ಈ ಬಾರಿ ಹನ್ನೊಂದು ದಿನಗಳ ದಸರಾ...!

KannadaprabhaNewsNetwork | Published : Jun 19, 2025 11:48 PM

ಮೈಸೂರು: ದಸರಾ ಆರಂಭವಾಗುವ ಸೆಪ್ಟೆಂಬರ್‌ ತಿಂಗಳ ಶುಕ್ಲಪಕ್ಷದಲ್ಲಿ ಎರಡು ಪಂಚಮಿ ಬರುವುದರಿಂದ ವಿಜಯದಶಮಿಯು ಹನ್ನೊಂದು ದಿನಕ್ಕೆ ಹೋಗಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಜಂಬೂಸವಾರಿ ಮೆರವಣಿಗೆಯ ಅಂತಿಮ ದಿನಾಂಕವನ್ನು ಸರ್ಕಾರ ತೀರ್ಮಾನಿಸಲಿದೆ.

ಮೈಸೂರು: ದಸರಾ ಆರಂಭವಾಗುವ ಸೆಪ್ಟೆಂಬರ್‌ ತಿಂಗಳ ಶುಕ್ಲಪಕ್ಷದಲ್ಲಿ ಎರಡು ಪಂಚಮಿ ಬರುವುದರಿಂದ ವಿಜಯದಶಮಿಯು ಹನ್ನೊಂದು ದಿನಕ್ಕೆ ಹೋಗಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಜಂಬೂಸವಾರಿ ಮೆರವಣಿಗೆಯ ಅಂತಿಮ ದಿನಾಂಕವನ್ನು ಸರ್ಕಾರ ತೀರ್ಮಾನಿಸಲಿದೆ.

ಮಹಾಲಯ ಅಮಾವಾಸ್ಯೆಯ ಬಳಿಕ ಆರಂಭವಾಗಬೇಕಾದ ನವರಾತ್ರಿಯು ಈ ಬಾರಿ ದಶರಾತ್ರಿಯಾಗಲಿದೆ. ಅಂದರೆ ಹನ್ನೊಂದನೇ ದಿನಕ್ಕೆ ವಿಜಯದಶಮಿ ಬರಲಿದೆ. ಇದು ದಸರಾ ಮಹೋತ್ಸವ ಇತಿಹಾಸದಲ್ಲಿಯೇ ಅಪರೂಪದ ಪ್ರಸಂಗದಂತಿದೆ.

ನಿಯಮದಂತೆ ಸೆ. 21ಕ್ಕೆ ಮಹಾಲಯ ಅಮಾವಾಸೆ ಮುಗಿದ ಮಾರನೆ ದಿನ ಅಂದರೆ ಸೆ. 22 ರಂದು ನವರಾತ್ರಿ ಆರಂಭವಾಗಬೇಕು. ಆದರೆ ಸೆ. 26 ಮತ್ತು 27 ಪಂಚಮಿ ಬಂದಿರುವುದರಿಂದ ನವರಾತ್ರಿಯ ದಿನಗಳು ದಶರಾತ್ರಿಯಾಗಿ ಮಾರ್ಪಟ್ಟಿವೆ. ಅ. 2ರ ಗಾಂಧಿ ಜಯಂತಿಯಂದು ವಿಜಯದಶಮಿ ನಡೆಯಲಿದೆ. ಅಲ್ಲಿಗೆ 11 ದಿನವಾಗಲಿದೆ.

ದಸರಾ ಆರಂಭದ ದಿನಗಳಿಂದಲೂ ನವರಾತ್ರಿಯನ್ನು ಯದುವಂಶಸ್ಥರು ಚಾಚೂ ತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಸಾಮಾನ್ಯ ಪಂಚಾಂಗಕ್ಕೂ, ಅರಮನೆ ಪಂಚಾಂಗಕ್ಕೂ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ನಡೆಯುವ ವಿಜಯದಶಮಿಗೂ, ಸರ್ಕಾರದ ವಿಜಯದಶಮಿಗೂ ವ್ಯತ್ಯಾಸವಾಗಬಹುದು.

ಒಂದು ವೇಳೆ ಎರಡು ದಿನದ ಚೌತಿಯನ್ನು ಒಂದೇ ದಿನಕ್ಕೆ ಲೆಕ್ಕ ಹಾಕಿದರೆ ಅ. 1ರ ಮಹಾನವಮಿಯಂದೆ ವಿಜಯದಶಮಿ ಮಾಡಬೇಕಾಗುತ್ತದೆ. ಇಲ್ಲವೇ ನವರಾತ್ರಿ ಆರಂಭವನ್ನು ಸೆ. 23 ರಿಂದ ಆರಂಭಿಸಬೇಕಾಗುತ್ತದೆ. 400 ವರ್ಷಗಳಲ್ಲಿ ಇಂತಹ ಘಟನೆ ನಡೆದಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಇದು ಅನೇಕರಿಗೆ ಗೊಂದಲವನ್ನುಂಟು ಮಾಡಿದ್ದು, ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವರಾತ್ರಿ ಮುಗಿದು ಹತ್ತನೇ ದಿನ ವಿಜಯದಶಮಿ ಬರಲಿದೆ. ದಸರಾ ಮಹೋತ್ಸವ ಹನ್ನೊಂದು ದಿನ ಬಂದರೂ ಅದರ ಲೆಕ್ಕ ಹತ್ತು ದಿನಗಳೇ ಆಗಿರುತ್ತದೆ. ಪಂಚಾಂಗದಲ್ಲಿ ಯಾವ ರೀತಿ ಆಚರಣೆ ಮಾಡಬೇಕು ಎಂಬುದನ್ನು ನೋಡಿ ಹೇಳಬೇಕಿದೆ ಎಂದು ಹಿರಿಯ ಪುರೋಹಿತರಾದ ಜನಾರ್ಧನ್ ಅಯ್ಯಂಗಾರ್‌ ಹೇಳಿದರು.

ಈ ಹಿಂದೆ ನವಮಿ- ದಶಮಿ ಸಮಾಗಮವಾಗಿತ್ತು:

2005 ಮತ್ತು 2014ರಲ್ಲಿ ನವಮಿ ಮತ್ತು ದಶಮಿ ಸಮಾಗಮವಾಗಿತ್ತು. ಅರಮನೆ ಪಂಚಾಂಗ, ಕಾಲದ ಲೆಕ್ಕಾಚಾರ, ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ನೋಡಿಕೊಂಡು ಕಾಳಿ ಪುರಾಣದ ಪ್ರಕಾರ ಈಗಲೂ ಪೂಜೆ ನಡೆಯುವುದರಿಂದ ಆ ಎರಡು ವರ್ಷಗಳಲ್ಲಿ ನವಮಿ ಮತ್ತು ದಶಮಿ ಸಮಾಗಮಗೊಂಡಿತ್ತು. ಆಗ ನವಮಿಯು ಅ. 2ರಂದು ಬೆಳಗ್ಗೆ ಆರಂಭವಾಗಿ, ಅ. 3 ರಂದು ಸೂರ್ಯೋದಯದ ನಂತರ ಮುಕ್ತಾಯವಾಗಿತ್ತು. ಬಳಿಕ ವಿಜಯದಶಮಿ ಆರಂಭವಾಗಿತ್ತು.

ಆಗಲೂ ಕನ್ನಡಪ್ರಭ ಈ ಸಂಬಂಧ ವಿಶೇಷ ಲೇಖನ ಪ್ರಕಟಿಸಿತ್ತು.