ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ವಾರ್ತೆ - ಇರುವುದು ಒಂದೇ ಎಕರೆ ಜಮೀನು-ಮೈಸೂರು ತಾ. ಕಡಕೊಳ ರೈತ ಕೆ.ಎಲ್. ಸ್ವಾಮಿ ಸಾಧನೆಮೈಸೂರು ತಾಲೂಕು ಕಡಕೊಳದ ಕೆ.ಎಲ್. ಸ್ವಾಮಿ ಅವರಿಗೆ ಇರುವುದು ಒಂದೇ ಎಕರೆ ಜಮೀನು. ಆದರೆ ಕಳೆದ ಹದಿನೈದು ವರ್ಷಗಳಿಂದ ಉಪ ಕಸುಬಾಗಿ ಹೈನುಗಾರಿಕೆಯನ್ನು ಕೈಗೊಂಡು, ಉತ್ತಮ ಜೀವನ ನಡೆಸುತ್ತಿದ್ದಾರೆ.
ಜಮೀನಿನಲ್ಲಿ ಒಂದು ಕೊಳವೆ ಬಾವಿ ಕೊರೆಸಿದ್ದಾರೆ. ಅಲ್ಲಿ 30 ತೆಂಗಿನ ಮರಗಳಿವೆ. ಈ ವರ್ಷದಿಂದ ಫಲದ ನಿರೀಕ್ಷೆಯಲ್ಲಿದ್ದಾರೆ. ಉಳಿದಂತೆ ಜಾನುವಾರುಗಳಿಗಾಗಿ ಜೋಳ, ನೇಪಿಯರ್ ಹುಲ್ಲು ಬೆಳೆಯುತ್ತಾರೆ. ಅವರ ಬಳಿ ಎಚ್ಎಫ್-4, ಕ್ರಾಸ್-4 ಹಾಗೂ ಜರ್ಸಿ-2 ಹಸುಗಳಿವೆ. 5 ಕರುಗಳಿವೆ. 1 ಗೂಳಿ ಇದೆ. 10 ಮೇಕೆಗಳಿವೆ.ಎಲ್ಲಾ ಹಸುಗಳು ಹಾಲು ಕರೆಯುವಾಗ ಪ್ರತಿನಿತ್ಯ ಡೇರಿಗೆ 150-200 ಲೀಟರ್ ಹಾಲು ಪೂರೈಸುತ್ತಾರೆ. ಕೆಲವೊಂದು ಗಬ್ಬ ಆದಾಗ 80-100 ಲೀಟರ್ ಹಾಲು ಪೂರೈಸುತ್ತಾರೆ. ಇದರಿಂದ ಪ್ರತಿನಿತ್ಯ 3400- 7000 ರು.ವರೆಗೆ ಆದಾಯ ಬರುತ್ತದೆ. ದನದ ಕೊಟ್ಟಿಗೆಳನ್ನು ಸ್ವಚ್ಚ ಮಾಡಲು ಪ್ರೆಶರ್ ಗನ್, ಹಾಲು ಕರೆಯಲು ಯಂತ್ರ ಇಟ್ಟುಕೊಂಡಿದ್ದಾರೆ. ಜೋಳ, ಹುಲ್ಲು ಬೆಳೆಯಲು ಹಾಗೂ ತೆಂಗಿನ ಮರಗಳಿಗೆ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ. ಇದಲ್ಲದೇ ಹೆಚ್ಚುವರಿಯಾಗಿ ಉಳಿಯುವ ಕೊಟ್ಟಿಗೆ ಗೊಬ್ಬರವನ್ನು ವರ್ಷಕ್ಕೆ ಎರಡು ಬಾರಿ ತಲಾ 50 ಸಾವಿರ ರು.ಗಳಂತೆ ಮಾರಾಟ ಮಾಡುತ್ತಾರೆ.
ಮನೆಯಲ್ಲಿ ಅಪ್ಪ, ಅಮ್ಮ, ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸಿಸುತ್ತಾರೆ. ಈಗ ಮೂರು ಹಾಲು ಕೊಡುವುದು, ಏಳು ಗಬ್ಬ ಆಗಿರುವುದರಿಂದ ಹಾಲು ಸಿಗದಿರುವುದು ಇದೆ. ಇದನ್ನು ಸರಿದೂಗಿಸಿ, ಸರಾಸರಿ ಹಾಲು ಪೂರೈಕೆಗೆ ಯಾವುದೇ ತೊಂದರೆ ಆಗದಂತೆ ತಂಡಗಳನ್ನು ಮಾಡುವ ಯೋಚನೆ ಮಾಡಿದ್ದೇನೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಎಲ್ಲಾ ತಿಂಗಳುಗಳಲ್ಲೂ ಸರಾಸರಿ ಗರಿಷ್ಠ ಪ್ರಮಾಣದ ಹಾಲು ಪೂರೈಸಬಹುದು ಎನ್ನುತ್ತಾರೆ ಕೆ.ಎಲ್. ಸ್ವಾಮಿ.ಸಂಪರ್ಕ ವಿಳಾಸಕೆ.ಎಲ್ ಸ್ವಾಮಿ ಬಿನ್ ಲಕ್ಷ್ಮಣ
ಕಡಕೊಳಮೈಸೂರು ತಾಲೂಕು
ಮೈಸೂರು ಜಿಲ್ಲೆಮೊ.88848 39143 ಕೋಟ್
ಇನ್ನೊಬ್ಬರ ಬಳಿ ಕೆಲಸ ಮಾಡುವ ಬದಲು ನಮ್ಮ ಕೆಲಸ ನಾವ್ ಮಾಡಿಕೊಳ್ಳೋದು ಒಳ್ಳೆಯದು. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯವಿದೆ. ಬೆಳಗ್ಗೆ ಎರಡು ಗಂಟೆ, ಸಂಜೆ ಒಂದು ಗಂಟೆ ಕೆಲಸ ಮಾಡಿದರೆ ಉಳಿದ ಸಮಯದಲ್ಲಿ ಆರಾಮವಾಗಿ ಇರಬಹುಗು.- ಕೆ.ಎಲ್. ಸ್ವಾಮಿ, ಕಡಕೊಳ