ಚಿಕ್ಕಮಗಳೂರು: ಕರ್ನಾಟಕದಲ್ಲಿ ಈಗಾಗಲೇ ಒಬ್ಬರು ಸಿಎಂ ಇದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲ. ಅದು ಖಾಲಿಯಾದ ಮೇಲೆ ಅದರ ಬಗ್ಗೆ ತೀರ್ಮಾನ ಮಾಡೋಣ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ.
ಸಿ.ಎಲ್.ಪಿ. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಾ ಶಾಸಕರು ಆಯ್ಕೆ ಮಾಡಿದ್ದಾರೆ. ಕಾಲದ ಗಡುವು ಇರುವುದಿಲ್ಲ. ಬದಲಾವಣೆ ಮಾಡಬೇಕಾದರೆ ಸಿ.ಎಲ್.ಪಿ. ನಾಯಕರು, ಹೈಕಮಾಂಡ್ ಇದ್ದಾರೆ, ಅವರು ಕ್ರಮ ಕೈಗೊಳ್ತಾರೆ ಎಂದರು.
ಮಾಜಿ ಸಂಸದ ಶಿವರಾಮೇಗೌಡ ಎಐಸಿಸಿ ಅಧ್ಯಕ್ಷರಾ, ಪ್ರಧಾನ ಕಾರ್ಯದರ್ಶಿಗಳಾ ಇಲ್ಲ ರಾಜ್ಯದ ಉಸ್ತುವಾರಿನಾ ? ಅವರ ಮಾತಿಗೆ ಅಷ್ಟೊಂದು ಪ್ರಾಮುಖ್ಯತೆ ಏಕೆ ಕೊಡ್ತೀರಾ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ್ದಾರೆ. ನಾವೆಲ್ಲ ಶಾಸಕರು ಶಾಸಕಾಂಗ ಸಭೆ ನಾಯಕನನ್ನ ಸೆಲೆಕ್ಟ್ ಮಾಡಿದೆವು, 2-3 ವರ್ಷ ಅಂತ ಗಡುವು ಹಾಕಿಲ್ಲ. ಸಿ.ಎಲ್.ಪಿ ನಾಯಕರನ್ನ ಪೂರ್ತಿ ಅವಧಿಗೆ ಸೆಲೆಕ್ಟ್ ಮಾಡುವುದು. ಅದರ ಬದಲಾವಣೆ ಸಿ.ಎಲ್.ಪಿ. ಹಾಗೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಗೆ ಏಕೆ ಅವಕಾಶ ಇಲ್ಲ. ಎಲ್ಲರಿಗೂ ಅವಕಾಶ ಇದೆ. ಸದ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಖಾಲಿ ಆದಾಗ ಅದರ ಬಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿದರು.