- ತಾಪಂ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮಾಗಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ
ಅಹಿಂಸೆ, ಶಾಂತಿ ಹೋರಾಟಗಳ ಮೂಲಕ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಮಹಾತ್ಮ ಗಾಂಧಿಜಿ ಕೊಡುಗೆ ಅಪಾರ ಆ ಕಾರಣದಿಂದ ಅವರು ರಾಷ್ಟ್ರಪಿತರಾದರು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮಾಗಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ರಾಷ್ಟ್ರವನ್ನಾಗಿ ಮಾಡಲು ಗಾಂಧಿ ಅವರ ಅಹಿಂಸೆ, ಶಾಂತಿ ಹೋರಾಟವೆ ಮೂಲ ಕಾರಣ. ಸಿಪಾಯಿಧಂಗೆ, ಕಿಲಾಪತ್ ಚಳುವಳಿ, ದಂಡಿ ಹೋರಾಟಗಳ ಮೂಲಕ ಬ್ರಿಟೀಷರಿಗೆ ಬಿಸಿ ಮುಟ್ಟಿಸಿದರು. ದೇಶವನ್ನು ಒಗ್ಗಟ್ಟಾಗಿ ಕೊಂಡೊಯ್ಯುವ ನಾಯಕರಾಗಿ ರೂಪು ಗೊಂಡರು. ತಮ್ಮ ಜೀವನವನ್ನೇ ಭಾರತದ ಸ್ವತಂತ್ರಕ್ಕಾಗಿ ಮುಡುಪಾಗಿಟ್ಟು ಸ್ವಾತಂತ್ರ್ಯ ಕೊಡಿಸುವಲ್ಲಿ ಯಶಸ್ವಿಯಾದರು.ಗಾಂಧಿ ಇಡೀ ವಿಶ್ವಕ್ಕೆ ಪ್ರೇರಣೆಯಾದರು ದೇಶದ ಯಾವುದೇ ಉನ್ನತ ಹುದ್ದೆಗಳನ್ನು ಅಲಂಕರಿಸದಿದ್ದರೂ ರಾಷ್ಟ್ರಪಿತರಾಗಿ ರಾಷ್ಟ್ರದ ಜನರ ಮನಸ್ಸಿನಲ್ಲಿ ಉಳಿದುಕೊಂಡರು. ಇಂತಹ ಮಹಾತ್ಮರನ್ನು ಸ್ಮರಿಸುವುದು ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.ಗಾಂಧಿ ಅವರ ಜಾತ್ಯತೀತ ಸಿದ್ದಾಂತ ವಿರೋಧಿಸಿ ಆರ್ಎಸ್ಎಸ್ನ ಕಾರ್ಯಕರ್ತ ಗಾಂಧಿ ಅವರನ್ನು ಕೊಂದನು. ಇಂದಿಗೂ ಸಹ ಆ ಸಂಘಟನೆ ಕ್ಷಮೆ ಕೇಳದಿರುವುದು ಈ ದೇಶದ ದುರಂತ. ಆ ವ್ಯಕ್ತಿಯನ್ನು ಗಾಂಧಿಗಿಂತ ಹೆಚ್ಚಾಗಿ ಬಿಂಬಿಸುತ್ತಿರುವುದು ದುರಂತವಲ್ಲವೆ ಎಂದು ಹೇಳಿದರು.ಗಾಂಧಿ ಅವರ ಜೀವನವೇ ನನ್ನ ಸಂದೇಶ ಎಂಬ ಪುಸ್ತಕ ಓದಿದರೆ ಓರ್ವ ವ್ಯಕ್ತಿ ತಮ್ಮ ಜೀವನದಲ್ಲಿ ಎಷ್ಟೊಂದು ಸಾಧನೆ ಮಾಡಲು ಸಾಧ್ಯ ಎಂಬುದನ್ನು ಕಲಿಸುತ್ತದೆ ಎಂದೆಂದಿಗೂ ಗಾಂಧಿ ಪ್ರಸ್ತುತ ಎಂದರು. ದೇಶ ಕಂಡ ಸ್ವಚ್ಚ,ಉತ್ತಮ ಆಡಳಿತ ನೀಡಿದ ಪ್ರಧಾನಿ ಲಾಲ್ಬಹದ್ದೂರು ಶಾಸ್ರ್ತಿ ಅವರ ಜೈ ಕಿಸಾನ್, ಜೈ ಜವಾನ್ ಸಂದೇಶ ಇಡೀ ಭಾರತವನ್ನೆ ಎಚ್ಚರಿಸಿ ಸೈನಿಕರಿಗೆ ಮತ್ತು ರೈತರ ಪರವಾಗಿ ನಿಂತಿದ್ದನ್ನು ಸ್ಮರಿಸಬೇಕು ಎಂದರು.ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಗಾಂಧಿ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದ್ದಾರೆ ಇಂದಿನ ಯುವಕರಲ್ಲಿ ದೇಶಾಭಿಮಾನ, ಕರ್ತವ್ಯ ಪ್ರಜ್ಞೆ ಹೆಚ್ಚಿಗೆ ಬೆಳೆಸದಿದ್ದರೆ ಮುಂದೆ ಸಂಕಷ್ಟಕ್ಕೆ ದೇಶ ತಿರುಗಬಹುದೆಂಬ ಸಂಶಯ ಮೂಡುತ್ತದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಬಿಸಿಎಂ ಅಧಿಕಾರಿ ಎಸ್.ಎಸ್. ದೇವರಾಜ್, ಬೀರೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚೋಪ್ದಾರ್, ವೃತ್ತ ನಿರೀಕ್ಷಕ ರಫೀಕ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಕಂದಾಯ ಇಲಾಖೆ ಮಂಜುನಾಥ್ ಕಾರ್ಯಕ್ರಮ ನಡೆಸಿಕೊಟ್ಟರು. 10 ಕೆಸಿಕೆಎಂ 2ಕಡೂರು ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮದಿನದ ಅಂಗವಾಗಿ ಭಾವಚಿತ್ರಗಳಿಗೆ ಪುಷ್ಪಾರ್ಚನೆಯನ್ನು ಶಾಸಕ ಕೆ.ಎಸ್.ಆನಂದ್ ನೆರವೇರಿಸಿದರು. ತಹಸೀಲ್ದಾರ್ ಪೂರ್ಣಿಮಾ, ದೇವರಾಜ್, ತಿಮ್ಮಯ್ಯ, ರಫೀಕ್ ಇದ್ದರು.