ದಬ್ಬಾಳಿಕೆ, ಕ್ರೌರ್ಯ ಮತ್ತು ಇನ್ನೊಬ್ಬರಿಗೆ ಹಿಂಸೆ ನೀಡಿ ಬದುಕುವ ಮನಸ್ಥಿತಿಗೆ ತಲುಪಿರುವ ಇಂದಿನ ದಿನಮಾನಗಳಲ್ಲಿ ಮಹಾವೀರರ ತತ್ವ, ಆದರ್ಶಗಳು ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ಅಹಿಂಸಾ ಪದ ಹುಟ್ಟಿರುವುದೇ ಭಗವಾನ ಮಹಾವೀರರಿಂದ. ಒಂದು ಸೊಳ್ಳೆಯನ್ನು ಕೂಡ ಕೊಲ್ಲಬಾರದೆಂಬ ತತ್ವ ಜೈನ್ ಸಮುದಾಯದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ ಹೇಳಿದರು.
ಸೋಮವಾರ ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ಶಂಭವನಾಥ ಜೂನ ಮಂದಿರ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಬ್ಬಾಳಿಕೆ, ಕ್ರೌರ್ಯ ಮತ್ತು ಇನ್ನೊಬ್ಬರಿಗೆ ಹಿಂಸೆ ನೀಡಿ ಬದುಕುವ ಮನಸ್ಥಿತಿಗೆ ತಲುಪಿರುವ ಇಂದಿನ ದಿನಮಾನಗಳಲ್ಲಿ ಮಹಾವೀರರ ತತ್ವ, ಆದರ್ಶಗಳು ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿದೆ. ಇದನ್ನು ನಮ್ಮ ಮಕ್ಕಳಿಗೂ ನೀತಿ ಪಾಠ ಮಾಡುವುದು ಅತ್ಯಗತ್ಯವಾಗಿದೆ. ಕೇವಲ ಪ್ರಾಣಿಹಿಂಸೆ ಮಾತ್ರವಲ್ಲ ಬದಲಾಗಿ ಬೇರೆಯವರಿಗೆ ತೊಂದರೆ ಕೊಟ್ಟು ಬದುಕುವುದು ಕೂಡ ಹಿಂಸೆಗೆ ಸಮಾನ. ನಮ್ಮ ದೇಹ ಎಂಬುವುದು ಕೂಡ ಭಗವಂತನಿಗೆ ಸಂಬಂಧಪಟ್ಟಿದ್ದು ಎಂಬ ಮನೋಭಾವನೆ ಹೊಂದಿದಂತಹ ಮಹಾವೀರರ ತತ್ವ, ಆದರ್ಶಗಳನ್ನು ನಾವು ಅಳವಡಿಸಿಕೊಂಡಿದ್ದೇ ಆದಲ್ಲಿ ಅದು ನಾವು ಅವರಿಗೆ ನೀಡುವ ಗೌರವವಾಗುತ್ತದೆ ಎಂದರು.
ಇಂದಿಗೂ ಮಹಾವೀರರು ಪ್ರಸ್ತುತ. ಅವರ ಆದರ್ಶಗಳು ಕೇವಲ ಪೂಜೆ ಮಾಡಿ ಜಯಂತಿ ಆಚರಿಸುವುದರಿಂದ ಏನು ಪ್ರಯೋಜನವಿಲ್ಲ. ಬದಲಾಗಿ ಜಯಂತಿ ಆಚರಿಸುವ ಮೂಲಕ ಹಿಂದೆ ನಾನು ಏನಿದ್ದೇ ಎಂಬುವುದನ್ನು ಮರೆತು ಇಂದಿನಿಂದಲೇ ನಮ್ಮನ್ನು ನಾವು ಬದಲಿಸಿಕೊಂಡು ಅಹಿಂಸಾ ತತ್ವ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಮುಂಡಗೋಡ ತಹಸೀಲ್ದಾರ ಶಂಕರ ಗೌಡಿ ಮಾತನಾಡಿ, ಜೈನ ಮತ್ತು ಬೌದ್ಧ ಧರ್ಮಗಳು ನಮ್ಮ ದೇಶದಲ್ಲಿ ಏಕೆ ಹುಟ್ಟಿದವು ಎಂಬುವುದಕ್ಕೆ ದೊಡ್ಡ ಇತಿಹಾಸವೇ ಇದೆ. ಆ ಕಾಲದಲ್ಲಿ ಅಗತ್ಯ ರೂಪದಲ್ಲಿ ಕಂಡುಬಂದ ಸಾಮಾಜಿಕ ದೋಷ ಪರಿಸ್ಥಿತಿಯನ್ನು ಮನಗಂಡು ಜೈನ್ ಮತವನ್ನು ಸ್ಥಾಪನೆ ಮಾಡಿಕೊಡಲಾಯಿತು. ಬೌದ್ಧ ಮತದಂತೆ ಜೈನ್ ಮತವು ಪ್ರಸಾರವಾಗಲಿಲ್ಲ. ಆದರೆ ಕರ್ನಾಟಕದ ಇತಿಹಾಸದಲ್ಲಿ ಶೇ. ೫೦ರಷ್ಟು ರಾಜರು ಜೈನ ಮತವನ್ನೇ ಹೊಂದಿದವರಾಗಿದ್ದರು. ದೀರ್ಘ ಕಾಲ ಆಳಿದ ಗಂಗರು ಕೂಡ ಜೈನ್ ಮತದ ಆರಾದಕರಾಗಿದ್ದರು. ಸಾಹಿತ್ಯ ಗ್ರಂಥ ರಚನೆ ಮಾಡಿದ ಪಂಪ ಮತ್ತು ರನ್ನ ಅವರು ಕೂಡ ಜೈನರಾಗಿದ್ದರು. ಶಿಲ್ಪ ಕಲೆಗಂತೂ ಜೈನ ಸಮುದಾಯ ನೀಡಿದ ಕೊಡುಗೆ ಅಪಾರ. ಅಘಾತವಾದ ಪರಂಪರೆ ಜೈನ ಕುಲದ್ದಾಗಿದೆ. ಮಹಾವೀರರ ತತ್ವಗಳು ಇಂದಿಗೂ ಪ್ರಸ್ತುತ ಎಂದರು.
ಜೈನ್ ಸಮಾಜದ ತಾಲೂಕಾಧ್ಯಕ್ಷ ಧರಣೇಂದ್ರ ಅಂಗಡಿ, ಸಮಾಜ ಹಿರಿಯರಾದ ಡಾ. ಪಿ.ಪಿ ಛಬ್ಬಿ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ತಾಲೂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ, ಎಸ್.ಡಿ. ಮುಡೆಣ್ಣವರ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ರಮೇಶ ಅಂಬಿಗೇರ, ದೈಹಿಕ ಶಿಕ್ಷಣ ಪರಿವೀಕ್ಷಕ ಅಶೋಕ ಶಂಕ್ರಿಕೊಪ್ಪ ಮುಂತಾದವರಿದ್ದರು. ಧರಣೇಂದ್ರ ಅಂಗಡಿ ಸ್ವಾಗತಿಸಿದರು. ಅಶೋಕ ಶಂಕ್ರಿಕೊಪ್ಪ ನಿರೂಪಿಸಿದರು.
ಇದೇ ಸಂದರ್ಭ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯರಾಗಿ ಆಯ್ಕೆಯಾಗಿರುವ ಡಾ. ಪಿ.ಪಿ. ಛಬ್ಬಿ ಅವರನ್ನು ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
---------
೩೦ಎಮ್.ಎನ್.ಡಿ೧- ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶಂಭವನಾಥ ಜೀನ ಮಂದಿರ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ ಮಾತನಾಡಿದರು.
೩೦ಎಮ್.ಎನ್.ಡಿ೨
೨೦೨೬ನೇ ಸಾಲಿನ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಪಿ.ಪಿ. ಛಬ್ಬಿ ಅವರನ್ನು ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.