ಕನ್ನಡಪ್ರಭ ವಾರ್ತೆ ಶಿರಾ ಅಂತರ್ಜಲ ಕುಸಿತದಿಂದಾಗಿ ಬೋರ್ವೆಲ್ಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ ಜಾನುವಾರುಗಳಿಗೆ ಸಮಸ್ಯೆ ಆಗುತ್ತಿದ್ದು, ರೈತರು ಕಷ್ಟಪಟ್ಟು ಬೆಳೆಸಿದ ಅಡಿಕೆ, ತೆಂಗು ಮತ್ತು ದಾಳಿಂಬೆ ತೋಟಗಳು ಕಣ್ಣೆದುರೇ ಒಣಗುತ್ತಿವೆ. ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಆರೋಪಿಸಿದರು. ಶಿರಾ ತಾಲೂಕಿನ ಗಜಮಾರನಹಳ್ಳಿ, ಗೌಡಗೆರೆ, ಹೊನ್ನೇನಹಳ್ಳಿ, ಎ ಹೊಸಹಳ್ಳಿ, ಭೂತಪ್ಪನಗುಡಿ ಗ್ರಾಮಗಳಲ್ಲಿ ಮಳೆ ಅಭಾವದಿಂದ ರೈತರ ತೋಟಗಳು ಒಣಗುತ್ತಿವೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಬಗ್ಗೆ ರೈತರ ನೋವಿಗೆ ಸ್ಪಂದಿಸಲು ಮತ್ತು ಸರ್ಕಾರ ಗಮನ ಸೆಳೆಯಲು ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಣೆ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಈ ಹಿಂದೆ ತಾಲೂಕಿನ ಯಲಿಯೂರು, ಕಳ್ಳಂಬೆಳ್ಳ, ಭೂತಪ್ಪನ ದೇವಸ್ಥಾನದ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಪೈಪ್ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ ಇದುವರೆಗೂ ಒಂದು ಗ್ರಾಮಕ್ಕೂ ಕುಡಿಯುವ ನೀರೊದಗಿಸದೆ ಜನರ ಹಣ ವ್ಯರ್ಥವಾಗಿದೆ. ಈ ಯೋಜನೆಗೆ ಖರ್ಚಾಗಿರುವ ಕೋಟ್ಯಾಂತರ ಹಣ ವ್ಯರ್ಥವಾಗಬಾರದು. ಕೂಡಲೇ ಇದರ ಬಗ್ಗೆ ಗಮನ ಹರಿಸಿ ಯೋಜನೆಗೆ ಚಾಲನೆ ನೀಡಬೇಕು. ಒಂದು ವೇಳೆ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ರೈತ ಮೋರ್ಚಾ ಅಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ಕಾರ್ಯದರ್ಶಿ ಕುಮಾರ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಎಸ್ ಟಿ ಮೋರ್ಚಾ ಅಧ್ಯಕ್ಷ ತೇಜೇಶ್ವರ್, ನಾರಾಯಣಪ್ಪ ಸೇರಿದಂತೆ ಹಲವರು ಹಾಜರಿದ್ದರು.