ಅಧಿಕಾರ ದುರ್ಬಳಸಿ ಸಾವಿರಾರು ಎಕರೆ ಭೂಮಿ ಕಬಳಿಕೆ

KannadaprabhaNewsNetwork |  
Published : Feb 17, 2026, 02:00 AM IST
ವಿಜೆಪಿ ೧೪ವಿಜಯಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅಕ್ಕೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಹಾಗೂ ಹೋರಾಟಗಾರರು ಇದ್ದರು. | Kannada Prabha

ಸಾರಾಂಶ

ವಿಜಯಪುರ: ದೇವನಹಳ್ಳಿ ತಾಲೂಕಿನ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಸುತ್ತಮುತ್ತ ಮಾಜಿ ಶಾಸಕ ಎಂ.ಎರ್.ಜಯರಾಮ್ ಶಾಸಕರ ಅವಧಿಯಲ್ಲಿ ಅಧಿಕಾರ ದುರ್ಬಳಸಿಕೊಂಡು, ಸಾವಿರಾರು ಎಕರೆ ಭೂಮಿ ಕಬಳಿಸಿದ್ದು, ಅವರ ಮೇಲಿನ ಭೂಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು

ವಿಜಯಪುರ: ದೇವನಹಳ್ಳಿ ತಾಲೂಕಿನ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಸುತ್ತಮುತ್ತ ಮಾಜಿ ಶಾಸಕ ಎಂ.ಎರ್.ಜಯರಾಮ್ ಶಾಸಕರ ಅವಧಿಯಲ್ಲಿ ಅಧಿಕಾರ ದುರ್ಬಳಸಿಕೊಂಡು, ಸಾವಿರಾರು ಎಕರೆ ಭೂಮಿ ಕಬಳಿಸಿದ್ದು, ಅವರ ಮೇಲಿನ ಭೂಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.ಪಟ್ಟಣದದಲ್ಲಿ, ಭಾರತ್ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ, ರಾಷ್ಟ್ರೀಯ ಕಿಸಾನ್ ಮೋರ್ಚಾ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ೧೯೭೨ರಲ್ಲಿ ಎಂ.ಆರ್.ಜಯರಾಂ, ದೇವನಹಳ್ಳಿ ಶಾಸಕರಾಗಿದ್ದ ವೇಳೆ ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗುಂಡುತೋಪುಗಳು, ಕೆರೆ, ಕುಂಟೆ, ದೇವಾಲಯಗಳು, ಕುಡಿಯುವ ನೀರಿನ ಬಾವಿ, ಹಳ್ಳಿಗಳಿಗೆ ಸಂಚರಿಸಲು ನಿರ್ಮಿಸಿದ್ದ ರಸ್ತೆಗಳು, ಅರಳಿಕಟ್ಟೆಗಳು ಸೇರಿದಂತೆ ಅನೇಕ ಗೋಮಾಳಗಳನ್ನು ಕಬಳಿಸಿದ್ದಾರೆ. ಒಂದೇ ಕುಟುಂಬದ ಹಲವರ ಹೆಸರಿನಲ್ಲಿ, ನೂರಾರು ಎಕರೆ ಭೂಮಿ ಮಂಜೂರಾಗಿರುವಂತೆ ದಾಖಲೆಗಳು ಸೃಷ್ಟಿಸಿಕೊಂಡಿದ್ದಾರೆ ಎಂದು ಗ್ರಾಮ ಮುಖಂಡ ಮುನಿರಾಜು ಆರೋಪಿಸಿದರು.

ಅಕ್ಲೇನಹಳ್ಳಿ-ಮಲ್ಲೇನಹಳ್ಳಿಯಲ್ಲಿ ಪರಿಶಿಷ್ಟ ಜಾತಿ-ಪಂಗಡದ ಕುಟುಂಬಗಳು ವಾಸವಿದ್ದು ನಮೂನೆ-೫೦ರಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಹಾಕಿದ್ದೆವು. ಅಲ್ಲಿಂದ ನಮ್ಮನ್ನು ಓಡಿಸಿದರು. ಅಲ್ಲಿಂದ ಬಂದ ನಾವು, ಸ.ನಂ.೩ ರಲ್ಲಿ ಖರಾಜು ಜಾಗದಲ್ಲಿ ಬಂಡೆಗಳ ಜಾಗದಲ್ಲಿ ಮನೆಗಳು ನಿರ್ಮಿಸಿಕೊಂಡಿದ್ದೇವೆ. ಈಗ ಅಲ್ಲಿಂದಲೂ ನಮ್ಮನ್ನು ತೆರವುಗೊಳಿಸಲು ಹುನ್ನಾರಗಳು ನಡೆಯುತ್ತಿವೆ. ನಾವು ಭೂ ಮಂಜೂರಾತಿಗಾಗಿ ಬೇಡಿಕೆಯಿಟ್ಟಿದ್ದ ನಮ್ಮ ಭೂಮಿ ನಮಗೆ ವಾಪಸ್ಸು ಕೊಡುವಂತೆ ನ್ಯಾಯಾಲಯಕ್ಕೂ ಹೋಗಿದ್ದೆವು. ನ್ಯಾಯಾಲಯ ಪರಿಶಿಷ್ಟ ಜಾತಿ, ಪಂಗಡದವರಿಗೆ ಸೇರಿದ, ಒತ್ತುವರಿ ಭೂಮಿಯನ್ನು ತೆರವುಗೊಳಿಸುವಂತೆ ಆದೇಶ ಮಾಡಿತ್ತು. ಈ ಹಿಂದೆ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ಜಾಗವನ್ನು ಗುರುತಿಸಿದ್ದರು. ನಾಮಫಲಕಗಳನ್ನು ಹಾಕಿದ್ದರು. ಜಿಲ್ಲಾಧಿಕಾರಿ ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ದರು. ಆದರೆ, ಏಕಾಏಕಿ ಜಿಲ್ಲಾಧಿಕಾರಿ ವರ್ಗಾವಣೆಯಾದರು. ಈಗ ತಾಲೂಕು ಕಚೇರಿಯಲ್ಲಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳೇ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಹಿರಿಯ ವಕೀಲ ಸಿದ್ಧಾರ್ಥ ಮಾತನಾಡಿ, ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ, ಬಡವರ ಭೂಮಿ ಕಬಳಿಕೆ ಜಾಸ್ತಿಯಾಗಿದೆ. ವಿದೇಶಿ ಕಂಪನಿಗಳಿಗೆ ಕೋಟ್ಯಂತರ ರುಪಾಯಿಗಳಿಗೆ ಮಾರುತ್ತಿದ್ದಾರೆ. ಅಧಿಕಾರಿ ವರ್ಗವೇ ಇದಕ್ಕೆ ಬೆಂಬಲ ನೀಡಿ, ಅವರಿಗೆ ಬೇಕಾಗಿರುವಂತಹ ಎಲ್ಲಾ ದಾಖಲೆಗಳನ್ನು ಒದಗಿಸಿಕೊಡುತ್ತಿದ್ದಾರೆ. ರೈತರು ದಾಖಲೆಗಳು ಕೇಳಿದರೆ ಸಿಗಲ್ಲ, ಭೂಮಾಫಿಯಾದವರಿಗೆ ಅರ್ಧ ಗಂಟೆಯಲ್ಲಿ ಅವರು ಕೇಳಿದ ದಾಖಲೆಗಳು ಲಭ್ಯವಾಗುತ್ತಿವೆ. ರಾಜ್ಯ ಸರ್ಕಾರ, ಭೂ ಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ೫೦ಕ್ಕೂ ಹೆಚ್ಚು ಕುಟುಂಬಗಳಿಗೆ ಹಳೇಯ ಊರು, ಅವರು ಕಳೆದುಕೊಂಡಿರುವ ಆಸ್ತಿಗಳನ್ನು ಪುನಃ ಅವರಿಗೆ ತಿರುಗಿಸಿಕೊಡಬೇಕು. ಸರ್ಕಾರ ನಿರ್ಲಕ್ಷಿಸಿದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಮುಖಂಡರಾದ ಚಿಕ್ಕೇಗೌಡ, ನಾರಾಯಣಸ್ವಾಮಿ, ಮುನಿಶಾಮಪ್ಪ, ದೇವರಾಜ್, ಗೌರಮ್ಮ, ವಕೀಲ ಮೂರ್ತಿ, ಮುನಿರಾಜು, ಶಿವಪ್ಪ, ಮುನಿರಾಜು, ರವಿ, ಇತರರು ಹಾಜರಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರದಲ್ಲಿ ಹೋಬಳಿಯ ಅಕ್ಕೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಹಾಗೂ ರೈತ ಹೋರಾಟಗಾರರು ಕಬಳಿಸಿರುವ ನಮ್ಮ ಭೂಮಿ ವಾಪಸ್‌ ತಿರುಗಿಸಿಕೊಡುವಂತೆ ಆಗ್ರಹಿಸಿ ಸಭೆಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳವು ಪ್ರಕರಣ: ಆರೋಪಿ ಬಂಧನ
ಸ್ವರ ತಾನನದಿಂದ ಮನಸ್ಸಿನ ತಲ್ಲಣಗಳು ದೂರ: ಗಿರಿಧರ್