ಜಗತ್ತಿಗೆ ವಿಜ್ಞಾನದಷ್ಟೇ ಕಲೆಯೂ ಅವಶ್ಯಕ: ಪ್ರೊ.ಮೈಸೂರು ಕೃಷ್ಣಮೂರ್ತಿ

KannadaprabhaNewsNetwork |  
Published : Feb 14, 2026, 01:45 AM IST
೧೩ಕೆಎಂಎನ್‌ಡಿ-೨ನಾಗಮಂಗಲ ತಾಲೂಕಿನ ಎಂ.ಹೊಸೂರು ಗೇಟ್‌ನ ಶ್ರೀರಂಗಪಟ್ಟಣದ ವಿಸ್ಡಮ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೪ಅಂಕ ಗಳಿಸಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಪಿ.ಚಿರಸ್ಮಿತ ಅವರಿಗೆ ೫೦ಸಾವಿರ ರು.ನಗದು ಬಹುಮಾನ ಕೊಟ್ಟು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶಾಲೆಗೆ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶಿಕ್ಷಕರು ವರ್ಷಪೂರ್ತಿ ತ್ಯಾಗ ಮಾಡುತ್ತಾರೆ. ಶಿಕ್ಷಕರಿಂದ ವಿದ್ಯೆ ಕಲಿತು ಮುಂದಿನ ಜೀವನ ರೂಪಿಸಿಕೊಳ್ಳುವ ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ವಿದ್ಯೆ ಕಲಿಸಿದ ಗುರುಗಳು ಮತ್ತು ಶಾಲೆಗೆ ಕೃತಜ್ಞರಾಗಿರಬೇಕು. ಇದಕ್ಕೆ ಪೋಷಕರೂ ಸಹ ಸಹಕರಿಸಬೇಕು .

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಜ್ಞಾನ ಸೋತಾಗ ಕಲೆ ಕೈಹಿಡಿಯುತ್ತದೆ. ಹಾಗಾಗಿ ಜಗತ್ತಿಗೆ ಕೇವಲ ಇಂಜಿನಿಯರ್ ಮತ್ತು ವೈದ್ಯರುಗಳಿದ್ದರಷ್ಟೇ ಸಾಲದು, ಕಲಾವಿದರೂ ಕೂಡ ಅತ್ಯವಶ್ಯಕ ಎಂದು ವಿಮರ್ಶಕ ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಎಂ.ಹೊಸೂರು ಗೇಟ್‌ನ ಶೀರಪಟ್ಟಣದ ವಿಸ್ಡಮ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ವಿಸ್ಡಮ್ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಪಂಚ ಇನ್ನೇನು ಹಾಳಾಗುತ್ತಿದೆ ಎನ್ನುವಾಗ ಅದನ್ನು ಉಳಿಸುವ ಚೈತನ್ಯವಿರುವುದು ಕಲೆಗಳಿಗೆ ಮಾತ್ರ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜೊತೆಗೆ ಕಲಾವಿದರನ್ನಾಗಿಯೂ ಬೆಳೆಸಬೇಕು ಎಂದರು.

ಸಾಮಾನ್ಯ ಕುಟುಂಬದಲ್ಲಿ ಜನಸಿರುವ ಅನೇಕ ಮಹನೀಯರು ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅಂತಹ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಶಿಕ್ಷಣ ಪಡೆಯುವ ಮಕ್ಕಳು ಇಂಜಿನಿಯರ್, ವೈದ್ಯರು ಅಥವಾ ಎಂತಹ ಉನ್ನತ ಸ್ಥಾನಕ್ಕೇರಲಿ, ಅವರೊಳಗೆ ಕಲಾವಿದ ಮತ್ತು ಕಲಾಸ್ವಾದನೆಯ ಗುಣ ಇರುವಂತೆ ನೋಡಿಕೊಂಡರೆ ಅಂತಹ ಮಕ್ಕಳಿಂದ ಜಗತ್ತಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಎನ್ನುವುದು ಜ್ಞಾನದ ಕಡೆಗೆ ಸಾಗುತ್ತಿದೆ. ಆದರೆ ಜ್ಞಾನ ಎಂಬುದು ಶಿಕ್ಷಣದ ಅಂತಿಮ ಗುರಿಯಲ್ಲ. ಜ್ಞಾನ ವಿವೇಕದ ಎತ್ತರಕ್ಕೆ ಹೋಗದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಶಿಕ್ಷಣದಲ್ಲಿ ಐಎಎಸ್ ತೇರ್ಗಡೆ ಹೊಂದಿದರೆ ಉನ್ನತ ಸ್ಥಾನಕ್ಕೇರಬಹುದು. ಆಡಳಿತಾತ್ಮಕ ಹುದ್ದೆಗಳಲ್ಲಿ ಅತಿ ದೊಡ್ಡ ಸ್ಥಾನವೆಂದರೆ ಸರ್ಕಾರದ ಮಟ್ಟದಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆ. ಐಎಎಸ್ ಅಧಿಕಾರಿಗಳಾದರೆ ರಾಷ್ಟ್ರಮಟ್ಟದಲ್ಲಿ ಹುದ್ದೆ ಪಡೆಯಬಹುದು. ಆದರೆ ಐಎಎಸ್ ಪಾಸ್ ಮಾಡಿ ಅಧಿಕಾರಿಯಾಗಿದ್ದವರು, ಉದ್ಯಮಿಗಳಾಗಿ ಕೋಟಿಗಟ್ಟಲೆ ಸಂಪಾದನೆ ಮಾಡಿದವರೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಉದಾಹರಣೆಗಳಿವೆ. ಈ ಶಾಲೆಯಲ್ಲಿ ವಿದ್ಯೆ ಕಲಿಯುವ ಮಕ್ಕಳನ್ನು ವಿವೇಕದೆತ್ತರಕ್ಕೆ ಕೊಂಡೊಯ್ಯುತ್ತೇವೆಂಬ ಉದ್ದೇಶಹೊಂದಿರುವ ಈ ಶಿಕ್ಷಣ ಸಂಸ್ಥೆ ಶಾಲೆಗೆ ವಿಸ್ಡಂ (ವಿವೇಕ) ಎಂಬ ಹೆಸರಿಟ್ಟಿರುವುದು ಬಹಳ ಅರ್ಥಪೂರ್ಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಮಾತನಾಡಿ, ಮಕ್ಕಳನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಮಕ್ಕಳು ಬೆಳೆದು ದೊಡ್ಡವರಾಗಿ ಉತ್ತಮ ಜೀವನ ನಡೆಸಬೇಕೆಂದರೆ ಗುಣಮಟ್ಟದ ಶಿಕ್ಷಣ ಅತ್ಯವಶ್ಯಕ. ಹಾಗಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಕನಸು ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದರು.

ಸಮಾಜದಲ್ಲಿ ಎಲ್ಲರೊಂದಿಗೆ ಕೂಡಿ ಬದುಕಬೇಕೆಂದರೆ ಶಾಲೆಯಲ್ಲಿ ಶಿಕ್ಷಕರು ಪಾಠ, ಪ್ರವಚನ ಕಲಿಸುವ ಜೊತೆಗೆ ಮನೆಯಲ್ಲಿ ಪೋಷಕರು ಮಕ್ಕಳಿಗೆ ಸಾಕಷ್ಟು ಮೌಲ್ಯ, ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಅವರ ಕೈಗೆ ಪುಸ್ತಕ ಕೊಟ್ಟರೆ. ಪುಸ್ತಕಗಳು ಮಕ್ಕಳ ಕನಸನ್ನು ನನಸು ಮಾಡುತ್ತವೆ. ಒಂದು ಪುಸ್ತಕ ಮತ್ತು ಪೆನ್ನಿಗೆ ಒಬ್ಬ ವಿದ್ಯಾರ್ಥಿಯನ್ನು ಯಾವ ಮಟ್ಟಕ್ಕಾದರೂ ಬದಲಾಯಿಸುವ ಶಕ್ತಿ ಇದೆ ಎಂದು ಹೇಳಿದರು.

ಪಟ್ಟಣದ ಎಆರ್‌ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ.ಎಸ್.ಸತೀಶ್ ಮಾತನಾಡಿ, ಶಾಲೆಗೆ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶಿಕ್ಷಕರು ವರ್ಷಪೂರ್ತಿ ತ್ಯಾಗ ಮಾಡುತ್ತಾರೆ. ಶಿಕ್ಷಕರಿಂದ ವಿದ್ಯೆ ಕಲಿತು ಮುಂದಿನ ಜೀವನ ರೂಪಿಸಿಕೊಳ್ಳುವ ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ವಿದ್ಯೆ ಕಲಿಸಿದ ಗುರುಗಳು ಮತ್ತು ಶಾಲೆಗೆ ಕೃತಜ್ಞರಾಗಿರಬೇಕು. ಇದಕ್ಕೆ ಪೋಷಕರೂ ಸಹ ಸಹಕರಿಸಬೇಕು ಎಂದರು.

ಶ್ರೀ ಜೈಮಾರುತಿ ಚಾರಿಟಬಲ್ ಶಿಕ್ಷಣ ಸಂಸ್ಥೆ ಹಾಗೂ ವಿಸ್ಡಮ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಪ್ರೇಮ ತಿಮ್ಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ವೇದಿಕೆಯಲ್ಲಿ ಕಳೆದ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೪ ಅಂಕ ಗಳಿಸಿ ತಾಲೂಕಿಗೆ ಪ್ರಥಮ, ಜಿಲ್ಲಾ ಹಾಗೂ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ವಿಸ್ಡಮ್ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಪಿ.ಚಿರಸ್ಮಿತ ಅವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ೫೦ ಸಾವಿರ ರು.ನಗದು ಬಹುಮಾನ ಕೊಟ್ಟು ಸನ್ಮಾನಿಸಲಾಯಿತು. ಅಲ್ಲದೆ ಕಳೆದ ಸಾಲಿನಲ್ಲಿ ಅತ್ಯುನ್ನತ ಸ್ಥಾನ ಪಡೆದು ತೇರ್ಗಡೆ ಹೊಂದಿದ ದೀಕ್ಷಾ ಅವರಿಗೆ ೨೦ ಸಾವಿರ ರು. ನಗದು ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕುಣಿಗಲ್ ವ್ಯಾಲಿ ಇಂಟರ್‌ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಗಣೇಶ್, ತಾಲೂಕಿನ ಹೊಸಕೊಪ್ಪಲಿನ ಬ್ರಿಲಿಯಂಟ್ ವ್ಯಾಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್, ಶಾಲೆಯ ಶಿಕ್ಷಕ ಬೋರೇಗೌಡ ಸೇರಿದಂತೆ ೮೦ಕ್ಕೂ ಹೆಚ್ಚು ಶಿಕ್ಷಕರು, ಸಿಬ್ಬಂದಿ ಸಹಸ್ರಾರು ಮಂದಿ ವಿದ್ಯಾರ್ಥಿ ಪೋಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಲ್ಲದ ಚಿರತೆ ದಾಹ: ಎರಡು ಮೇಕೆ ಆಹುತಿ
ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರೀಲಿ ಭೀಕರ ಅಪಘಾತ: 7 ಜನ ದುರ್ಮರಣ