ಮದುವೆಗೆ ಹೆಣ್ಣು ಸಿಗಲೆಂದು ಯುವಕರು ಹಂದರ ಹಾಕಿದರು!

KannadaprabhaNewsNetwork |  
Published : Feb 05, 2026, 02:45 AM IST
4ಎಚ್‌ಡಿಜಿ6ಮೈಲಾರದ ಡೆಂಕಣ ಮರಡಿಯಲ್ಲಿ ಕಾಯಿಕೋಲು ಸೇವೆ ಮಾಡುತ್ತಿರುವ ಭಕ್ತರು. | Kannada Prabha

ಸಾರಾಂಶ

ಮೈಲಾರ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ನಮ್ಮ ಹರಕೆಯ ಆಕೃತಿ ಮಾಡಿದರೆ ಸಾಕು ಅದು ಈಡೇರುತ್ತೆ ಎಂಬ ನಂಬಿಕೆಯಿಂದ, ನೆರೆದಿದ್ದ ಲಕ್ಷಾಂತರ ಭಕ್ತರು ತಮ್ಮಿಷ್ಟದ ಆಕೃತಿ ಮಾಡಿದ್ದು ಕಂಡು ಬಂತು.

ಹೂವಿನಹಡಗಲಿ: ಮೈಲಾರ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ನಮ್ಮ ಹರಕೆಯ ಆಕೃತಿ ಮಾಡಿದರೆ ಸಾಕು ಅದು ಈಡೇರುತ್ತೆ ಎಂಬ ನಂಬಿಕೆಯಿಂದ, ನೆರೆದಿದ್ದ ಲಕ್ಷಾಂತರ ಭಕ್ತರು ತಮ್ಮಿಷ್ಟದ ಆಕೃತಿ ಮಾಡಿದ್ದು ಕಂಡು ಬಂತು.

ರೈತಾಪಿ ಜನ ಮಳೆ ಬೆಳೆ ಚೆನ್ನಾಗಿ ಆಗಲಿ, ನಮ್ಮ ಜಮೀನಿನಲ್ಲಿ ಆಹಾರ ಧಾನ್ಯಗಳ ರಾಶಿ ಹೆಚ್ಚಾಗಲಿ ಎಂದು ಮಣ್ಣಿನಲ್ಲಿ ಧಾನ್ಯಗಳ ರಾಶಿ, ಜಮೀನುಗಳನ್ನು ಬಿತ್ತನೆ ಮಾಡಿರುವುದು, ಮನೆಗಳನ್ನು ಕಟ್ಟುವ ಆಕೃತಿಗಳು ಮಾಡಿದ್ದು ಕಂಡು ಬಂತು.

ಯುವಕರು ಮದುವೆ ಆಗಲು ಹೆಣ್ಣು ಸಿಗದ ಕಾರಣ ಡೆಂಕಣಮರಡಿಯಲ್ಲಿ ಕಟ್ಟಿಗೆ, ತೆಂಗಿನ ಗರಿಗಳಿಂದ ಹಂದರ ಹಾಕಿದ್ದರು. ಮರಡಿ ತುಂಬೆಲ್ಲ ಹೆಚ್ಚಾಗಿ ಕನ್ಯೆ ಸಿಗುವಂತೆ ಮಾಡಪ್ಪ ದೇವರೇ ಎಂದು ಬೇಡಿಕೊಳ್ಳುವ ಭಕ್ತರೇ ಹೆಚ್ಚಾಗಿದ್ದರು.

ನಾನು ಎರಡು ವರ್ಷದಿಂದ ಮೈಲಾರ ಜಾತ್ರೆ ಬರುತ್ತಿದ್ದೇನೆ. ನನ್ನ ಸ್ನೇಹಿತೆಯೊಬ್ಬಳು ಕಾರ್ಣಿಕದ ಸ್ಥಳದಲ್ಲೇ ಆಕೃತಿ ಮಾಡಿದರೆ ಆಸೆ ಈಡೇರುತ್ತದೆ ಎಂದು ಹೇಳಿದ್ದಳು. ಆ ಕಾರಣಕ್ಕಾಗಿ ನನಗೆ ವರ ಸಿಕ್ಕು ಮದುವೆ ಆಗಲಿ ಎಂದು ಹಸಿರು ಹಂದಿರ ಹಾಕಿ ಬೇಡಿಕೊಂಡಿದ್ದೇನೆ ಎಂದು ಜಗಳೂರಿನಿಂದ ಬಂದಿದ್ದ ಮಮತಾ ಹೇಳಿದರು.

ಬಾಬುದಾರರಿಗೆ ಪೊಲೀಸರು ತಡೆ

ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡಿನ ಒಳಗೆ ಪ್ರವೇಶಿಸದಂತೆ ದೇವರ ಸೇವಕರಾದ ಬಾಬುದಾರರನ್ನು ಪೊಲೀಸರು ತಡೆದಿದ್ದರು. ಒಳಗೆ ಬಿಡಿ ನಾವು ದೇವರ ಸೇವೆ ಮಾಡುವವರು ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಅವರನ್ನು ಪೊಲೀಸರು ಹೊರಗೆ ಅಟ್ಟಿದರು.

ಸ್ಥಳಕ್ಕೆ ಬಂದ ದೇವಸ್ಥಾನದ ಸಿಬ್ಬಂದಿಯೊಂದಿಗೆ ಚರ್ಚೆಗಿಳಿದ ಬಾಬುದಾರರು, ಬ್ಯಾರಿಕೇಡ್‌ ಒಳಗೆ ವಿಐಪಿ, ವಿವಿಐಪಿ ಪಾಸ್‌ ಕೊಟ್ಟು ಸಾವಿರಾರು ಜನರನ್ನು ಬಿಟ್ಟಿದ್ದೀರಿ. ದೇವರ ಸೇವೆ ಮಾಡುವ ನಮಗೆ ಕಸ ಹೊಡೆಯುವ ಕಾರ್ಮಿಕರಿಗೆ ಕೊಡುವ ಪಾಸ್‌ ನೀಡಿದ್ದೀರಿ ಎಂದು ಬಾಬುದಾರರು ಆಕ್ರೋಶ ವ್ಯಕ್ತಪಡಿಸಿದರು.

ದೇಗುಲ ವಂಶಪಾರಂಪರ್ಯ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಣಿಕ ಸ್ಥಳ ಡೆಂಕಣ ಮರಡಿಯ ಬ್ಯಾರಿಕೇಡ್‌ ಒಳಗೆ ಅಶ್ವರೂಢರಾಗಿ ಬರುತ್ತಿದ್ದರು. ಈ ವೇಳೆ ಪೊಲೀಸರು ಕ್ಷಣ ಹೊತ್ತು ತಡೆದು ನಿಲ್ಲಿಸಿದ್ದರು.500ಕ್ಕೂ ಹೆಚ್ಚು ಮಾಧ್ಯಮ ಪಾಸ್‌

ಡೆಂಕಣ ಮರಡಿಯ ಬ್ಯಾರಿಕೇಡ್‌ ಒಳಗೆ ಹೊಗಲು ಪತ್ರಕರ್ತರಿಗೆಂದು ಮಾಧ್ಯಮ ಪಾಸ್‌ ನೀಡಿದ್ದರು. ಪತ್ರಕರ್ತರ ಹೆಸರಿನಲ್ಲಿ 500ಕ್ಕೂ ಹೆಚ್ಚು ಮಾಧ್ಯಮ ಪಾಸ್‌ ಪಡೆದು ಬ್ಯಾರಿಕೇಡ್‌ ಒಳಗೆ ಭಕ್ತರು ನುಗ್ಗಿದ್ದರು. ಇದನ್ನು ಗಮನಿಸಿದ ಪೊಲೀಸರು ಮಾಧ್ಯಮದವರನ್ನೇ ಎಷ್ಟು ಜನ ಮಾಧ್ಯಮದವರು ಇದ್ದೀರಿ? ನಿಮ್ಮ ಕಾರ್ಡ್‌ ತೋರಿಸಿ. ಇಲ್ಲದಿದ್ದರೆ ಹೊರಗೆ ಹೋಗಿ ಎಂದು ಗದರಿಸಿದ ಘಟನೆ ಜರುಗಿತು.

ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ತಾವೇ ಫೀಲ್ಡ್‌ಗೆ ಇಳಿದು ಮಾಧ್ಯಮ ಪಾಸ್‌ ಹಾಕಿಕೊಂಡವರನ್ನು ಚೆಕ್‌ ಮಾಡುವ ಜತೆಗೆ ಮಾಧ್ಯಮದ ಕಾರ್ಡ್‌ಗಳನ್ನು ಪರಿಶೀಲನೆ ಮಾಡಿದ್ದು ಕಂಡು ಬಂತು.

ಟ್ರಾಫಿಕ್‌ ಜಾಮ್‌

ಮೈಲಾರ ಸೇತುವೆ ಬಳಿ ಹಾವೇರಿ ಜಿಲ್ಲೆಯ ಕಡೆಗೆ 8 ರಿಂದ 10 ಕಿ.ಮೀ ದೂರ, ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಹಾವೇರಿ, ರಾಣಿಬೆನ್ನೂರು, ಹುಬ್ಬಳ್ಳಿ, ಧಾರವಾಡ ಕಡೆಯಿಂದ ಬರುವ ಭಕ್ತರು ಮೈಲಾರ ಸೇತುವೆ ಮೂಲಕವೇ ಬರಬೇಕಿದೆ. ಆದರೆ. ಸಾಕಷ್ಟು ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕು ಹಾಕಿಕೊಂಡ ಭಕ್ತರು ಕೊನೆಗೂ ಕಾರ್ಣಿಕ ಸ್ಥಳಕ್ಕೆ ತೆರಳು ಸಾಧ್ಯವಾಗಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ