ಶಿವಕುಮಾರ ಕುಷ್ಟಗಿ
ಆಸ್ಪತ್ರೆಯ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ವಿಭಾಗವಾದ ಆಪರೇಷನ್ ಥಿಯೇಟರ್ಗೆ ಅಳವಡಿಸಿದ್ದ ಏರ್ ಕಂಡಿಷನರ್ ವ್ಯವಸ್ಥೆಯ ತಾಮ್ರದ ಪೈಪ್ಗಳನ್ನು ಕಳ್ಳರು ಅತ್ಯಂತ ನಿರ್ದಯವಾಗಿ ಕತ್ತರಿಸಿ ಕೊಂಡೊಯ್ದಿದ್ದಾರೆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ತಂಪು ವಾತಾವರಣವಿಲ್ಲದಿದ್ದರೆ ಸೋಂಕಿನ ಭೀತಿ ಹೆಚ್ಚಿರುತ್ತದೆ. ಹೀಗಾಗಿ, ವೈದ್ಯರು ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತಾಗಿದೆ. ತುರ್ತು ಹೆರಿಗೆ ಮತ್ತು ಆಪರೇಷನ್ಗಾಗಿ ದಾಖಲಾಗಿದ್ದ ಬಡ ರೋಗಿಗಳನ್ನು ಕೊನೆಯ ಕ್ಷಣದಲ್ಲಿ ಬೇರೆಡೆಗೆ ಕರೆದೊಯ್ಯುವಂತೆ ಸೂಚಿಸುತ್ತಿರುವುದರಿಂದ, ಹೆತ್ತವರು ದಿಕ್ಕುತೋಚದೆ ಕಣ್ಣೀರು ಹಾಕುತ್ತಿದ್ದಾರೆ.
ಉಸಿರಾಟಕ್ಕೆ ತೊಂದರೆ: ಕಳ್ಳರ ಕೈಚಳದಿಂದಾಗಿ ಎಸಿ ಸ್ಥಗಿತಗೊಂಡ ಬೆನ್ನಲ್ಲೇ ಆಸ್ಪತ್ರೆಯ ಪ್ರಮುಖ ಸ್ಥಳಗಳಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ತಾಯಿ, ಮಗುವಿನ ವಾರ್ಡ್ಗಳಲ್ಲಿ ಮತ್ತು ತೀವ್ರ ನಿಗಾ ಘಟಕದ 2 ಎಸಿಗಳು ತಾಮ್ರದ ಪೈಪ್ ಲೈನ್ ಸ್ಥಗಿತದಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳ್ಳರು ಮಾಡಿದ ಕೆಲವೇ ಕೆಲವು ರುಪಾಯಿಗಳ ಲಾಭದ ಆಸೆಯ ಕಳ್ಳತನ ಆಸ್ಪತ್ರೆಯ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡುವ ಹಂತಕ್ಕೆ ಬಂದಿದೆ.ವ್ಯಾಪಕ ಕಳ್ಳತನ: ಒಂದೇ ತಿಂಗಳಲ್ಲಿ 2ನೇ ಬಾರಿ ತಾಮ್ರದ ಪೈಪ್ ಕಳ್ಳತನವಾಗಿದೆ. ಇದರೊಟ್ಟಿಗೆ ಆಸ್ಪತ್ರೆಗೆ ಬರುವ ಗ್ರಾಮೀಣ ಮಹಿಳೆಯರು ಮತ್ತು ಸಾರ್ವಜನಿಕರ ಹತ್ತಾರು ಭಾರೀ ಬೆಲೆಬಾಳುವ ವಸ್ತುಗಳನ್ನು, ಮೊಬೈಲ್ಗಳನ್ನು ಕೂಡಾ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಹಾಗಾಗಿ ಈ ಆಸ್ಪತ್ರೆ ಕಳ್ಳರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆ.
ನಂತರ ವೈದ್ಯಕೀಯ ಕಾಲೇಜಿನ ನಿಮಯಗಳ ಪ್ರಕಾರ ಈ ಆಸ್ಪತ್ರೆಯನ್ನು ಕಾಲೇಜು ಆವರಣದಲ್ಲಿ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಈ ಆಸ್ಪತ್ರೆ ಇಲ್ಲಿಯೇ ಮುಂದುವರಿದಿದೆ. ಹಾಗಾಗಿ ಈಗ ಇದರ ನಿರ್ವಹಣೆಯನ್ನು ಮರಳಿ ಡಿಎಚ್ಒ ಅವರಿಗೆ ನೀಡಲಾಗಿದೆ. ಈ ಎಲ್ಲ ಗೊಂದಲಗಳಿಂದಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹತ್ತಾರು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವುದು ಸಮಸ್ಯೆ ಹಿಂದಿರುವ ಸತ್ಯವಾಗಿದೆ.
ಸರಿಪಡಿಸುವ ಪ್ರಯತ್ನ: ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ. ಸಿಸಿ ಕ್ಯಾಮೆರಾ ಸೇರಿದಂತೆ ಇನ್ನುಳಿದ ಸಂಪೂರ್ಣ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಯನ್ನು ಇತ್ತೀಚೆಗಷ್ಟೇ ನಮ್ಮ ವ್ಯಾಪ್ತಿಗೆ ನೀಡಿದ್ದಾರೆ ಎಂದು ಡಿಎಚ್ಒ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.