ಕನ್ನಡಪ್ರಭ ವಾರ್ತೆ, ಬೀದರ್
ಸಿಖ್ಖ ಧರ್ಮಗುರುಗಳಾದ ಗುರುನಾನಕರ ಜಯಂತಿ ಅಂಗವಾಗಿ ಇಡೀ ಗುರುದ್ವಾರಾ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ.
ಗುರುದ್ವಾರಾ ಕಮಾನ್ನಿಂದ ಪವಿತ್ರ ಗುರುದ್ವಾರಾ ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಗುರುದ್ವಾರಕ್ಕೆ ಬರುವ ಎಲ್ಲ ಭಕ್ತಾದಿಗಳ ದೊಡ್ಡ ವಾಹನಗಳು ನಗರದ ಹೊರ ವಲಯದ ಚಿಕ್ಪೇಟ್ ರಸ್ತೆಯ ಮೂಲಕವೇ ಗುರುದ್ವಾರಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ.ಜಯಂತಿ ಕಾರ್ಯಕ್ರಮಗಳು:
ಬೆಳಿಗ್ಗೆ 5.30ರಿಂದ 8ರ ವರೆಗೆ ಕಿರ್ತನ, ಬೆಳಿಗ್ಗೆ 8ರಿಂದ 8.45ರ ವರೆಗೆ ಹಜೂರ ರಾಗಿ ನಡೆಯಲಿದೆ. ಬೆಳಿಗ್ಗೆ 9.30ರಿಂದ 10ರ ವರೆಗೆ ಅಖಂಡ ಪಾಠ ಸಮಾಪ್ತಿ ನಡೆಯಲಿದೆ.
ಗುರುನಾನಕ ಜಯಂತಿ ಅಂಗವಾಗಿ ನ.15ರಂದು ಮಧ್ಯಾಹ್ನ 3ರಿಂದ ರಾತ್ರಿ 9ರ ವರೆಗೆ ಭವ್ಯ ಮೆರವಣಿಗೆ ಜರುಗಲಿದೆ. ಗುರುದ್ವಾರಾದಿಂದ ಆರಂಭವಾಗುವ ಮೆರವಣಿಗೆ, ಮಡಿವಾಳ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಮರಳಿ ಗುರುನಾನತ್ ಕಾಲೋನಿಯಲ್ಲಿರುವ ನಿಶಾನ್ ಸಾಹೇಬ್ಗೆ ತಲುಪಿ ಸಮಾರೋಪಗೊಳ್ಳಲಿದೆ. ಸಿಖ್ ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.