ಶಿಗ್ಗಾಂವಿ: ಸಮಾಜದಲ್ಲಿ ನಡೆಯುವ ದಿನನಿತ್ಯದ ನೈಜ ಘಟನೆ ಆಧಾರಿತ ಸುದ್ದಿಗಳನ್ನು ಹಾಗೂ ಅಂದಿನ ವಿಶೇಷತೆಗಳನ್ನು ಒಳಗೊಂಡಿರುವ ದಿನಪತ್ರಿಕೆಗಳನ್ನು ಓದುಗರ ಮನೆಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ನಿಜಕ್ಕೂ ಮೆಚ್ಚುವಂತಹದು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಹುಡೇದಗೌಡ್ರ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಮೇಶ ಹರಿಜನ್ ಮಾತನಾಡಿ, ಪ್ರತಿ ನಿತ್ಯವೂ ಸೂರ್ಯೋದಯಕ್ಕೂ ಮುನ್ನವೇ ಎದ್ದು, ಪತ್ರಿಕೆ ಬರುವುದನ್ನೇ ಕಾಯುತ್ತ ಪತ್ರಿಕೆ ಬಂಡಲ್ಗಳನ್ನು ಸರಿಯಾದ ರೀತಿಯಲ್ಲಿ ತಾವುಗಳು ತಂದ ಸೈಕಲ್ ಮತ್ತು ಬೈಕ್ಗಳಲ್ಲಿ ಜೋಡಿಸಿಕೊಂಡು ಗಲ್ಲಿ, ಓಣಿ, ಗುಡ್ಡಗಳಲ್ಲಿ ಸಂಚರಿಸಿ ಓದುಗರಿಗೆ ಪತ್ರಿಕೆಗಳನ್ನು ವಿತರಿಸುವ ಕಾರ್ಯ ಮಾಡುತ್ತಿರುವ ಪತ್ರಿಕಾ ವಿತರಕರಿಗೆ ಧನ್ಯವಾದಗಳು. ಸರ್ಕಾರಿ ನೌಕರ ಸಂಘ ಹಾಗೂ ಕ ಸಾ ಪ ಪತ್ರಿಕಾ ವಿತರಕರ ಬೆನ್ನಿಗೆ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಹಾಗೂ ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವೀರುಪಾಕ್ಷಪ್ಪ ನೀರಲಗಿ ಮಾತನಾಡಿದರು.ಈ ಸಂದರ್ಭದಲ್ಲಿ ಶಿದ್ರಾಮಗೌಡ ಮೇಳ್ಳಾಗಟ್ಟಿ, ಸುರೇಶ ಯಲಿಗಾರ, ರವಿ ಉಡುಪಿ, ಶಿವಕುಮಾರ ಕೊಟಗಿಮಠ, ಪ್ರಕಾಶ ಹಾದಿಮನಿ, ಹನುಮಂತ ಜವಳಗಟ್ಟಿ, ಮುತ್ತಪ್ಪ ಬಂಡಿವಡ್ಡರ, ಗಿರೀಶ ಕಂಕನವಾಡ, ಪ್ರೀತಮ್ ಪವಾರ, ನಿರಂಜನ, ಸೃಜನ ಬಾಡ, ಪ್ರವೀಣ, ವಿಜಯ, ದರ್ಶನ ಯಲಿಗಾರ ಸೇರಿದಂತೆ ಹಲವಾರು ಇದ್ದರು.