ನಾಳೆ ಮಾಜಿ ದೇವದಾಸಿಯರಿಂದ ಬೆಂಗಳೂರು ಚಲೋ

KannadaprabhaNewsNetwork |  
Published : Dec 19, 2025, 02:45 AM IST
ಗಜೇಂದ್ರಗಡ ದೇವದಾಸಿ ಮಕ್ಕಳ ಹೋರಾಟ ಸಮಿತಿಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ಮಾಜಿ ದೇವದಾಸಿಯರ ಸಂಪೂರ್ಣ ಗಣತಿ, ವಯೋಮಿತಿ ಹಾಕದೆ ಎಲ್ಲರನ್ನು ಸೇರಿಸಬೇಕು ಹಾಗೂ ಪುನರ್ವಸತಿ ಮಾಡಬೇಕು. ದೇವದಾಸಿ ಪದ್ಧತಿ ನಿಷೇಧದ ಹಳೆಯ ಕಾಯ್ದೆಗಳನ್ನು ತೋರಿಸಿ ಮಾಜಿ ದೇವದಾಸಿಯರನ್ನು ಗಣತಿಯಾಚೆ ಇಡುವುದನ್ನು ತಡೆಯಬೇಕು.

ಗಜೇಂದ್ರಗಡ: ರಾಜ್ಯದ ಸಾಮಾಜಿಕ ದೌರ್ಜನ್ಯ ಹಾಗೂ ಬಹಿಷ್ಕಾರಕ್ಕೊಳಗಾದ ಮತ್ತು ಆರ್ಥಿಕವಾಗಿ ಪರಾವಲಂಬಿಗಳಾದ ದಲಿತರು, ದಲಿತ ಮಾಜಿ ದೇವದಾಸಿಯರು, ಒಂಟಿ ಮಹಿಳೆಯರು ಹಾಗೂ ಮಸಣ ಕಾರ್ಮಿಕರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಡಿ. ೨೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಂಟನೆಯ ಜಿಲ್ಲಾ ಉಪಾಧ್ಯಕ್ಷೆ ಮಾಳವ್ವ ಅರಳಿಗೀಡದ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಬಹಿಷ್ಕಾರಗಳನ್ನು ನಿವಾರಿಸುವಲ್ಲಿ ಬಹುತೇಕ ಸರ್ಕಾರಗಳು ವಿಫಲವಾಗಿವೆ. ಪರಿಣಾಮ ಸ್ವಾತಂತ್ರ‍್ಯ ಬಂದು ೭೮ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಶೇ. ೮೦ಕ್ಕೂ ಅಧಿಕ ಸಮುದಾಯಗಳು ಈಗಲೂ ಜಾತಿ ಹಾಗೂ ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯತಾಚರಣೆ, ದೌರ್ಜನ್ಯದ ದೇವದಾಸಿ ಪದ್ಧತಿ, ಬಿಟ್ಟ ಚಾಕರಿ ಮತ್ತು ಬಹಿಷ್ಕಾರಕ್ಕೊಳಗಾದ ಒಂಟಿ ಮಹಿಳೆಯರಾಗಿ ಜೀವನ ನಡೆಸುತ್ತಿದ್ದಾರೆ ಎಂದರು.ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಮಾಜಿ ದೇವದಾಸಿಯರ ಸಂಪೂರ್ಣ ಗಣತಿ, ವಯೋಮಿತಿ ಹಾಕದೆ ಎಲ್ಲರನ್ನು ಸೇರಿಸಬೇಕು ಹಾಗೂ ಪುನರ್ವಸತಿ ಮಾಡಬೇಕು. ದೇವದಾಸಿ ಪದ್ಧತಿ ನಿಷೇಧದ ಹಳೆಯ ಕಾಯ್ದೆಗಳನ್ನು ತೋರಿಸಿ ಮಾಜಿ ದೇವದಾಸಿಯರನ್ನು ಗಣತಿಯಾಚೆ ಇಡುವುದನ್ನು ತಡೆಯಬೇಕು.

ಆರ್ಥಿಕ ದುಸ್ಥಿತಿ ಮತ್ತು ಹಿರಿತನದ ಆಧಾರದಲ್ಲಿ ಕಾಲಮಿತಿಯೊಳಗೆ ಸ್ವಾವಲಂಬಿ ಬದುಕನ್ನು ಸಾಧಿಸುವಂತೆ ಪುನರ್ವಸತಿಗೆ ಕ್ರಮ ವಹಿಸಬೇಕು. ಇದಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‌ನ ಶೇ. ೪೦ರಷ್ಟು ಅನುದಾನವನ್ನು ಮೀಸಲಿಡಬೇಕು. ಒಂಟಿ ಮಹಿಳೆಯರು, ಮಸಣ ಕಾರ್ಮಿಕರು ಮತ್ತು ಮಾಜಿ ದೇವದಾಸಿಯರಿಗೆ ಹಾಗೂ ಬಡ ದಲಿತರಿಗೆ ಮಾಸಿಕ ಸಾಮಾಜಿಕ ಪಿಂಚಣಿಯನ್ನು ₹೬೦೦೦ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.ದೇವದಾಸಿ ಮಕ್ಕಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾದರ ಮಾತನಾಡಿ, ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳಿಗೆ, ಒಂಟಿ ಮಹಿಳೆಯರು, ವಿಧವಾ ಮಹಿಳೆಯರು ಮಸಣ ಕಾರ್ಮಿಕರ ಮಕ್ಕಳ ಮದುವೆಗೆ ಪ್ರೋತ್ಸಾಹಧನವನ್ನು ₹೧೦ ಲಕ್ಷಕ್ಕೆ ಹೆಚ್ಚಿಸಬೇಕು.

ಅವಿವಾಹಿತರಾಗಿ ಉಳಿದವರಿಗೆ ಅದೇ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದ ಅವರು, ಮಾಜಿ ದೇವದಾಸಿಯರು, ಅವರ ಮಕ್ಕಳು ಡಿ. ೧೯ರಂದು ರಾತ್ರಿ ಬಸ್, ರೈಲು ಹಾಗೂ ಖಾಸಗಿ ವಾಹನ ಮೂಲಕ ಬರಬೇಕು ಎಂದರು.ಈ ವೇಳೆ ಕನಕಪ್ಪ ರಾಂಪೂರ, ಗಿರಿಜವ್ವ ಪೂಜಾರ, ಆನಂದ ಮಾದರ, ಅಂದವ್ವ ನಂದಾಪೂರ, ಶಾಂತವ್ವ ಮಾದರ, ಕನಕರಾಯ ಹಾದಿಮನಿ, ಬಸವರಾಜ ಮಾದರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ