ರಾಜ್ಯ ಸರ್ಕಾರ ಇದೆ ಎಂಬ ಅನುಭವವೇ ಇಲ್ಲವಾಗಿದೆ: ಸಂಸದ

KannadaprabhaNewsNetwork |  
Published : Oct 07, 2025, 01:02 AM IST
ಪೊಟೋ: 06ಎಸ್‌ಎಂಜಿಕೆಪಿ06 : ಸಂಸದ ಬಿ.ವೈ.ರಾಘವೇಂದ್ರ  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತಿದ್ದು, ಸರ್ಕಾರ ಇದೆ ಎಂಬ ಅನುಭವವೇ ಇಲ್ಲವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತಿದ್ದು, ಸರ್ಕಾರ ಇದೆ ಎಂಬ ಅನುಭವವೇ ಇಲ್ಲವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೌಡಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳಿಗೆ ಪೊಲೀಸರ ಭಯವೇ ಇಲ್ಲ. ಭದ್ರಾವತಿಯಲ್ಲಿ ಸರ್ಕಾರವೇ ಇಲ್ಲವಾಗಿದೆ. ಅಲ್ಲಿ ಒಂದು ಕುಟುಂಬದ ಆಡಳಿತ ನಡೆಯುತ್ತಿದೆ. ಅಲ್ಲಿನ ಎಲ್ಲ ನೀಚ ಕೆಲಸಗಳೂ ಆ ಕುಟುಂಬದ ಅಂಕೆಯಲ್ಲಿ ನಡೆಯುತ್ತಿವೆ ಎಂಬ ಅನುಮಾನ ಜನರಿಗೆ ಬಂದಿದೆ. ಎಲ್ಲಿ ಇಸ್ಪೀಟ್ ಆಡಬೇಕು, ಎಲ್ಲಿ ಕ್ಲಬ್ ಇರಬೇಕು ಎಂದು ನಿರ್ಧಾರ ಆಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಬಾರ್‌ಗಳ ಮುಂದೆ ಕೊಲೆಗಳಾಗುತ್ತಿವೆ. ವಿಶ್ವೇಶ್ವರಯ್ಯರ ಕನಸಿನ ಉಕ್ಕಿನ ನಗರಿ ಇಂದು ಇಸ್ಪೀಟ್ ಇತ್ಯಾದಿ ದುಷ್ಕೃತ್ಯಗಳ ಕೇಂದ್ರವಾಗುತ್ತಿದೆ ಎಂದು ಆರೋಪ ಮಾಡಿದರು.

ಒಡೆದು ಆಳುವ ಸಿಎಂ:

ಬೆಂಗಳೂರು ಮೆಟ್ರೊ ರೈಲು ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಯಾವುದೇ ಸರ್ಕಾರವಾದರೂ ಬಸವಣ್ಣನವರ ತತ್ವ ಸಿದ್ದಾಂತದಂತೆ ಆಡಳಿತ ನಡೆಸಬೇಕು. ಆದರೆ, ನಮ್ಮ ಮುಖ್ಯಮಂತ್ರಿ ಅವರು ಬರೀ ಭಾಷಣ ಮಾಡುತ್ತಾರೆಯೇ ವಿನಾ ಅದಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ಅವರು ಅಳವಡಿಸಿಕೊಂಡಿಲ್ಲ. ಹೀಗೆ ಮಾಡಿದ್ದರೆ ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.

ಸಿಎಂ ಸಿದ್ದರಾಮಯ್ಯ ಅವರದ್ದು ಒಡೆದು ಆಳುವ ನೀತಿಯಾಗಿದ್ದು, ಲಿಂಗಾಯತ ಧರ್ಮದ ವಿಚಾರದಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮತಗಳ್ಳತನ ಎಂದು ಕಾಂಗ್ರೆಸ್‌ನವರು ಹೇಳುತ್ತಿರುವುದು ಒಂದು ರಾಜಕಾರಣವಾಗಿದೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕಿದೆ. ಇಡೀ ದೇಶದಲ್ಲಿ ಈ ಪ್ರಕ್ರಿಯೆ ಆಗಲಿದೆ. ರಾಹುಲ್ ಗಾಂಧಿಯವರು ಬಿಹಾರದಲ್ಲಿ ನಡೆಸಿರುವ ಪಾದಯಾತ್ರೆ ಉಪಯೋಗಕ್ಕೆ ಬರುವುದಿಲ್ಲ ಫಲಿತಾಂಶ ಬಂದ ಮೇಲೆ ಎಲ್ಲವೂ ಬಹಿರಂಗವಾಗಲಿದೆ ಎಂದು ಟೀಕಿಸಿದರು.

ಟೋಲ್ ವಿರುದ್ಧ ಹೋರಾಟ

ಸೊರಬ -ಶಿವಮೊಗ್ಗ ಹೆದ್ದಾರಿಯಲ್ಲಿ ಅಳವಡಿಸಿರುವ ಟೋಲ್ ಗೇಟ್ ವಿರೋಧಿಸಿ ಶಿಕಾರಿಪುರ ಬಂದ್ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಟೋಲ್ ವಿರೋಧಿಸಿ ಜನರು ಹೋರಾಟ ಮಾಡುತಿದ್ದರೂ, ಮರು ಟೆಂಡರ್ ಕರೆದು ಟೋಲ್ ಗೇಟ್‌ಗೆ ಅನುಮತಿ ನೀಡಲಾಗಿದೆ. ಜನರು ಈ ಬಗ್ಗೆ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಟೋಲ್ ಬಗ್ಗೆ ನಮ್ಮ ಜಿಲ್ಲಾ ಮಂತ್ರಿಗಳಿಗೆ ಎಲ್ಲ ಮಾಹಿತಿ ಇದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವ ತನಕ ಶಿಕಾರಿಪುರದಲ್ಲಿ ಟೋಲ್ ಅಳವಡಿಸಲು ಬಿಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಟೋಲ್ ಅಳವಡಿಸಿ ಜನರಿಗೆ ಹೊರೆ ಮಾಡಿದ್ದು, ಬಿಟ್ಟರೆ ಮತ್ತೇನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ