ಕನ್ನಎಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರವು ಕಲಾವಿದರ, ಸಾಹಿತಿಗಳ ನಾಡು ಎಂದು ಮೊದಲಿನಿಂದಲೂ ಕರೆಯಿಸಿಕೊಂಡಿದ್ದು, ಅಂಥ ನಗರದ ಕಲಾವಿದರಿಗೆ, ಸಾಹಿತಿಗಳಿಗೆ, ಸಮಾಜ ಸೇವಕರಿಗೆ ಸರ್ಕಾರದ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ ಕಳೆದ ವ಼ರ್ಷ ನಗರದ ಮೂವರು ಕಲಾವಿದರಿಗೆ ಹಾಗೂ ಒಂದು ಸಂಸ್ಥೆಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಅದರಂತೆ ಮತ್ತೆ ಈ ವರ್ಷ ಓರ್ವ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದರೆ, ಇನ್ನೂ ಮೈಸೂರು ರಾಜ್ಯ ಕರ್ನಾಟಕವೆಂದು ಮರುನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೊಡಮಾಡುತ್ತಿರುವ ಸುವರ್ಣೋತ್ಸವ ಸಂಭ್ರಮ ಪ್ರಶಸ್ತಿಗೆ ನಗರದ ಮೂವರು ಕಲಾವಿದರು ಆಯ್ಕೆಯಾಗಿದ್ದಾರೆ.ತಮ್ಮ ಜೀವನದುದ್ದಕ್ಕೂ ಕಲಾ ಸೇವೆ ಮಾಡಿದ ಹಿರಿಯ ಕಲಾವಿದರಾದ ಸುನಂದಾ ಕಂದಗಲ್ಲ, ಸಾಹಿತ್ಯ ಸೇವೆಯಲ್ಲಿ ಸಿತಿಮಾ ವಜ್ಜಲ ಹಾಗೂ ಸಮಾಜ ಸೇವೆಗೆ ನೀಲಕಂಠ ಕಾಳಗಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಗಳು ಲಭಿಸಿವೆ.
ಸುನಂದಾ ಕಂದಗಲ್ಲ:ಅರವತ್ತೆಂಟು ವರ್ಷದ ಸುನಂದಾ ಕಂದಗಲ್ಲ ಅವರು ತಮ್ಮ ಬಾಲ್ಯದಿಂದಲೇ ರಂಗ ಸೇವೆಯಲ್ಲಿದ್ದು, ಧಾರವಾಹಿ, ಚಲನಚಿತ್ರ ಹಾಗೂ ಹವ್ಯಾಸಿ ರಂಗ ಸೇವೆ ಮಾಡುತ್ತಿರುವ ಹಿರಿಯ ಕಲಾವಿದರಾಗಿದ್ದಾರೆ. ಇವರಿಗೆ ೧೯೮೪ರಲ್ಲಿ ಡಾ.ರಾಜಕುಮಾರ ಪಾರಿತೋಷಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.
ಸಿತಿಮಾ ವಜ್ಜಲ:ಸಿತಿಮಾ ವಜ್ಜಲ ರವರ ಪೂರ್ಣ ಹೆಸರು ಸಿದ್ದಪ್ಪ ತಿಮ್ಮಪ್ಪ ಮಾದರಾಗಿದ್ದು ಊರು ವಜ್ಜಲ ಆಗಿದೆ. ಸಿತಿಮಾವರು ಪ್ರಸಿದ್ಧ ಸಾಹಿತಿಗಳಾಗಿದ್ದು, ಇವರು ರಚಿಸಿರುವ ಕವನಗಳು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದು ಪ್ರಕಟಗೊಂಡಿವೆ. ಮೂಲತಃ ಕೃಷಿಕರಾಗಿರುವ ಸಿದ್ದಪ್ಪಗೆ ಪಿಎಚ್ಡಿ ಪದವಿಯು ಲಭಿಸಿದೆ.
ನೀಲಕಂಠ ಕಾಳಗಿ:ವೃತ್ತಿಯಲ್ಲಿ ಶಿಕ್ಷಕರಾದ ಇವರು ಸಮಾಜ ಸೇವಕರು ಕೂಡಾ ಆಗಿದ್ದಾರೆ. ೬೪ ವರ್ಷದ ನೀಲಕಂಠರು ಎಂಎ, ಬಿಎಡ್ ಶಿಕ್ಷಣ ಪಡೆದು ೩೪ ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಇವರು ರಚಿಸಿರುವ ಆರು ಕೃತಿಗಳು ಪ್ರಕಟಗೊಂಡಿವೆ. ಇವರಿಗೂ ಕೂಡ ಇಂದು ಸುವರ್ಣ ಸಂಬ್ರಮ ಪ್ರಶಸ್ತಿ ಬಂದಿದೆ. ಈ ಎಲ್ಲ ಮಹನಿಯರಿಗೆ ಪೂಜ್ಯ ಗುರುಮಹಾಂತ ಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಮಾಜ ಸೇವಕ ಎಸ್.ಆರ್.ನವಲಿಹಿರೇಮಠ, ಸ್ನೇಹರಂಗ ಹಾಗೂ ಅನೇಕ ಸಂಘ ಸಂಸ್ತೆಗಳು ಅಭಿನಂದಿಸಿವೆ.
ಗುರುಗಳಾದ ನೀಲಕಂಠ ಕಾಳಗಿ ಅವರು ಕನ್ನಡ ವಿಕಸನ ಕೇಂದ್ರದ ಮೂಲಕ ಕನ್ನಡದ ಬಗೆಗೆ ಅನೇಕ ಚಟುವಟಿಕೆ ಮಾಡಿದ್ದು, ನನಗೆ ಬಾಲ್ಯದಿಂದಲೇ ಕನ್ನಡ ಅಭಿಮಾನ ಹುಟ್ಟುವಂತೆ ಮಾಡಿದ್ದಾರೆ. ಇವರ ಪ್ರತಿಯೊಂದು ನಡೆಯಲ್ಲಿಯೂ ಕನ್ನಡ ಅನುರಣಿಸಿದೆ. ನಮ್ಮ ಗುರುಗಳಿಗೆ ಈ ಪ್ರಶಸ್ತಿ ಬಂದಿರುವುದು ತುಂಬಾ ಸಂತಸದ ಸಂಗತಿ. ನಾನು ಸಣ್ಣವನಿದ್ದಾಗಿನಿಂದಲೂ ಇವರ ನೇತೃತ್ವದಲ್ಲಿ ನಡೆಯುವ ಪ್ರತಿ ವರ್ಷದ ರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿರುವುದು ನನ್ನ ಹೆಮ್ಮೆ. ಶಿವರಾಜ ವಿಶ್ವನಾಥ, ಇಲಕಲ್ಲ