ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ 22ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳವು ಜ.25ರಂದು ಶನಿವಾರ ನಡೆಯಲಿದೆ. ಕಂಬಳಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಜಾನಪದ ಕ್ರೀಡೆಯ 22ನೇ ಆವೃತ್ತಿಯ ವೈಶಿಷ್ಠ್ಯತೆಗಳು ಈ ಕಂಬಳೋತ್ಸವಕ್ಕೆ ಹೊಸತನದ ಮೆರುಗು ನೀಡುವ ಉತ್ಸಾಹದಲ್ಲಿವೆ. ಇದರೊಂದಿಗೆ ಕಂಬಳ ಸಮಿತಿಯು ಪುರಸಭೆಯ ಸಹಯೋಗದೊಂದಿಗೆ ಈ ಕಂಬಳವನ್ನು ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸುವಲ್ಲಿ ಯೋಜನೆ ರೂಪಿಸಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್, ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಿದ್ದು, ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸುವರು. ಅಂತಾರಾಷ್ಟ್ರೀಯ ವಾಸ್ತುತಜ್ಞ ಮೂಲ್ಕಿ ಚಂದ್ರಶೇಖರ ಗುರೂಜಿ ಅವರಿಗೆ ಅವರಿಗೆ ರಾಜ್ಯಮಟ್ಟದ ರಾಣಿಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಎಲ್ಲ ಕಂಬಳಾಭಿಮಾನಿಗಳಿಗೂ 11.30 ರಿಂದ 3 ಗಂಟೆಯವರೆಗೂ ಗಂಜಿ ಊಟದ ವ್ಯವಸ್ಥೆ ಇದೆ.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಈ ಬಾರಿ ವಿಶೇಷವಾಗಿ ಕಂಬಳದ ಆರಂಭದಲ್ಲಿ ಕೋಣಗಳನ್ನು ಬಿಡುವಲ್ಲಿ ಸೆನ್ಸಾರ್ ಸಿಸ್ಟಂನ್ನು ಅಳವಡಿಸಲಾಗಿದೆ. ತಂತ್ರಜ್ಞಾನ ವ್ಯವಸ್ಥೆಯನ್ನು ಮೂಡುಬಿದಿರೆಯ ಕೋಟಿ ಚೆನ್ನಯ್ಯ ಕಂಬಳಕರೆಯಲ್ಲಿ ಪೂರ್ಣವಾಗಿ ಸೆನ್ಸರ್ ಸಿಸ್ಟಮ್ನ್ನು ಅಳವಡಿಸಲಾಗಿದ್ದು ಕೊಟ್ಟ ಸಮಯಾವಧಿ ಮೀರಿದ ನಂತರ ಒಂದೆರಡು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ನಂತರ ತಕ್ಷಣವೇ ಎರಡು ಕಡೆಯಿಂದಲೂ ಸೆನ್ಸಾರ್ ಸಿಸ್ಟಮ್ ಆನ್ ಆಗಿ ಬಾವುಟ ಹಾರಿಸಲಾಗುತ್ತದೆ ಎಂದರು.