ರಂಗಭೂಮಿ ಅಧ್ಯಾತ್ಮದ ಕಣದ: ಬಾಬಾಸಾಹೇಬ ಕಾಂಬಳೆ

KannadaprabhaNewsNetwork | Published : Nov 17, 2024 1:18 AM

ಸಾರಾಂಶ

ರಂಗಭೂಮಿಯಿಂದ ನಾವು ಮನುಷ್ಯರಾಗಿ ಬದುಕುವುದನ್ನು ಕಲಿಯುವದರ ಜೊತೆಗೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿದ್ದು, ರಂಗಭೂಮಿಯು ನಮಗೆ ದೊಡ್ಡ ಅಧ್ಯಾತ್ಮದ ಕಣಜ ಎಂದು ಕರ್ನಾಟಕ ನಾಟಕ ಅಕಾಡೆಮಿಯ ರಾಜ್ಯ ಸಮಿತಿಯ ಸದಸ್ಯ ಬಾಬಾಸಾಹೇಬ ಕಾಂಬಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ರಂಗಭೂಮಿಯಿಂದ ನಾವು ಮನುಷ್ಯರಾಗಿ ಬದುಕುವುದನ್ನು ಕಲಿಯುವದರ ಜೊತೆಗೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿದ್ದು, ರಂಗಭೂಮಿಯು ನಮಗೆ ದೊಡ್ಡ ಅಧ್ಯಾತ್ಮದ ಕಣಜ ಎಂದು ಕರ್ನಾಟಕ ನಾಟಕ ಅಕಾಡೆಮಿಯ ರಾಜ್ಯ ಸಮಿತಿಯ ಸದಸ್ಯ ಬಾಬಾಸಾಹೇಬ ಕಾಂಬಳೆ ಹೇಳಿದರು.

ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಸಕ್ರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಧಾರವಾಡ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿಯ ಸಹಯೋಗದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ಹಾಗೂ ಝಕೀರ್‌ ನದಾಫ ಅವರ ಎರಡು ನಾಟಕಗಳ ಲೋಕಾರ್ಪಣೆ ಮತ್ತು ಕಾಲೇಜು ನಾಟಕ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ವ ಕಲೆಗಳ ಸಂಗಮವೇ ರಂಗಭೂಮಿಯಾಗಿದ್ದು, ಇದು ಬತ್ತಿ ಹೋಗುತ್ತಿರುವ ಮಾನವೀಯತೆಯ ಗುಣಗಳನ್ನು ನಮ್ಮಲ್ಲಿ ಬೆಳೆಸುತ್ತದೆ ಎಂದರು.

ಪ್ರೊ.ಕೆ.ರಾಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರಕಾರಿ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಇಂದು ನಾವೆಲ್ಲಾ ಓದು ಬರಹ ಸಾಂಸ್ಕೃತಿಕ ಚಟುವಟಿಕೆಗಳು ಬೇಡವಾಗಿರುವ ಕಾಲದಲ್ಲಿ ಸಾಗುತ್ತಿದ್ದು, ಕಲೆ, ಸಾಹಿತ್ಯ, ಸಂಗೀತ ಮತ್ತು ಲಲಿತ ಕಲೆಗಳು ಅಜ್ಞಾನದಲ್ಲಿರುವ ಮನುಷ್ಯನನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುತ್ತಿವೆ ಎಂದರು. ರಂಗಭೂಮಿಯು ಕಲಾವಿದನನ್ನು ಅಜರಾಮರನನ್ನಾಗಿ ಮಾಡುವದಲ್ಲಿದೆ ಮನುಷ್ಯನನ್ನು ಸಮಾಜಮುಖಿಯಾಗಿ ಬದುಕಲು ಅವಕಾಶ ಕಲ್ಪಿಸುವದರಿಂದ ನಾಟಕವನ್ನು ಪಂಚಮವೇದ ಎಂದು ಕರೆದಿದ್ದಾರೆ ಎಂದರು.

ಪ್ರಾಧ್ಯಾಪಕ ಡಾ.ಎನ್.ಎ.ಕೌಜಗೇರಿ ಅಧ್ಯಕ್ಷತೆ ವಹಿಸಿದ್ದರು. ಝಾಕೀರ್‌ ನದಾಫ್‌ ರಚಿಸಿದ ದೇವಸೂರ ಮತ್ತು ಹುಚ್ಚರ ಕನಸು ಎರಡು ನಾಟಕಗಳ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಲ್ಲಪ್ಪ ಪೂಜೇರ, ರಾಜಶೇಖರ ನಿಡವಣಿ, ಶಿವಾನಂದ ತಾರಿಹಾಳ, ಚಂದ್ರಶೇಖರ ಪಠಾಣಿ, ಝಾಕೀರ ನದಾಫ, ಡಾ. ಅರುಂಧತಿ ಬದಾಮಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯಲ್ಲವ್ವ ಪಟ್ಟದಕಲ್ಲು ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಹನಾ ಬಾರ್ಕಿ ಅತಿಥಿಗಳನ್ನು ಪರಿಚಯಿಸಿದರು. ವಚನಾ ಬಸಿಡೋಣಿ ನಿರೂಪಿಸಿದರು. ಶಿವಾನಂದ ತಾರಿಹಾಳ ವಂದಿಸಿದರು.

Share this article