ಶ್ರೀ ಲೋಕದಮ್ಮ, ಶ್ರೀ ಮುದಿಯಮ್ಮದೇವಿ ಹಾಗೂ ಶ್ರೀ ಒಂಟಿಕಲ್ ಭೂತಪ್ಪ ದೇವರುಗಳ ನೂತನ ವಿಗ್ರಹಗಳ ಅಷ್ಟಬಂಧ ಕಾರ್ಯಕ್ರಮ
ಭಗವಂತ ನೆಲೆಸಿರುವ ದೇವಾಲಯಗಳು ಮನುಷ್ಯನ ಮಾನಸಿಕ ಒತ್ತಡ ನಿವಾರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾತ್ವಿಕ ಜೀವನದತ್ತ ಕೊಂಡೊಯ್ಯುವ ಪುಣ್ಯ ಕ್ಷೇತ್ರಗಳು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.ತಾಲೂಕಿನ ಉಂಡೇದಾಸರ ಹಳ್ಳಿಯಲ್ಲಿ ಶುಕ್ರವಾರ ನಡೆದ ಶ್ರೀ ಲೋಕದಮ್ಮ, ಶ್ರೀ ಮುದಿಯಮ್ಮದೇವಿ ಹಾಗೂ ಶ್ರೀ ಒಂಟಿಕಲ್ ಭೂತಪ್ಪ ದೇವರ ನೂತನ ವಿಗ್ರಹಗಳ ಅಷ್ಟಬಂಧ, ಪ್ರಾಣ ಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶರೋಹಣ ಮಹೋತ್ಸವದಲ್ಲಿ ಮಾತನಾಡಿದರು.ಭಗವಂತನ ಗರ್ಭಗುಡಿಗೆ ಅರ್ಪಿಸುವ ಪೂಜಾ ಸಾಮಾಗ್ರಿಗಳು ಅಭಿಷೇಕದ ಬಳಿಕ ಪ್ರಸಾದವಾದಂತೆ, ಮಾನವ ಬದುಕಿನ ಜಂಜಾಟ ಬದಿಗಿರಿಸಿ ಮುಕ್ತ ಮನಸ್ಸಿನಿಂದ ದೇಗುಲಕ್ಕೆ ತೆರಳಿ ಹಿಂತಿರುಗಿದರೆ ಸಂಸ್ಕಾರವಂತ, ಮಾನವತಾವದಿ ಹಾಗೂ ಮನುಷ್ಯತ್ವ ಹೊಂದುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ದೇವಾಲಯಗಳನ್ನು ಜೀರ್ಣೋದ್ಧಾರ ಅಥವಾ ನೂತನವಾಗಿ ನಿರ್ಮಿಸಿದರೆ ಸಾಲದು, ನಿರಂತರ ಪೂಜಾ ಕೈಂಕಾರ್ಯ ಕೈಗೊಳ್ಳುವುದು ಅತಿ ಮುಖ್ಯ. ಹೀಗಾಗಿ ಭಕ್ತಾಧಿಗಳು ದೇವಾಲಯಕ್ಕೆ ತೆರಳಿ ಕೆಲ ಕಾಲ ಪ್ರಾರ್ಥನೆ ಸಲ್ಲಿಸಿ ಹಿಂತಿರುಗಿದರೆ ಮನಸ್ಸಿನಲ್ಲಿ ಶಾಂತಿ ಲಭಿಸಲು ಸಾಧ್ಯ ಎಂಬುದು ಅರಿಯಬೇಕು ಎಂದರು. ಜಗತ್ತಿನಲ್ಲಿ ಮಾನವ ಜನ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡುವ ಸಂತ ಶ್ರೇಷ್ಟರು, ದಾರ್ಶನಿಕರ ಆಶಯದಂತೆ ಬದುಕುವುದೇ ನೈಜ ಸತ್ಯ ಎಂದ ಅವರು, ಹಿರಿಯರು, ಕಿರಿಯರಾಗಲೀ ಸನ್ನಡತೆ, ಸದ್ಭಾವನೆ ಹಾಗೂ ಸಹೋದರತೆ ಸಂಕೇತವನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.ಶ್ರೀ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆರ್ಶೀಚನ ನೀಡಿ, ಆಧುನಿಕ ಭರದಲ್ಲಿ ಭಾರತೀಯ ಪರಂಪರೆ, ಪೂಜಾ ಸಂಸ್ಕೃತಿ ಹಾಗೂ ಜೀವನ ಪದ್ಧತಿ ಬದಲಾಗಿ ಸನಾತನ ಧರ್ಮ ಕ್ಷೀಣಿಸುತ್ತಿದೆ. ವರ್ತಮಾನದಲ್ಲಿ ಬದುಕಲು ಸನಾತನ ಸಂಸ್ಕೃತಿ ಬಹಳ ಮುಖ್ಯ. ಧರ್ಮ ಬೆಳೆಸಿ ಉಳಿಸುವುದು ಯುವ ಸಮೂಹದ ಮೇಲಿದೆ ಎಂದು ಹೇಳಿದರು.ಭಾರತೀಯ ಸನಾತನ ಸಂಸ್ಕೃತಿ ಪ್ರಪಂಚದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ಆಸೆ, ಆಕಾಂಕ್ಷೆಗಳನ್ನು ಧರ್ಮವನ್ನು ಮತಾಂತರಿಸಲು ಪ್ರೇರೇಪಿಸುತ್ತಾರೆ. ಈ ಬಗ್ಗೆ ಸನಾತನಿಗಳು ಎಚ್ಚೆತ್ತು ಕೊಳ್ಳಬೇಕು. ಸೃಷ್ಟಿಕರ್ತನ ವಿರುದ್ಧ ನಡೆಯದೇ ಇಡೀ ಮನುಕುಲಕ್ಕೆ ಜ್ಞಾನ ನೀಡುವ ಸನಾತನ ಸಂಸ್ಕೃತಿ ಚಿರಋಣಿಯಾಗಬೇಕು ಎಂದು ತಿಳಿಸಿದರು.ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಣ್ಣ ಮಾತನಾಡಿ, ಮುಂಜಾನೆ ನೂತನ ವಿಗ್ರಹಗಳ ಅಷ್ಠಬಂಧ, ಪ್ರಾಣ ಪ್ರತಿಷ್ಟಾಪನೆಯೊಂದಿಗೆ ಹೋಮ, ಸಪ್ತಮಾತೃ ದೇವತಾ ಹೋಮಗಳ ನಂತರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಗಂಗೆ ಭಾವಿಯಿಂದ ಪೂರ್ಣಕುಂಭಾ ಪೂಜೆ ಯೊಂದಿಗೆ ಗ್ರಾಮದ ಬೀದಿಗಳಲ್ಲಿ ಸಾಗಿ ದೇವಾಲಯ ಪ್ರವೇಶಿಸಿ ಅಭಿಷೇಕ ನಡೆಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಸದಸ್ಯೆ ರೂಪ ಕುಮಾರ್, ಕಾಂಗ್ರೆಸ್ ನಗರ ಉಪಾಧ್ಯಕ್ಷ ವರದರಾಜ್, ಮುಖಂಡರಾದ ತನೋಜ್ನಾಯ್ಡು, ಸೋಮಶೇಖರ್, ದೇವಾಲಯ ಸಮಿತಿ ಖಜಾಂಚಿ ಪುಟ್ಟಸ್ವಾಮಿ, ಸದಸ್ಯರಾದ ಬಸವರಾಜಪ್ಪ, ನಾಗರಾಜ್, ಈರಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.8 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಉಂಡೇದಾಸರಹಳ್ಳಿಯಲ್ಲಿ ಶುಕ್ರವಾರ ನಡೆದ ಶ್ರೀ ಲೋಕದಮ್ಮ, ಶ್ರೀ ಮುದಿಯಮ್ಮದೇವಿಯ ನೂತನ ವಿಗ್ರಹಗಳ ಅಷ್ಟಬಂಧ, ಪ್ರಾಣ ಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶೋಹಣ ಮಹೋತ್ಸವದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿದರು.