ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿನೇಕಾರಿಕೆ ಉದ್ಯಮವೇ ಇಲ್ಲದ ಪ್ರದೇಶಗಳಲ್ಲಿ ಸಾವಿರಾರು ಎಕರೆಯಲ್ಲಿ ಜವಳಿ ಪಾರ್ಕ್ ನಿರ್ಮಿಸುವಲ್ಲಿ ಉತ್ಸಾಹ ತೋರುತ್ತಿರುವ ರಾಜ್ಯ ಸರ್ಕಾರ, ಸಂಪೂರ್ಣ ನೇಕಾರರಿಂದಲೇ ತುಂಬಿರುವ ರಬಕವಿ- ಬನಹಟ್ಟಿ ತಾಲೂಕಿನತ್ತ ಚಿತ್ತವೇ ಹರಿಸುತ್ತಿಲ್ಲ. ಈ ಅವಳಿ ಪ್ರದೇಶದಲ್ಲಿ ಸಂಪೂರ್ಣವಾಗಿ ಕೋಮಾದಲ್ಲಿರುವ ಉದ್ಯಮಕ್ಕೆ ಜೀವ ತುಂಬಲು ನೆರವಾಗುವ ಜವಳಿ ಪಾರ್ಕ್, ಕೋನ್ ಡೈಯಿಂಗ್ ಕೇಂದ್ರಗಳಿಗೆ ಅನುದಾನ ನೀಡದೇ ಜವಳಿ ಇಲಾಖೆ ಬೇಜವಾಬ್ದಾರಿ ತೋರುತ್ತಿದೆ. ಸಾಕಷ್ಟು ಜಾಗ ಇಲಾಖೆ ಸ್ವಾಧೀನದಲ್ಲಿದ್ದರೂ ಇನ್ನೂವರೆಗೂ ನೇಕಾರರ ಅಭಿವೃದ್ಧಿಗೆ ಯಾವುದೇ ಕಾರ್ಯ ಮಾತ್ರ ಕೈಗೊಂಡಿಲ್ಲ.ಕಳೆದ ೧೫ ವರ್ಷಗಳ ಹಿಂದೆಯೇ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು ನೂರಾರು ಎಕರೆಯಷ್ಟು ಜಾಗವನ್ನು ರಬಕವಿ ಹಾಗೂ ಮದನಮಟ್ಟಿ ಹೀಗೆ ಹಲವೆಡೆ ಭೂಮಿ ನಮೂದಿಸಿದೆ. ಇಂದಿನವರೆಗೂ ಯಾವುದೇ ಯೋಜನೆಗಳನ್ನು ರೂಪಿಸದೇ ಮೂಲ ಸೌಲಭ್ಯವನ್ನೇ ನಿಗಮ ಮರೆತಿದೆ.
ಲಕ್ಷಕ್ಕೂ ಅಧಿಕ ನೇಕಾರರು:ತೇರದಾಳ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೇಕಾರರಿದ್ದು, ಶಾಸಕ, ಸಂಸದರ ಆಯ್ಕೆಗೆ ನಿರ್ಣಾಯಕ ಮತಗಳಾಗಿರುವ ನೇಕಾರ ಸಮುದಾಯ, ಸತತವಾಗಿ ಕಡೆಗಣನೆಯಾಗಿ ಯಾವುದೇ ಮೂಲ ಸೌಲಭ್ಯಗಳಿಲ್ಲದೇ ನೇಕಾರಿಕೆ ಸೊರಗಿ ಸಾಯುವ ಅಂತಿಮ ಘಟ್ಟದಲ್ಲಿದೆ. ಈಗಲೂ ಸರ್ಕಾರ ಯಾವುದೇ ಆಯವ್ಯಯದಲ್ಲೂ ಅನುದಾನ ನೀಡಿ ಉದ್ಯಮಕ್ಕೆ ಚೇತರಿಕೆ ನೀಡದೇ ಇರುವುದು ನೇಕಾರ ಸಮುದಾಯಕ್ಕೆ ಬೇಸರ ತಂದಿದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಇದೆಯಾದರೂ ಅಲ್ಲಿಯೂ ಸಮರ್ಪಕ ನೂಲು, ಕಚ್ಚಾವಸ್ತುಗಳ ಪೂರೈಕೆಯಿಲ್ಲದೇ ನೇಕಾರರು ಹತಾಶರಾಗಿದ್ದಾರೆ. ಕೆಎಚ್ಡಿಸಿ ಹೊರತುಪಡಿಸಿ ೫೦ ವರ್ಷಗಳಿಂದ ಯಾವುದೇ ನೇಕಾರಿಕೆ ಉದ್ಯಮಕ್ಕೆ ನೆರವಾಗುವ ಸಂಬಂಧಿಸಿದ ಘಟಕಗಳಾಗಿಲ್ಲ.ಮೂಲ ಸೌಲಭ್ಯವಿಲ್ಲ:
ನೇಕಾರರ ಅಭಿವೃದ್ಧಿಗೆ ಇರುವ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಮಗದಿಂದ ಯಾವುದೇ ಪ್ರಯೋಜನ ತೇರದಾಳ ಕ್ಷೇತ್ರಕ್ಕೆ ಆಗಿಲ್ಲ. ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಭಾಗದ ನೇಕಾರರ ಸಂಕಷ್ಟ ಅರಿವು ಇರದಿರುವುದು ಪ್ರಮುಖ ಕಾರಣವಾಗಿದ್ದರೆ, ಹೋರಾಟದಲ್ಲಿರದ ನೇಕಾರ ವರ್ಗ ಅಸಂಘಟಿತ ವಲಯವೆಂಬ ಕಾರಣ ಮತ್ತೊಂದಾಗಿದೆ. ಜವಳಿ ಸಚಿವರು ಪಕ್ಕದ ವಿಜಯಪುರ ಜಿಲ್ಲೆಯವರಾಗಿದ್ದು, ತೇರದಾಳ ಕ್ಷೇತ್ರದ ಅರಿವಿದ್ದರೂ ಜವಳಿ ಉದ್ಯಮಕ್ಕೆ ಹಿಡಿದ ಗ್ರಹಣ ಬಿಡಿಸಲು ಮುಂದಾಗದಿರುವುದು ದುರಂತವೇ ಸರಿ.ಕೋನ್ ಡೈಯಿಂಗ್ ಇಲ್ಲ:
೨೦ ವರ್ಷಗಳ ಹಿಂದೆಯೇ ನಗರಸಭೆ ಅಧೀನದಲ್ಲಿ ೨ ಎಕರೆಯಷ್ಟು ಪ್ರದೇಶದಲ್ಲಿ ಕೋನ್ ಡೈಯಿಂಗ್ ಘಟಕ ಸ್ಥಾಪನೆಗೆ ರಬಕವಿ ನಗರದ ಸರ್ವೇ ನಂ.೬೪ ರಲ್ಲಿ ಜಾಗೆ ಮೀಸಲಿಟ್ಟಿದ್ದಾರೆ. ಇದೀಗ ಆ ಜಾಗೆ ಪೂರ್ತಿ ಮುಳ್ಳು-ಕಂಟೆಗಳಿಂದ ಮುಚ್ಚಿ ಹೋಗಿದ್ದು, ಜಾಗೆ ಗುರುತು ಸಿಗಲಾರದಷ್ಟು ಹದಗೆಟ್ಟಿದೆ. ಕ್ಷೇತ್ರ ವ್ಯಾಪ್ತಿ ಹಲವಾರು ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ನೇಕಾರರ ಅಭಿವೃದ್ಧಿಗೆ ಜಾಗೆ ಗುರುತಿಸಿದೆ. ಅದರಷ್ಟೇ ಪ್ರಬಲವಾಗಿ ಜವಳಿ ಇಲಾಖೆಗಳ ಆಯಾ ನಿಗಮಗಳು ಪುನಶ್ಚೇತನ ಅಥವಾ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ತೀವ್ರ ನಿರ್ಲಕ್ಷ್ಯ ತೋರುತ್ತಿವೆ.ನೇಕಾರ ಸಂಖ್ಯೆ ಕುಸಿತ:
ಜವಳಿ ಉದ್ಯಮದ ಪತನದಿಂದ ದಿನದಿಂದ ದಿನಕ್ಕೆ ನೇಕಾರರ ಸಂಖ್ಯೆ ಗಣನೀಯವಾಗಿ ಕುಗ್ಗುತ್ತಿದೆ. ಪೂರಕ ಸೌಲಭ್ಯ ಹಾಗೂ ಸಮರ್ಪಕ ವೇತನ ದೊರಕದ ಕಾರಣ ವಿದ್ಯುತ್ ಮಗ್ಗಗಳ ನೇಕಾರ ಕುಟುಂಬ ನಿರ್ವಹಣೆ ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ಜಾಗತೀಕರಣ ಭರಾಟೆಯಲ್ಲಿ ರಬಕವಿ-ಬನಹಟ್ಟಿ ಸೀರೆಗಳ ಖರೀದಿಯಲ್ಲಿಯೂ ತೀವ್ರ ಕುಸಿತ ಕಂಡಿದೆ. ಇವೆಲ್ಲದರ ಮಧ್ಯೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಕಾಲಿಕ ಮಧ್ಯಪ್ರವೇಶವಾಗದೆ, ನೇಕಾರರ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿರುವುದು ಅಕ್ಷರಶಃ ಸತ್ಯ.ಸಹಾಯಧನ ಇಲ್ಲ:
ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಸಹಾಯ ಧನ ವಿಳಂಬದಿಂದ ನೇಕಾರರು ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದು, ಸರ್ಕಾರದ ಸರಳೀಕರಣ ನೀತಿ ವಿಳಂಬದಿಂದ ನೇಕಾರರು ಬೀದಿ ಪಾಲಾಗಿದ್ದಾರೆ. ಜವಳಿ ಕ್ಷೇತ್ರದಲ್ಲಿ ಸೀರೆಗಳ ಬೇಡಿಕೆ ಕುಸಿತಕ್ಕೆ ಪರ್ಯಾಯ ಮಾರ್ಗ ಹುಡುಕಬೇಕಿದ್ದ ಸರ್ಕಾರ ೧೫ ವರ್ಷಗಳೇ ಕಳೆದರೂ ಮೂಲಭೂತವಾಗಿ ಅಗತ್ಯವಾಗಿರುವ ಜವಳಿಪಾರ್ಕ್ ಮತ್ತು ಕೋನ್ಡೈಯಿಂಗ್ ಘಟಕಗಳ ಸ್ಥಾಪನೆಗೆ ಮುಂದಾಗದ್ದಕ್ಕೆ ನೇಕಾರರು ಹತಾಶಗೊಂಡಿದ್ದು, ತೀವ್ರ ಹೋರಾಟ ನಡೆಸುವ ಚಿಂತನೆಯಲ್ಲಿದ್ದಾರೆ.ಜವಳಿ ಕ್ಷೇತ್ರ ಅತ್ಯಂತ ದಯನೀಯವಾಗಿದ್ದು, ಗುಳೇ ಹೋಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಸಕಲ ರೀತಿಯಲ್ಲಿ ಸ್ಪಂದನೆ ಆಗದಿದ್ದಲ್ಲಿ ಮುಂದಿನ ದಿನಗಳು ಭಯಾನಕವಾಗಿವೆ. ಶಂಕರ ಜುಂಜಪ್ಪನವರ, ನೇಕಾರ ಮುಖಂಡ, ಬನಹಟ್ಟಿ
ಕಚ್ಚಾವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು, ಉತ್ಪಾದನೆ ವೆಚ್ಚದಾಯಕವಾದ ಕಾರಣ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಉದ್ಯಮ, ನೇಕಾರರ ರಕ್ಷಣೆಗೆ ಮುಂದಾಗದಿದ್ದರೆ ನೇಕಾರಿಕೆ ಪಳಿಯುಳಿಕೆಯ ಕುರುಹಾಗುವಲ್ಲಿ ಸಂದೇಹವಿಲ್ಲ. ನೀಲಕಂಠ ಗೌರಿಹರ ಮುತ್ತೂರ, ಅಧ್ಯಕ್ಷರ ಪವರ್ಲೂಂ ಅಸೋಶಿಯೇಶನ್, ರಬಕವಿಮದನಮಟ್ಟಿಯಲ್ಲಿ ೫ ಎಕರೆ, ರಬಕವಿಯಲ್ಲಿ ೨ ಎಕರೆಯಷ್ಟು ಪ್ರದೇಶವಿದೆ. ಜವಳಿ ಉದ್ಯಮ ವಿನಾಶದಂಚಲ್ಲಿದ್ದರೂ ಉಳಿಸುವತ್ತ ಪೂರಕ ಯೋಜನೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ನೇಕಾರರ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೇನೆ. ನೇಕಾರರಿಂದಲೇ ೪ ಬಾರಿ ಚುನಾಯಿತನಾಗಿದ್ದು, ನೇಕಾರರ ಅಭ್ಯುದಯಕ್ಕೆ ಸೂಕ್ತ ಸ್ಪಂದನೆಯೊಂದಿಗೆ ಪಾರದರ್ಶಕ ನ್ಯಾಯ ಒದಗಿಸುವತ್ತ ಹೋರಾಟ ನಡೆಸುವ ಜವಾಬ್ದಾರಿ ನನ್ನದು. ಸಿದ್ದು ಸವದಿ, ಶಾಸಕ, ತೇರದಾಳ