ನಿಗದಿತ ವೇಳೆ ಹೆದ್ದಾರಿ ಕಾಮಗಾರಿ ಮುಗಿಯದಿದ್ದಲ್ಲಿ ಟೋಲ್‌ ಬಂದ್‌

KannadaprabhaNewsNetwork |  
Published : Sep 20, 2026, 03:15 AM IST
ಫೋಟೋ : ೧೯ಕೆಎಂಟಿ_ಎಸ್ ಇಪಿ_ಕೆಪಿ೧ : ದಿವಗಿ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ತಾಲೂಕುಮಟ್ಟದ ಪ್ರಜಾಸೇವಾ ಅಂದೋಲನ ಸಭೆಯನ್ನು ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಶಾಸಕ ದಿನಕರ ಶೆಟ್ಟಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ದಿಲೀಪ್ ಶಶಿ, ಉಪವಿಭಾಗಾಧಿಕಾರಿ ಶ್ರವಣಕುಮಾರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಅಶೋಕ ಗೌಡ ಇತರರು ಇದ್ದರು.  | Kannada Prabha

ಸಾರಾಂಶ

ದಿವಗಿ ಗ್ರಾಪಂ ಸಭೆಯಲ್ಲಿ ಒಪ್ಪಿಕೊಂಡಂತೆ ಸರ್ವೀಸ್ ರಸ್ತೆ ಮಾಡಿಲ್ಲ, ಹೈಮಾಸ್ಟ ಕನೆಕ್ಷನ್ ಕೊಟ್ಟಿಲ್ಲ. ಕುಮಟಾದಲ್ಲೂ ಸರ್ವೀಸ್ ರಸ್ತೆಯೇ ಇಲ್ಲ

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಎಚ್ಚರಿಕೆ

ಕುಮಟಾ:

ಜಿಲ್ಲೆಯ ಕರಾವಳಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಸಮಸ್ಯೆಯ ಕುರಿತು ವಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಬೇಕು. ಕಾಲಮಿತಿಯಲ್ಲಿ ಕಾಮಗಾರಿ ಹಾಗೂ ಪೂರಕ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಟೋಲ್‌ ಬಂದ್‌ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ದಿವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಅಂದೋಲನದಲ್ಲಿ ಚತುಷ್ಪಥ ಕಾಮಗಾರಿಯ ಕುರಿತು ಹಲವಾರು ದೂರುಗಳು ಬಂದ ಸಂದರ್ಭದಲ್ಲಿ ಸಚಿವರು ಈ ಎಚ್ಚರಿಕೆ ನೀಡಿದರು.

ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಎಂ. ಶಿವಕುಮಾರ, ಕೇವಲ 4 ಕಿ.ಮೀ. ಚತುಷ್ಪಥ ಕಾಮಗಾರಿ ಮಾತ್ರ ಬಾಕಿ ಇದೆ ಎಂದು ಹೇಳಿದ್ದು ತೀವ್ರ ಆಕ್ಷೇಪ ವ್ಯಕ್ತವಾಯಿತು. ಎಲ್ಲಾ ತಾಲೂಕುಗಳಲ್ಲಿ ಕಾಮಗಾರಿ ಬಾಕಿ ಇದೆ. ಕುಮಟಾದಲ್ಲಿ ಮಾನೀರಿನಿಂದ ಅಳ್ವೇಕೋಡಿವರೆಗೆ ಅರೆಬರೆ ಕಾಮಗಾರಿ ಆಗಿದೆ. ಕನಿಷ್ಠ ನಿರ್ವಹಣೆಯೂ ಇಲ್ಲ, ಅಪಘಾತಗಳಾಗಿ ಇನ್ನೂ ಎಷ್ಟು ಸಾವುನೋವುಗಳನ್ನು ನೋಡಬೇಕಿದೆ. ಯಾವಾಗ ಕಾಮಗಾರಿ ಪೂರ್ತಿ ಮಾಡುತ್ತೀರಿ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಭಾಸ್ಕರ ಪಟಗಾರ, ಭುವನ ಭಾಗ್ವತ, ಜಗದೀಶ ಭಟ್ ಇತರರು ಮಾತನಾಡಿ, ದಿವಗಿ ಗ್ರಾಪಂ ಸಭೆಯಲ್ಲಿ ಒಪ್ಪಿಕೊಂಡಂತೆ ಸರ್ವೀಸ್ ರಸ್ತೆ ಮಾಡಿಲ್ಲ, ಹೈಮಾಸ್ಟ ಕನೆಕ್ಷನ್ ಕೊಟ್ಟಿಲ್ಲ. ಕುಮಟಾದಲ್ಲೂ ಸರ್ವೀಸ್ ರಸ್ತೆಯೇ ಇಲ್ಲ ಎಂದರು. ಪ್ರತಿಕ್ರಿಯಿಸಿದ ಶಿವಕುಮಾರ್, ೨೦೨೭ ರ ಮಾರ್ಚ ಹೊತ್ತಿಗೆ ಕಾಮಗಾರಿ ಪೂರ್ತಿಗೊಳ್ಳಲಿದೆ. ಮಳೆಗಾಲ ಮುಗಿದಿರುವುದರಿಂದ ನಿರ್ವಹಣೆ ಕಾಮಗಾರಿ ಸದ್ಯವೇ ಆರಂಭಿಸುತ್ತೇವೆ ಎಂದರು.

ಈ ಬಗ್ಗೆ ಸಚಿವ ಲಕ್ಷ್ಮಣ ಸವದಿ ನಿರ್ದೇಶನ ನೀಡಿ, ವಾರದೊಳಗೆ ತಾಲೂಕು ಮಟ್ಟದಲ್ಲಿ ಚತುಷ್ಪಥ ಕಾಮಗಾರಿ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಸೂಚಿಸಿದರಲ್ಲದೇ ನಿಗದಿತ ವೇಳೆಗೆ ಕಾಮಗಾರಿ ಮುಗಿಯದಿದ್ದಲ್ಲಿ ಟೋಲ್‌ ಬಂದ್‌ ಮಾಡುವ ಎಚ್ಚರಿಕೆ ನೀಡಿದರು.

15 ದಿನದಲ್ಲಿ ಅರ್ಜಿ ವಿಲೇವಾರಿ ಮಾಡಿ:

ಪ್ರಜಾಸೇವಾ ಸಭೆಗಳಿಂದ ಗರಿಷ್ಟ ೧೫ ದಿನಗಳಲ್ಲಿ ಕಾನೂನು ಚೌಕಟ್ಟಿನಡಿ ಬಗೆಹರಿಯದಿದ್ದರೆ ಅರ್ಜಿದಾರನಿಗೆ ಹಿಂಬರಹ ಕೊಡಲೇಬೇಕು. ಯಾವುದೇ ಕುಂಟು ನೆಪದಿಂದ ತಪ್ಪು ಹಿಂಬರಹ ನೀಡಿದರೆ ಸಹಿಸುವುದಿಲ್ಲ. ಈ ಸಭೆಗಳ ಅರ್ಜಿ ವಿಲೇವಾರಿ ಸಂಬಂಧಿಸಿ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ಸ್ವತಃ ಅವಲೋಕಿಸಲಿದ್ದೇನೆ. ಮುಂದಿನ ಕೆಡಿಪಿ ಸಭೆಗಳಲ್ಲಿ ಈ ಬಗ್ಗೆ ಸಾರ್ವಜನಿಕರು ನನ್ನನ್ನು ಪ್ರಶ್ನಿಸುವಂತಹ ಸಂದರ್ಭ ಬರಕೂಡದು ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಎಚ್ಚರಿಸಿದರು.

ದಿವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಅಂದೋಲನ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಜನರ ಭಾವನೆ ಹಾಗೂ ಸಮಸ್ಯೆಗಳ ಅವಲೋಕನ ಮಾಡಿದ್ದೇನೆ. ಈ ಜಿಲ್ಲೆಯ ಜನರ ಬಗ್ಗೆ ಗೌರವವಿದೆ. ಪ್ರಜಾಸೇವಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ರಾಜ್ಯದ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಇದೇ ಪ್ರಥಮ ಬಾರಿಗೆ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಲಾಗಿದ್ದು ಒಟ್ಟೂ ೩೨೦೦೦ ಕೋಟಿ ಸಮಗ್ರ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಇದರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ೧೦ ಸಾವಿರ ಕೋಟಿ ರೂ.ಗಳ ಯೋಜನೆ ನಿಗದಿಸಲಾಗಿದೆ ಎಂದರು. ಇದು ಡಿಕೆ.ಶಿವಕುಮಾರ ನೇತೃತ್ವದ ಸರ್ಕಾರದ ದೂರದರ್ಶಿತ್ವ ತೋರಿಸುತ್ತದೆ ಎಂದರು.

ಸಭೆಯಲ್ಲಿ ಪದೇಪದೇ ವೇದಿಕೆ ಬಳಿ ಜಮಾಯಿಸಿ ಅರ್ಜಿದಾರರಲ್ಲದವರು ಮಧ್ಯಪ್ರವೇಶಿಸುತ್ತಿದ್ದವರ ಕುರಿತು ಗರಂ ಆದ ಸಚಿವ ಸವದಿ, ಸಭೆಯನ್ನು ದನದ ಸಂತೆ ಮಾಡಿದ್ದೀರಿ, ಒಂಚೂರು ಶಿಸ್ತು ಇಲ್ಲವೇ? ಸರದಿಯಲ್ಲಿ ಕರೆದವರು ಮಾತ್ರ ಬಂದು ಮಾತನಾಡಬೇಕು ಎಂದು ಪೊಲೀಸರನ್ನು ಗದರಿದರು.

ಸಭೆ ಉದ್ದೇಶಿಸಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಜಾಸೇವಾ ಅಂದೋಲನ ಹೆಚ್ಚಿನಂಶ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುತ್ತಿದ್ದು ಉತ್ತಮವಾಗಿದೆ. ಆದರೆ ಪ್ರವಾಸೋದ್ಯಮ ಬೆಳವಣಿಗೆ, ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅತಿಕ್ರಮಣದಾರರ ಸಮಸ್ಯೆ, ಜಿಪಿಎಸ್ ಆದವರಿಗೆ ಸರ್ಕಾರದ ಮನೆ ಮಂಜೂರಿ ಮುಂತಾದ ವಿಷಯಗಳ ಬಗ್ಗೆ ಸೂಕ್ತ ಕ್ರಮವಾಗಬೇಕಿದೆ. ಜಿಲ್ಲೆಯ ಘಟ್ಟದ ಕೆಳಭಾಗದಲ್ಲಿ ವಾಕರಸಾ ವಿಭಾಗೀಯ ಘಟಕವಾಗಬೇಕು. ಗೋಕರ್ಣ ರಸ್ತೆ ಅಗಲಗೊಳಿಸಬೇಕು ಎಂದು ಸಚಿವರಲ್ಲಿ ವಿನಂತಿಸಿದರು.

ಗ್ಯಾರಂಟಿ ಸಮಿತಿಯ ಸದಸ್ಯ ಈಶ್ವರ ನಾಯ್ಕ ಕೋಡ್ಕಣಿ ಮಾತನಾಡಿ, ಆದಾಯ ತೆರಿಗೆ ಸಂಬಂಧಿಸಿ ತಾಲೂಕಿನಲ್ಲಿ ನೂರಾರು ಫಲಾನುಭವಿಗಳಿಗೆ ಗ್ರಹಲಕ್ಷ್ಮೀ ಹಣ ವರ್ಷಗಳಿಂದ ಬಾರದಂತಾಗಿದೆ. ಎಲ್ಲ ಹಂತದಲ್ಲಿ ಪ್ರಯತ್ನಿಸಿದರೂ ಸಮಸ್ಯೆ ಬಗೆಹರಿದಿಲ್ಲ, ನ್ಯಾಯ ಒದಗಿಸಿ ಎಂದರು. ಜಿಪಂ ಸಿಇಒ ದಿಲೀಪ ಶಶಿ ಪ್ರತಿಕ್ರಿಯಿಸಿ, ಇಂಥ ಎಲ್ಲಾ ಪ್ರಕರಣಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ವರದಿ ಕೊಡಿ, ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಮಾಜಿ ಜಿಪಂ ಸದಸ್ಯ ಗಜಾನನ ಪೈ, ಯಾಣಕ್ಕೆ ರೋಪ್‌ವೇ ಅತ್ಯಗತ್ಯವಿದೆ ಎಂದರು. ಕುಮಟಾದಲ್ಲಿ ಆರಂಭಗೊಂಡಿರುವ ಟ್ರಾಮಾ ಸೆಂಟರ್ ಗೆ ಜಿಲ್ಲಾಸ್ಪತ್ರೆಯ ವೈದ್ಯರ ಸೇವೆಯನ್ನಾದರೂ ಒದಗಿಸಿ, ಅಥವಾ ಜಿಲ್ಲಾಸ್ಪತ್ರೆಯ ಒಂದು ವಿಭಾಗವನ್ನಾದರೂ ಇಲ್ಲಿ ಒದಗಿಸಬೇಕು ಎಂದರು. ಕತಗಾಲದಲ್ಲಿ ಇರುವ ಆಂಬುಲೆನ್ಸನ್ನು ಹಗಲಿನಲ್ಲಿ ಪಿಎಚ್‌ಸಿ ಗೆ ಹಾಗೂ ಉಳಿದ ಸಮಯದಲ್ಲಿ ಅಲ್ಲಿನ ಪೊಲೀಸ್ ಚೌಕಿಯಲ್ಲಿರಿಸಿದರೆ ೨೪ ಗಂಟೆಯೂ ಜನರಿಗೆ ಸೇವೆ ಲಭ್ಯವಾಗುತ್ತದೆ ಎಂದರು.

ಮಾಜಿ ಜಿಪಂ ಸದಸ್ಯ ಪ್ರದೀಪ ನಾಯಕ ದೇವರಭಾವಿ, ಗೋಕರ್ಣದ ಪ್ರಮುಖ ಬೀಚುಗಳಲ್ಲಿ ಪ್ರವಾಸಿಗರ ಬೋಟ್ ಸಂಚಾರ ವ್ಯವಸ್ಥೆಗೆ ಪ್ರವಾಸೋದ್ಯಮ ಇಲಾಖೆ ಹೊರಗಿನವರಿಗೆ ಮಣೆ ಹಾಕುತ್ತಿದೆ. ಸ್ಥಳೀಯರು ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಗಿಡಲಾಗುತ್ತಿದೆ ಎಂದು ಆರೋಪಿಸಿದರು. ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸಚಿವರು ಸೂಚಿಸಿದರು.

ಭಾಸ್ಕರ ಪಟಗಾರ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು, ಆದರೆ ಮಳೆಗಾಲದಲ್ಲಿಯೇ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಿದರೆ ಹೇಗೆ?ಎಂದು ಪ್ರಶ್ನಿಸಿದರು. ಕುಮಟಾದಲ್ಲಿ ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಎವಿಪಿ ರೈತಸೇವಾ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಇಟ್ಟ ಬೇಡಿಕೆಗೆ ಸೂಕ್ತ ಪ್ರಸ್ತಾವನೆಯನ್ನು ಬಾಗಲಕೋಟ ತೋಟಗಾರಿಕೆ ವಿವಿಗೆ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕಲಭಾಗ ಪಂಚಾಯಿತಿಯ ಹಂತಿಮಠ ಜನತಾಪ್ಲಾಟ್ ನವರ ಸರ್ವೆ ಪೋಡಿ ಹಾಗೂ ಇಸ್ವತ್ತು ಸಮಸ್ಯೆ ಬಗೆಹರಿಸುವಂತೆ ಪ್ರವೀಣಕುಮಾರ ಶೆಟ್ಟಿ ಹಾಗೂ ಸ್ಥಳೀಯರು ಮನವಿ ಸಲ್ಲಿಸಿದರು.

ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ೪೧೨ ಅರ್ಜಿಗಳನ್ನು ಸ್ವೀಕರಿಸಲಾಯಿತು.

ಅರಣ್ಯ ಇಲಾಖೆ, ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು, ಜಾಬ್ ಕಾರ್ಡ್ ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಎಎಸ್‌ಪಿ ರಾನು ಗುಪ್ತಾ, ಡಿಎಫ್‌ಒ ಯೋಗೇಶ ಸಿಕೆ., ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಗೌಡ ಇದ್ದರು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಸ್ವಾಗತಿಸಿದರು. ಯೋಗೇಶ ನಾಯ್ಕ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಪೌಷ್ಟಿಕಾಹಾರ ವಿತರಿಸಿ
ರೋಗ ಬರುವ ಮುಂಚೆ ಜಾಗೃತಿ ವಹಿಸಿ: ಡಾ. ಯೋಗೇಶ್ ಮಡಗಾಂವಕರ