತಿತರ ಗಣ್ಯರು ನಂತರ ಎತ್ತರದ ವಾಹನದಲ್ಲಿ ಎಲ್ಲ ಗಣ್ಯರೂ ನಿಂತು ದೇವರ ವಿಗ್ರಹಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ಆರಂಭಗೊಂಡಿತು.

ತದನಂತರ ಆಗಮಿಸಿದ ಧರ್ಮಜ್ಯೋತಿಗೆ ಗಣ್ಯರು ನಮನ ಸಲ್ಲಿಸಿದರು. ಆನಂತರ ವಿವಿಧ ಗರಡಿಮನೆಗಳಿಂದ ಆಗಮಿಸಿದ್ದ ಆಂಜನೇಯಸ್ವಾಮಿ ವಿಗ್ರಹಗಳು, ದತ್ತಾತ್ರೇಯ ಸ್ವಾಮಿಯ ವಿಗ್ರಹಗಳಿಗೆ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್. ದಾಸ್, ಪ್ರಧಾನ ಕಾರ್ಯದರ್ಶಿ ಅನಿಲ್, ಖಜಾಂಚಿ ಸಂಪತ್‌ ಕುಮಾರ್, ಮುಖಂಡರಾದ ಬಿ.ಎಸ್. ಯೋಗಾನಂದಕುಮಾರ್, ಗಣೇಶ್ ಕುಮಾರಸ್ವಾಮಿ, ಗೋವಿಂದೇಗೌಡ, ಹೊನ್ನಪ್ಪರಾವ್ ಕಾಳಿಂಗೆ, ಹರವೆ ಶ್ರೀಧರ್, ಬಿಜೆಪಿ ಅಧ್ಯಕ್ಷ ಕಾಂತರಾಜು, ಸತೀಶ್ ಪಾಪಣ್ಣ, ಎಚ್.ವೈ.ಮಹದೇವ್, ಕೃಷ್ಣರಾಜ ಗುಪ್ತ, ದೇವರಾಜ್, ಪ್ರಭಾರ ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಜೆ.ಮಂಜುನಾಥ್, ಪೌರಾಯುಕ್ತೆ ಕೆ.ಮಾನಸ ಇದ್ದರು.

ದಾರಿಯುದ್ದಕ್ಕೂ ಕೇಸರಿ ಕಲರವ

ರಂಗನಾಥ ಬಡಾವಣೆಯಿಂದ ಹೊರಟ ಮೆರವಣಿಗೆ ಕಲ್ಕುಣಿಕೆ ವೃತ್ತವನ್ನು ಹಾದು, ಶಬರಿಪ್ರಸಾದ್, ಸೇತುವೆಯ ಮೂಲಕ ಸಂವಿಧಾನ ವೃತ್ತವನ್ನು ತಲುಪಿತು. ಕಲ್ಕುಣಿಕೆ ವೃತ್ತವನ್ನು ತಲುಪುವ ವೇಳೆಗೆ ಪಟ್ಟಣದ ನಾಲ್ಕು ದಿಕ್ಕುಗಳಿಂದ ಹನುಮ ಭಕ್ತರು, ಗ್ರಾಮೀಣ ಭಾಗದಿಂದಲೂ ಯುವಕರ ತಂಡೋಪತಂಡವಾಗಿ ಬಂದು ಮೆರವಣಿಗೆಯಲ್ಲಿ ಸೇರಿಕೊಳ್ಳಲು ಆರಂಭಿಸಿತು. ನಾವೆಲ್ಲೆ ಹಿಂದೂ ನಾವೆಲ್ಲ ಒಂದು, ಜಗ್ಗೋದಿಲ್ಲ ಬಗ್ಗೋದಿಲ್ಲ, ವೀರ ಹನುಮನ ಭಕ್ತರು ನಾವು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಎಸ್ ಜೆ ರಸ್ತೆಯನ್ನು ಹಾದು ಜೆಎಲ್‌ಬಿ ರಸ್ತೆ ತಲುಪುವ ವೇಳೆ ಸಂಜೆ ನಾಲ್ಕರ ಸಮಯದ ದಾಟಿತ್ತು.

ಸಂಜೆ ನಾಲ್ಕರ ವೇಳೆಗೆ ಹೈವೋಲ್ಠೇಜ್ ರಸ್ತೆಯಾದ ಬಜಾರ್ ರಸ್ತೆಯಲ್ಲಿ ಮಾರುತಿ ಭಕ್ತರು ಉದ್ಘೋಷಗಳನ್ನು ಮೊಳಗಿಸಿದರು. ಪೊಲೀಸರು ಮೆರವಣಿಗೆ ಎಲ್ಲೂ ನಿಲ್ಲದಂತೆ ಕ್ರಮವಹಿಸಿ ಶೀಘ್ರ ಮುನ್ನಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಮೆರವಣಿಗೆಯು ಅಕ್ಷಯ ಭಂಡಾರ್ ಮೂಲಕ, ಬಸ್ ನಿಲ್ದಾಣದ ಹಾದು ಮೈಸೂರು-ಹುಣಸೂರು ಮುಖ್ಯರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಆವರಣ ತಲುಪುವ ಮೂಲಕ ಮೆರವಣಿಗೆ ಶಾಂತಿಯುತವಾಗಿ ಸಂಪನ್ನಗೊಂಡಿತು.

ತೆರೆದ ವಾಹನದಲ್ಲಿ ಜನಪ್ರತಿನಿಧಿಗಳು

ಮೆರವಣಿಗೆ ಚಾಲನೆ ನೀಡಿದ ನಂತರ ಗಣ್ಯರು ಮತ್ತು ಮಠಾಧೀಶರು ತೆರದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ನೆರೆದಿದ್ದ ಭಕ್ತಗಣಕ್ಕೆ ಕೈಬೀಸುತ್ತಲೇ ಉತ್ಸವದ ಸಂಭ್ರಮಾಚರಣೆಯನ್ನು ಮಾಡಿಕೊಂಡರು. ಶಾಸಕ ಜಿ.ಡಿ. ಹರೀಶ್‌ ಗೌಡ ಮೆರವಣಿಗೆ ಅಂತ್ಯದವರೆಗೂ ಇದ್ದರು.-- ಬಾಕ್ಸ್‌--1-- ನಿರೀಕ್ಷೆಗೂ ಮೀರಿದ ಭಕ್ತಸಾಗರ --ಮಧ್ಯಾಹ್ನ 2 ಗಂಟೆಯಾದರೂ ಮೆರವಣಿಗೆಗೆ ಸೇರಿಕೊಳ್ಳುವ ಉದ್ದೇಶದಿಂದ ಗ್ರಾಮಾಂತರ ಭಾಗಗಳಿಂದ ಯುವಕರ ಪಡೆ ದಂಡುದಂಡಾಗಿ ಬರುತ್ತಿದ್ದು, ಕಾಣಬರುತ್ತಿತ್ತು. ಪಟ್ಟಣದ ಗಡಿಭಾಗಗಳಲ್ಲಿ 6 ಕಡೆಗಳಲ್ಲಿ ಪೊಲೀಸರು ಚೆಕ್‌ ಪೋಸ್ಟ್ ನಿರ್ಮಿಸಿದ್ದರು. 1500 ಪೊಲೀಸರು ಶಾಂತಿ ಭಂಗವಾದಂತೆ ಕರ್ತವ್ಯ ನಿರ್ವಹಿಸಿದರು. ಪಟ್ಟಣದೊಳಗೆ ಬರುತ್ತಿದ್ದ ಯುವಕರನ್ನು ತಡೆದು ವಿಚಾರಿಸುತ್ತಿದ್ದುದು ಕಂಡುಬಂತು. 10 ಸಾವಿರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಆಯೋಜಕರು ಮತ್ತು ಪೊಲೀಸರು ಹೊಂದಿದ್ದರು. ಆದರೆ ಎಲ್ಲರ ನಿರೀಕ್ಷೆ ಮೀರಿ 25 ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲಿ ಪಾಲ್ಗೊಂಡು ಮೆರವಣಿಗೆಯನ್ನು ಅಂದಗಾಣಿಸಿದ್ದು ಎಲ್ಲರ ಮೆಚ್ಚುಗಗೆ ಪಾತ್ರವಾಯಿತು.--ಬಾಕ್ಸ್-- 2---- ಶ್ರೀರಾಮಸ್ಮರಣೆ ಮೊಳಗಿತು --ಮೆರವಣಿಗೆಯಲ್ಲಿ 10ಕ್ಕೂ ಹೆಚ್ಚು ಶ್ರೀ ಆಂಜನೇಯನ ಮೂರ್ತಿಗಳು ಪಾಲ್ಗೊಂಡಿದ್ದವು. ಪಂಚಲೋಹದಿಂದ 5 ಅಡಿ ಎತ್ತರದ ತಯಾರಿಸಿದ ಪವನಸುತನ ಮೂರ್ತಿ, 15 ಅಡಿ ಎತ್ರದ ಬೃಹತ್ ಮೂರ್ತಿಗಳು ಎಲ್ಲರಲ್ಲೂ ಭಕ್ತಿಯ ಪರಾಕಾಷ್ಠೆಯನ್ನು ತಲುಪುವಂತೆ ಮಾಡಿದವು ಶಿವಜ್ಯೋತಿ ನಗರದ ಗರಡಿಮನೆ, ಕಲ್ಕುಣಿಕೆ ನಾಯಕರ ಗರಡಿಮನೆ, ಮುತ್ತುಮಾರಮ್ಮ ಗರಡಿಮನೆಯ ಆಂಜನೇಯಮೂರ್ತಿಗಳು, ದತ್ತಾತ್ರೇಯ ಮೂರ್ತಿ ಮುಂತಾದವುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕಲ್ಕುಣಿಕೆ ಶ್ರೀರಾಮ ಹುಣಸೂರು ಈವೆಂಟ್ಸ್ ವತಿಯಿಂದ ಇತ್ತೀಚೆಗೆ ಅಯೋಧ್ಯೆಯಲ್ಲಿ ಸ್ಥಾಪನೆಗೊಂಡ ಧರ್ಮಧ್ವಜದ ಸ್ತಬ್ಧಚಿತ್ರ ನೋಡುಗರನ್ನು ಆಕರ್ಷಿಸಿತು. ಅಲ್ಲದೇ ಅಂಜನಾದ್ರಿಬೆಟ್ಟದಲ್ಲಿ ವಿರಾಜಮಾನನಾದ ಆಂಜನೇಯನ ಸ್ಥಬ್ಧಚಿತ್ರವು ಭಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಮೆರವಣಿಗೆಯಲ್ಲಿ ಕೇರಳದ ಚಂಡೆವಾದನ, ಗಾವಡಗೆರೆಯ ಯುವಕತಂಡದಿಂದ ತಮಟೆವಾದನ, ಪಟ್ಟಣದ ಸರಸ್ವತಿಪುರಂನ ಡೊಳ್ಳುಕುಣಿತ, ವೀರಗಾಸೆಕುಣಿತ, ಕೀಲುಕುದುರೆಗಳು, ನವಿಲುನೃತ್ಯ, ಮಂಗಳವಾದ್ಯ ಮೆರವಣಿಗೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಸಫಲವಾದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತದ ವಿರುದ್ಧ ಅಂಗವಿಕಲರ ಆಕ್ರೋಶ
ಮಾದಕ ದ್ರವ್ಯ ಸೇವನೆ ಬದುಕಿನ ವಿನಾಶಕ್ಕೆ ದಾರಿ; ಮೋಹನ್ ರಾಜಣ್ಣ