- ಹೊನ್ನಾಳಿಯಲ್ಲಿ ಸಾಹಿತ್ಯೋತ್ಸವ-ದತ್ತಿ ಉಪನ್ಯಾಸ । ಬದುಕಿನಪ್ರಜ್ಞೆ ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶರಣರು, ವಚನಕಾರರು ರಚಿಸಿದ ವಚನಗಳ ಸಾಹಿತ್ಯದಲ್ಲಿ ಮನುಷ್ಯನ ಜೀವನಮೌಲ್ಯಗಳು ಅಡಗಿವೆ. ಕಾಲೇಜು ವಿದ್ಯಾರ್ಥಿಗಳು ವಚನ ಸಾಹಿತ್ಯದ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಶ್ತಿ ಪುರಸ್ಕೃತ. ಎಸ್.ಟಿ. ಶಾಂತಗಂಗಾಧರ ದಾವಣಗೆರೆ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಶ್ರೀ ಚನ್ನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಶಾಲಾ- ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.
ಶ್ರೀ ಚನ್ನೇಶ್ವರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕವಿರಾಜ್ ಮಾತನಾಡಿ, ಪಿ.ಎಂ. ಸಿದ್ದಯ್ಯ ಅವರ ಬದುಕಿನಪ್ರಜ್ಞೆ ಎಂಬ ಕೃತಿಯಲ್ಲಿ ಬರುವ ಆಂಶಗಳು ಇಂದಿನ ಯುವಪೀಳಿಗೆಗೆ ನೀತಿ ಮತ್ತು ಅರಿವು ಮೂಡಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಪಿ.ಎಂ. ಸಿದ್ದಯ್ಯ ತಮ್ಮ ಕೃತಿ ಬದುಕಿನ ಪ್ರಜ್ಞೆ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಿ.ಜಯಪ್ಪ ಅವರಿಗೆ ತಾಲೂಕು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ, ಕಸಾಪ ಉಪಾಧ್ಯಕ್ಷ ಗೋವಿಂದಪ್ಪ, ಗೌರವ ಕಾರ್ಯದರ್ಶಿ ಕೆ.ಶೇಖರಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ, ಸದಸ್ಯರಾದ ಶಾರದ ಕಣಗೊಟಗಿ, ನಿಜಲಿಂಗಪ್ಪ ಇದ್ದರು. ದತ್ತಿ ದಾನಿಗಳಾದ ಕೋಟೆಹಾಳ ಎಚ್.ಎಸ್. ಬಸವರಾಜ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
- - -
ಹೊನ್ನಾಳಿಯಲ್ಲಿ ಪಿ.ಎಂ.ಸಿದ್ದಯ್ಯ ರಚಿಸಿದ “ಬದುಕಿನ ಪ್ರಜ್ಞೆ ಕೃತಿ ಬಿಡುಗಡೆಗೊಳಿಸಲಾಯಿತು.