ಪುತ್ರ ಉದಯನಿಧಿಗೆ ಶೀಘ್ರ ಡಿಸಿಎಂ ಪಟ್ಟ: ಸ್ಟಾಲಿನ್‌ ಸುಳಿವು

KannadaprabhaNewsNetwork | Published : Sep 25, 2024 12:48 AM

ಸಾರಾಂಶ

ತಮ್ಮ ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ಗೆ ಶೀಘ್ರವೇ ಉಪಮುಖ್ಯಮಂತ್ರಿ ಪಟ್ಟ ನೀಡುವ ಕುರಿತು ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಸುಳಿವು ನೀಡಿದ್ದಾರೆ.

ಚೆನ್ನೈ: ತಮ್ಮ ಪುತ್ರ, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ಗೆ ಶೀಘ್ರವೇ ಉಪಮುಖ್ಯಮಂತ್ರಿ ಪಟ್ಟ ನೀಡುವ ಕುರಿತು ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಸುಳಿವು ನೀಡಿದ್ದಾರೆ. ಉದಯನಿಧಿ ಹೆಸರು ಡಿಸಿಎಂ ಪಟ್ಟಕ್ಕೆ ಓಡಾಡುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ ವೇಳೆ, ‘ಈ ವಿಷಯದಲ್ಲಿ ನಿರಾಶೆ ಆಗದು, ಬದಲಾವಣೆ ಖಚಿತ’ ಎಂದು ಸ್ಟಾಲಿನ್‌ ಹೇಳಿದ್ದಾರೆ. ಇಂಥ ಪ್ರಶ್ನೆಯನ್ನು ಇತ್ತೀಚೆಗೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿಯೂ ಆಗಿರುವ ಉದಯನಿಧಿ ಅವರಲ್ಲಿ ಕೇಳಿದಾಗ, ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.

ಸೆನ್ಸೆಕ್ಸ್‌ 85000, ನಿಫ್ಟಿ 26000 ಅಂಕ ಮುಟ್ಟಿ ಹೊಸ ದಾಖಲೆಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 85000 ಅಂಕದ ಗಡಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಮಧ್ಯಂತರ ಅವಧಿಯಲ್ಲಿ ಸೆನ್ಸೆಕ್ಸ್‌ 234 ಅಂಕ ಏರಿ 85163ಕ್ಕೆ ತಲುಪಿತ್ತು. ಸೆನ್ಸೆಕ್ಸ್‌ 85000ರ ಗಡಿ ದಾಟಿದ್ದು ಇದೇ ಮೊದಲು. ಆದರೆ ದಿನದಂತ್ಯಕ್ಕೆ ಸೋಮವಾರದ ಅಂತ್ಯದ ಅಂಕಗಳಿಗಿಂತ 15 ಅಂಕ ಇಳಿದು 84914ರಲ್ಲಿ ಮುಕ್ತಾಯವಾಯಿತು. ಇನ್ನೊಂದೆಡೆ ನಿಫ್ಟಿ ಕೂಡಾ ಮಧ್ಯಂತರದಲ್ಲಿ 72 ಅಂಕ ಏರಿ 26011 ಅಂಕಕ್ಕೆ ತಲುಪಿ ಹೊಸ ದಾಖಲೆ ಬರೆಯಿತು. ಆದರೆ ದಿನದಂತ್ಯಕ್ಕೆ 1 ಅಂಕಗಳ ಏರಿಕೆಯೊಂದಿಗೆ 25940ರಲ್ಲಿ ಮುಕ್ತಾಯಗೊಂಡಿತು. ಮಂಗಳವಾರ ಏಷ್ಯಾದ ಬಹುತೇಕ ಷೇರುಪೇಟೆಗಳು ಏರುಗತಿಯಲ್ಲೆ ಮುಕ್ತಾಯವಾಗಿದೆ.

ಲೈಂಗಿಕ ಕಿರುಕುಳ: ಶಾಸಕ, ನಟ ಮುಕೇಶ್‌ ಬಂಧನ, ಬಿಡುಗಡೆಕೊಚ್ಚಿ: ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣ ಸಂಬಂಧ, ಖ್ಯಾತ ನಟ, ಸಿಪಿಎಂ ಶಾಸಕ ಮುಕೇಶ್‌ ಅವರನ್ನು ಎಸ್‌ಐಟಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅದರ ಅದರ ಬೆನ್ನಲ್ಲೇ ಕೋರ್ಟ್‌ ಆದೇಶದಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮುಕೇಶ್‌ ಅವರನ್ನು 3 ತಾಸು ವಿಚಾರಣೆ ನಡೆಸಿದ ಎಸ್‌ಐಟಿ ಬಳಿಕ ಅವರನ್ನು ಬಂಧಿಸಿತು. ಆದರೆ ಈ ಹಿಂದೆಯೇ ಮುಕೇಶ್‌ ಬಂಧನಕ್ಕೆ ತಡೆ ನೀಡಿದ್ದ ನ್ಯಾಯಾಲಯ, ಬಂಧನ ಅಗತ್ಯವಾದರೆ, ತಕ್ಷಣವೇ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಸೂಚಿಸಿತ್ತು.

ಈ ನಡುವೆ ಇದೇ ರೀತಿಯ ಇನ್ನೊಂದು ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ನಟ ಸಿದ್ದಿಕಿಗೆ ಕೇರಳ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಅದರ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದಾರೆ.

ಜಗನ್‌ ಪಕ್ಷದ 3ನೇ ಸಂಸದ ರಾಜ್ಯಸಭೆಗೆ ರಾಜೀನಾಮೆ

ನವದೆಹಲಿ: ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್ ರಾಜ್ಯಸಭಾ ಸಂಸದ ಆರ್‌. ಕೃಷ್ಣಯ್ಯ ಅವರು ಮಂಗಳವಾರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಆಂಧ್ರಪ್ರದೇಶದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸೋತ ನಂತರ ಪಕ್ಷದ 3 ಸಂಸದರು ರಾಜೀನಾಮೆ ನೀಡಿದಂತಾಗಿದೆ. ಹೀಗಾಗಿ ಜಗನ್‌ ಪಕ್ಷದ ರಾಜ್ಯಸಭಾ ಸಂಸದರ ಸಂಖ್ಯೆ 8ಕ್ಕೆ ಕುಸಿದಿದೆ.ಇವರು ತೆಲುಗುದೇಶಂ ಪಕ್ಷ ಸೇರುವ ಸಾಧ್ಯತೆ ಇದೆ. ಇತ್ತೀಚೆಗೆ ಬೀಡಾ ಮಸ್ತಾನ್ ರಾವ್ ಜಾಧವ್ ಮತ್ತು ವೆಂಕಟರಮಣ ರಾವ್ ಮೋಪಿದೇವಿ ರಾಜೀನಾಮೆ ನೀಡಿ, ಟಿಡಿಪಿ ಸೇರುವುದಾಗಿ ಹೇಳಿದ್ದರು.

Share this article