ದೊಡ್ಡಬಳ್ಳಾಪುರ: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಧಾನ್ ಫೌಂಡೇಷನ್ ಸಂಸ್ಥೆಯು ದೇಶದ 14 ರಾಜ್ಯಗಳ 15 ಲಕ್ಷ ಮಹಿಳೆಯರ ಜೊತೆ ಕೆಲಸ ಮಾಡುತ್ತಿದೆ ಎಂದು ಧಾನ್ ಫೌಂಡೇಷನ್ ಸಂಸ್ಥೆ ರಾಮನಗರ ವಲಯ ಸಂಯೋಜಕ ರಾಘವೇಂದ್ರ ತಿಳಿಸಿದರು.
ಆರ್ಥಿಕ ಸಾಕ್ಷರತೆ ಇಲ್ಲದೆ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿದರೂ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಲೆಕ್ಕಪತ್ರಗಳ ನಿರ್ವಹಣೆ ಸೇರಿ ಹಣ ವಿನಿಯೋಗದ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತಿದೆ. ಇದರಿಂದ ಮಹಿಳೆಯರು ನಷ್ಟಕ್ಕೆ ಒಳಗಾಗುವುದು ತಪ್ಪಲಿದೆ. ಹಾಗೆಯೇ ಸಂಸ್ಥೆಯು ಮಹಿಳಾ ಒಕ್ಕೂಟದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ರೈತರ ಅನುಕೂಲಕ್ಕಾಗಿ ಕೆರೆ ಅಭಿವೃದ್ಧಿ ಸೇರಿ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.
ನಗರದ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಸಂಜೀವ್ಕುಮಾರ್ ಮಾತನಾಡಿ, ಬ್ಯಾಂಕ್ ವತಿಯಿಂದ ಮಹಿಳಾ ಒಕ್ಕೂಟಗಳ ಮೂಲಕ ಅವರ ಬೇಡಿಕೆಗೆ ತಕ್ಕಷ್ಟು ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಬೇಕು ಎಂದರು.ಸಭೆಯಲ್ಲಿ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರು ಸರ್ಕಾರದ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಒಕ್ಕೂಟದ ತಾಲೂಕು ಅಧ್ಯಕ್ಷೆ ಹನುಮಕ್ಕ, ಸರಳಮ್ಮ ಹಾಗೂ ನಿರ್ದೇಶಕರು ಇದ್ದರು.