ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಬಾಳೆಬೈಲ್ನ ಗ್ರೀನ್ ಎಕರೇಸ್ ಲೇಔಟ್ನಲ್ಲಿ ಕಳೆದ 20 ದಿನಗಳ ಹಿಂದೆ ಭಾರಿ ಗಾಳಿ ಮಳೆಗೆ ಮಂದಾರ ಹಾಗೂ ದೇವದಾರು ಮರ ಧಾರಾಶಾಹಿಯಾಗಿತ್ತು. ರಸ್ತೆಬದಿ ಬಿದ್ದ ಮರವನ್ನು ಸಾಮಾನ್ಯವಾಗಿ ಕಡಿದು ತೆರವುಗೊಳಿಸಿದರೆ, ಹೋಂಗಾರ್ಡ್ಸ್ ಕಮಾಂಡೆಂಟ್ ಡಾ.ಮುರಲೀಮೋಹನ ಚೂಂತಾರು ಅದೇ ಸ್ಥಳದಲ್ಲಿ ಮರಗಳನ್ನು ಮರು ಸ್ಥಾಪಿಸಲು ನಿರ್ಧರಿಸಿದರು.
ಸಸ್ಯಪ್ರೇಮಿ ಮಾಧವ ಉಳ್ಳಾಲ್ ಮಾರ್ಗದರ್ಶನದಲ್ಲಿ ಭಾನುವಾರ ಹೋಂಗಾರ್ಡ್ಸ್ ನೆರವಿನಲ್ಲಿ ಬೇರು ಸಹಿತ ಧಾರಾಶಾಹಿಯಾಗಿದ್ದ ಮಂದಾರ ಮರವನ್ನು ಅದೇ ಜಾಗದಲ್ಲಿ ಮರುಸ್ಥಾಪಿಸುವ ಕಾರ್ಯ ನಡೆಸಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ಅವಿರತ ಶ್ರಮದಿಂದ ಮರವನ್ನು ಯಶಸ್ವಿಯಾಗಿ ಮರುಸ್ಥಾಪಿಸಲಾಯಿತು.ಸುಮಾರು 8-10 ವರ್ಷದ ಮರ ಇದಾಗಿದ್ದು, ಮರುಸ್ಥಾಪಿಸಿದ ಹಿನ್ನೆಲೆಯಲ್ಲಿ ಸುಮಾರು 48 ದಿನಗಳಲ್ಲಿ ಮತ್ತೆ ಚಿಗುರಿ ಕೆಲವೇ ದಿನಗಳಲ್ಲಿ ಎಂದಿನಂತೆ ಕಂಗೊಳಿಸಲಿದೆ ಎಂದು ಮಾಧವ ಉಳ್ಳಾಲ್ ವಿವರ ನೀಡಿದರು.
ಹೋಂಗಾರ್ಡ್ಸ್ ವತಿಯಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಿದ್ದ ಮರವನ್ನು ಅದ್ದೇ ಮರು ಸ್ಥಾಪಿಸಿದ್ದು ಇದೇ ಪ್ರಥಮ. ಪರಿಸರ ಸಂರಕ್ಷಣೆ ದಿಶೆಯಲ್ಲಿ ಹೋಂಗಾರ್ಡ್ಸ್ ತಂಡ ಕೂಡ ಕೈಜೋಡಿಸುತ್ತಿದೆ ಎಂದು ಅವರು ಹೇಳಿದರು.