ಮನೆಯ ಮುಂದೆ ಇಟ್ಟಿದ್ದ ರಾಗಿ ಚೀಲಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಒಂದು ತಿಂಗಳಲ್ಲಿ ಮಾಲು ಸಮೇತ ಬಂಧಿಸಿ ಆರೋಪಿಗಳಿಂದ ಸುಮಾರು 1.55 ಲಕ್ಷ ರು. ಬೆಲೆಯ 3,713 ಕೆಜಿ ರಾಗಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ಗುಬ್ಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಮನೆಯ ಮುಂದೆ ಇಟ್ಟಿದ್ದ ರಾಗಿ ಚೀಲಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಒಂದು ತಿಂಗಳಲ್ಲಿ ಮಾಲು ಸಮೇತ ಬಂಧಿಸಿ ಆರೋಪಿಗಳಿಂದ ಸುಮಾರು 1.55 ಲಕ್ಷ ರು. ಬೆಲೆಯ 3,713 ಕೆಜಿ ರಾಗಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ಗುಬ್ಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಬ್ಬಿ ಪಟ್ಟಣದ ಹೊರ ವಲಯ ಹೇರೂರು ಗ್ರಾಮದ ರೈತ ರಾಜೇಶ್ ಎಂಬಾತ ತನ್ನ ಮನೆಯ ಮುಂದೆ ಜೋಡಿಸಿ ಇಟ್ಟಿದ್ದ 30 ರಾಗಿ ಚೀಲವನ್ನು ಕಳ್ಳರು ಕೈ ಚಳಕ ತೋರಿ ಕದ್ದೊಯ್ದಿದ್ದರು. ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ಪ್ರಕರಣ ದಾಖಲಿಸಿದ್ದರು. ಖಚಿತ ಮಾಹಿತಿ ಆಧರಿಸಿ ಒಂದು ತಿಂಗಳಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು ಗುಬ್ಬಿ ಪಟ್ಟಣದ ಮಹಾಲಕ್ಷ್ಮಿನಗರ ಬಡಾವಣೆಯ ಪ್ರಶಾಂತ್ ಕುಮಾರ್(30) ಹಾಗೂ ಚೇಳೂರು ಹೋಬಳಿ ಸಾತೇನಹಳ್ಳಿ ಗೇಟ್ ಬಳಿಯ ರಾಜು(25) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಹೇರೂರು ರಾಗಿ ಚೀಲ ಕಳವು ಕೇಸಿನ ಬಗ್ಗೆ ತನಿಖೆ ಕೈಗೊಂಡ ಸಮಯದಲ್ಲೇ ಆರೋಪಿಗಳಿಂದ ಕಲ್ಲೂರು ಕ್ರಾಸ್ ಬಳಿಯಲ್ಲಿ ಮತ್ತೊಂದು ಕಳ್ಳತನದ ಪ್ರಕರಣ ಬೆಳಕಿಗೆ ಬಂದಿತ್ತು. ಇದರಿಂದಾಗಿ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಮಾಲು ಸಮೇತ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಾ ಉಪವಿಭಾಗದ ಡಿವೈಎಸ್ಪಿ ಬಿ.ಕೆ ಶೇಖರ್ ರವರ ಮಾರ್ಗದರ್ಶನದಲ್ಲಿ ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ರವರ ನೇತೃತ್ವದ ತಂಡ ಗುಬ್ಬಿ ಪಿಎಸ್ಐ ಸುನಿಲ್ ಕುಮಾರ್ ಮತ್ತು ಸಿಬ್ಬಂದಿಗಳಾದ ನವೀನ್ ಕುಮಾರ್, ವಿಜಯ್, ಪ್ರಶಾಂತ್, ರಬ್ಬಾನಿ, ಭೂತೇಶ್, ನಟರಾಜು ಅವರನ್ನು ಒಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ ರವರು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.