ಮಹೇಶ ಛಬ್ಬಿ
ತಾಲೂಕಿನ ಗ್ರಾಮಗಳು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 2018-19ರಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿವೆ. ಆದರೆ ಸದ್ಯದ ಗ್ರಾಮಗಳ ಚಿತ್ರಣವೇ ಬೇರೆ ಇದ್ದು, ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ.ತಾಲೂಕಿನ ಪ್ರತಿ ಗ್ರಾಮಗಳಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳು ಸರಿಯಾಗಿ ನಿರ್ವಹಣೆ ಇಲ್ಲದೇ ಹಾಳಾಗಿವೆ. ಕೆಲವೆಡೆ ನೀರಿನ ಕೊರತೆ, ಸ್ವಚ್ಛತಾ ವ್ಯವಸ್ಥೆಯ ಬಗ್ಗೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಶೌಚಾಲಯಗಳು ಬೀಗ ಹಾಕಿದ್ದು, ಜನರು ಸಾಮಾನ್ಯವಾಗಿ ಬಹಿರ್ದೆಸೆಗೆ ಬಯಲನ್ನೇ ಬಳಸುವಂಥ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನಲ್ಲಿ 39518 ಕುಟುಂಬಗಳಿವೆ. ಆ ಪೈಕಿ 38888 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳಿವೆ. ಉಳಿದ 630 ಕುಟುಂಬಗಳಿಗೆ ಶೌಚಾಲಯಗಳೇ ಇಲ್ಲ. ಇದರಿಂದ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.
ನಿರ್ವಹಣೆ ಇಲ್ಲ: ತಾಲೂಕಿನ 27 ಗ್ರಾಪಂಗಳ 59 ಗ್ರಾಮಗಳು 2018-19ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಣೆಯಾದವು. ಆದರೆ, ಅದನ್ನು ನಿರಂತರವಾಗಿ ಕಾಯ್ದುಕೊಳ್ಳದೇ, ಅಧಿಕಾರಿಗಳ ಪರಿಶೀಲನೆ, ಮೇಲ್ವಿಚಾರಣೆಯ ನಿರ್ಲಕ್ಷ್ಯದಿಂದ ಬಯಲು ಶೌಚ ಮುಂದುವರಿದಿದೆ. ತಾಲೂಕಿನ ಪ್ರತಿ ಗ್ರಾಮಗಳ ಸಮೀಪದ ರಸ್ತೆಗಳು ಬಯಲು ಬಹಿರ್ದೆಸೆಯಿಂದ ಗಬ್ಬೆದ್ದು ನಾರುತ್ತಿದ್ದು, ರಸ್ತೆಯಲ್ಲಿ ಸಂಚರಿಸುವಾಗ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ತಾಣವಾಗಿ ಮಾರ್ಪಟ್ಟು, ಪರಿಸರಮಾಲಿನ್ಯ ಆಗುವ ಜತೆಗೆ ರೋಗರುಜಿನಗಳು ಹರಡುತ್ತಿವೆ.ಜಾಗೃತಿ ಅಗತ್ಯ: ಬಯಲು ಬಹಿರ್ದೆಸೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಶೌಚಾಲಯಗಳ ಬಳಕೆ, ನಿರ್ವಹಣೆ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಾಣ ಕುರಿತು ತಾಪಂ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚು, ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನ ನಡೆಸಬೇಕು. ಜತೆಗೆ ಅಧಿಕಾರಿಗಳು ಶೌಚಾಲಯಗಳ ಬಳಕೆ, ನೀರಿನ ಸೌಲಭ್ಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಸಮಗ್ರ ಪರಿಶೀಲನೆ ನಡೆಸಿದಾಗ ಮಾತ್ರ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು.ಜಾಗೃತಿ ಮೂಡಲಿ: ಗ್ರಾಮಗಳ ಸ್ವಚ್ಛತೆ ಕೇವಲ ಅಧಿಕಾರಿ, ಜಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ಗ್ರಾಮಗಳ ಸ್ವಚ್ಛತೆ ಪರಿಕಲ್ಪನೆ ಜನರಲ್ಲಿಯೂ ಮೂಡಬೇಕು. ಈ ಬಗ್ಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಡಂಗೂರ ಸಾರಲಾಗಿದೆ. ಬಾಕಿ ಉಳಿದಿರುವ ವೈಯಕ್ತಿಕ ಶೌಚಾಲಯಗಳನ್ನು, ಸ್ಥಳವಿರುವ ಕುಟುಂಬಗಳನ್ನು ಗುರುತಿಸಿ ಶೌಚಾಲಯ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ತಾಪಂ ಇಒ ಎಚ್.ಎಸ್. ಜೆನಗಾ ತಿಳಿಸಿದರು.