ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿಅಭಿವೃದ್ಧಿ ಎಂದರೆ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಅದು ಎಂದು ನಿಲ್ಲಬಾರದು, ಹಾಗಾಗಿ ದಣಿವರಿಯದೆ ದುಡಿಯುವವರು ನಿಜವಾದ ಜನಪ್ರತಿನಿಧಿಗಳು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಫಿನಿಕ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ಜನಸೇವೆ ನಿರಂತರ ಪ್ರಕ್ರಿಯೆಯಾಗಬೇಕು. ಅಧಿಕಾರದ ಮದ ತಲೆಗೆ ಹತ್ತಬಾರದು. ನಾವು ಅಧಿಕಾರದಲ್ಲಿ ಇರುತ್ತೇವೆಯೋ, ಇಲ್ಲವೊ ಗೊತ್ತಿಲ್ಲ, ಆದರೆ ಜನರ ಹೃದಯದಲ್ಲಿ ನಿರಂತರವಾಗಿರಬೇಕು. ಹಾಗಾಗಿ ಕೆಲಸ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ನಾನು ನಿರಂತರವಾಗಿ ಜನಸೇವೆಗೆ ಸಿದ್ಧನಿರುತ್ತೆನೆ. ಆ ಹಿನ್ನೆಲೆ ಇಂದು ನನ್ನ ಜನ್ಮದಿನವನ್ನು ಜನರ ಮಧ್ಯದಲ್ಲಿ ಆಚರಿಸಿಕೊಳ್ಳುತ್ತಿರುವುದು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದರು.ಫಿನಿಕ್ಸ್ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ, ನಂಜುಂಡಪ್ಪ ವರದಿಯ ಪ್ರಕಾರ ಶಿಗ್ಗಾಂವಿ-ಸವಣೂರು ಕ್ಷೇತ್ರ ಅಭಿವೃದ್ಧಿ ಕಾಣದ ತಾಲೂಕುಗಳ ಪಟ್ಟಿಯಲ್ಲಿತ್ತು. ಆದರೆ ೨೦೦೮ರ ನಂತರ ಬಸವರಾಜ ಬೊಮ್ಮಾಯಿ ಅವರು ಶಾಸಕರಾದ ನಂತರ ಕ್ಷೇತ್ರವನ್ನು ಅಭಿವೃದ್ಧಿಯ ಸಾಲಿನಲ್ಲಿ ತಂದರು. ಇಂತಹ ನಾಯಕರ ಜನ್ಮದಿನದಂದು ನಮ್ಮ ಸಂಸ್ಥೆಯಿಂದ ೧೬ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವಂತಹ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಫಿನಿಕ್ಸ್ ಸ್ಕೂಲ್ನ ಅಧ್ಯಕ್ಷ ಡಾ. ಮೃತ್ಯುಂಜಯ ತಿರ್ಲಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉದ್ಯಮಿ ಭರತ ಬಸವರಾಜ ಬೊಮ್ಮಾಯಿ, ಕೆಎಂಎಫ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ಶಿವಾನಂದ ಮ್ಯಾಗೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಅರೂಣಕುಮಾರ ಪೂಜಾರ, ಡಾ. ರಾಣಿ ಮೃತ್ಯುಂಜಯ ತಿರ್ಲಾಪೂರ, ಶಿವಾನಂದ ಮ್ಯಾಗೇರಿ, ಮಂಜುನಾಥ ಕೆ. ಸೇರಿದಂತೆ ಇತರರಿದ್ದರು.