ಮುಳಗುಂದ: ಪಟ್ಟಣದ ಹಳೆಹುಡ ಓಣಿಯಲ್ಲಿ ನೆಲೆಸಿದ ಶ್ರೀಗ್ರಾಮ ದೇವತೆಯೇ ಟೋಪ ಜಾತ್ರಾ ಮಹೋತ್ಸವ ಮಂಗಳವಾರ ಪ್ರಾರಂಭವಾಗಿದ್ದು, ಮೊದಲ ದಿನ ಭಕ್ತರ ಮನೆಗೆ ಭೇಟಿ ನೀಡಿ ಶ್ರೀ ಗ್ರಾಮ ದೇವತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಡಗರ,ಸಂಭ್ರಮದಿಂದ ಜರುಗಿತು.
ಬೆಳಗಿನ ಜಾವ ವಿದಿ ವಿಧಾನದಂತೆ ಶ್ರೀದೇವಿ ಮೂರ್ತಿಗಳಿಗೆ ಅಭಿಷೇಕ ಪೂಜಾ ಹವನ ಹೋಮಗಳಿಂದ ಪ್ರಾರಂಭಗೊಂಡು ನಂತರ ಮೊದಲು ಮುದಿ ದುರ್ಗಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಭಕ್ತರ ಕಟ್ಟೆ(ಗ್ರಾಮದ ಪ್ರಮುಖರ ಮನೆ) ಮನೆಗಳಿಗೆ ಭೇಟಿ ನೀಡುತ್ತಾ ಮುಂದೆ ಸಾಗಿ ಗ್ರಾಮದ ನಿಯಮಿತ ಕಟ್ಟೆಗಳಿಗೆ ಹೋಗಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿತು. ಹೀಗೆ ಸಾಗುವ ಮೆರವಣಿಯಲ್ಲಿ ಭಾಗವಹಿಸಿದ ಭಕ್ತರು ಮಡಿ ಉಡಿಯಿಂದ ಶ್ರೀದೇವಿಯೇ ಆರಾಧನೆ ಮಾಡಿದರು.ಗ್ರಾಮ ದೇವತೆ ಉತ್ಸವದಲ್ಲಿ ಪಟ್ಟಣದ ಭಕ್ತರು ಶ್ರದ್ಧಾಭಕ್ತಿಯಿಂದ ಸೌಹಾರ್ಧತೆಯಿಂದ ಜಾತಿ, ಮತ, ಬೇಧವಿಲ್ಲದೆ ಸರ್ವ ಜನಾಂಗದವರೂ ಭಾಗವಹಿಸಿದ್ದು ವಿಶೇಷವಾಗಿತ್ತು. ಯಾವುದೇ ತಂಟೆ ತಕರಾರುಗಳಿಗೆ ಆಸ್ಪದ ನೀಡದಂತೆ ಮೆರವಣಿಗೆ ಸಾಗಿತು. ಇದರಲ್ಲಿ ರೈತರು, ಕಾರ್ಮಿಕರು, ಎಲ್ಲ ನೌಕರರು ಪಟ್ಟಣಕ್ಕೆ ಆಗಮಿಸಿ ಭಾಗವಹಿಸಿದ್ದು ಜಾತ್ರೆಗೆ ಮೆರಗು ತಂದಿತು.
ಜಾತ್ರೆಗೆ ಮೆರಗು ತಂದ ಜೋಕಾಲಿ:ಗ್ರಾಮದೇವತೆ ಟೋಪ ಜಾತ್ರೆಯಲ್ಲಿ ಮಕ್ಕಳು ಸಾರ್ವಜನಿಕರು, ಮಹಿಳೆಯರ ಮನರಂಜನೆಗಾಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಬಯಲು ಜಾಗೆಯಲ್ಲಿ ವಿವಿಧ ಆಟೋಟಗಳ ವ್ಯವಸ್ಥೆ ಅಮ್ಯೂಜಮೆಂಟ್ ಪಾರ್ಕನವರಿಂದ ವಿಶೇಷ ದರದಲ್ಲಿ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಜೋಕಾಲಿಯಲ್ಲಿ ಜೀಕಿ ಖುಷಿ ಪಟ್ಟರು.ಊಟದ ವ್ಯವಸ್ಥೆ:ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಬಡ್ನಿಯವರ ಕುಟುಂಬದಿಂದ, ಆಂಗ್ಲೋ ಉರ್ದು ಸ್ಕೂಲ್ ಮುಳಗುಂದದಲ್ಲಿ ನೀಲಗುಂದ ಕುಟುಂಬದವರಿಂದ ಬಂಡಿಯವರ ಓಣಿಯಲ್ಲಿ ಆರ್.ಸಿ.ಕಮಾಜಿ ಸಹೋದರರಿಂದ ಪ್ರಸಾದ ಸೇವೆಗೆ ಆಯೋಜನೆ ಮಾಡಲಾಗಿದೆ. ಅಲ್ಲದೇ ಇತರ ಕಟ್ಟೆಗಳಿಗೆ ದೇವಿ ಭೇಟಿ ನೀಡುವ ಸ್ಥಳಗಳಲ್ಲಿ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿದೆ.
ವಿಶೇಷವಾಗಿ ಆಂಗ್ಲೋ ಉರ್ದು ಶಾಲೆಯಲ್ಲಿ ನಡೆದ ಪ್ರಸಾದ ಸೇವೆಯಲ್ಲಿ ಮುಸ್ಲೀಂ ಭಾಂದವರು ನಿಂತು ಬಂದ ಭಕ್ತಾಧಿಗಳಿಗೆ ಪ್ರಸಾದ ನೀಡಿ ಎಲ್ಲ ಕೆಲಸ ಕಾರ್ಯ ನೆರವೇರಿಸುವ ಮೂಲಕ ಸೌಹಾರ್ದತೆ ಮೆರೆದರು.ಕಾಲಲ್ಲಿ ಪಾದರಕ್ಷೆಗಳಿಲ್ಲ: ಜಾತ್ರೆಯ ಮೆರವಣಿಗೆ ನೋಡಲು ಬಂದ ಭಕ್ತರು ಸ್ವಯಂ ಪ್ರೇರಿತವಾಗಿ ಪಾದರಕ್ಷೆಗಳನ್ನು ಮನೆಯಲ್ಲಿಯೇ ಬಿಟ್ಟು ಭಾವಹಿಸಿ ದೇವಿ ಆರಾಧನೆ ಮಾಡಿದ್ದು ಗಮನ ಸೆಳೆಯಿತು. ಅಲ್ಲದೇ ಮುಸ್ಲಿಂ ಬಾಂಧವರು ಕೂಡಾ ಮನೆಗಳಲ್ಲಿ ಮಾಂಸಾಹಾರ ಸೇವನೆ ಮಾಡದೇ ಸಾಮೂಹಿಕವಾಗಿ ಸಿಹಿ ಭೋಜನ ಸವಿದರು.
ಪೊಲೀಸ್ ಬಂದೋಬಸ್ತ್ : ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶ್ರೀ ಗ್ರಾಮ ದೇವತೆಯರ ಮೆರವಣಿಗೆ ನಡೆಯುವ ಮಾರ್ಗಗಳಲ್ಲಿ ಜನದಟ್ಟನೆಯಾಗದಂತೆ ನಿಗಾ ವಹಿಸಿ ಯಾವುದೇ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಂಡರು, ಸಂದಿಗೊಂದಿಗಳಲ್ಲಿ ಬೈಕ್ಗಳ ಓಡಾಟ ಹೆಚ್ಚಾಗಿದ್ದರಿಂದ ಮಹಿಳೆಯರು, ಮಕ್ಕಳಿಗೆ ಸ್ವಲ್ಪ ಕಿರಿ-ಕಿರಿ ಎನ್ನಿಸಿದ್ದು ಬಿಟ್ಟರೆ ಯಾವುದೇ ರೀತಿಯ ಅಹಿತಕರ ಘಟನೆಗೆ ಎಲ್ಲಿಯೂ ಅವಕಾಶ ನೀಡಲಿಲ್ಲ.ಉತ್ಸವ ಉತ್ತಮ ರೀತಿಯಲ್ಲಿ ಸಾಗಿದ್ದು, ಎಲ್ಲಿಯೂ ಯಾವುದೇ ರೀತಿಯಿಂದ ತೊಂದರೆಯಾಗದಂತೆ ಸಾಗುತ್ತಿದೆ. ಪ್ರಸಾದ ಸೇವೆಯು ಸುಗಮವಾಗಿದೆ. ಎಲ್ಲ ಕಾರ್ಯಕ್ರಮಗಳು ಯಾವುದೇ ಕೊರತೆಯಾಗದಂತೆ ನಡೆದಿದೆ. ಆದರೆ ಬೈಕನವರ ಕಿರಿಕಿರಿ ಆಗುತ್ತಿದೆ. ನಾಳೆ ಹೆಚ್ಚಿನ ಬಂದೋಬಸ್ತ್ ಒದಗಿಸಲು ಇಲಾಖೆಗೆ ಸೂಚಿಸಲಾಗಿದೆ ಎಂದು ದೇವಿ ಜಾತ್ರಾ ಕಮೀಟಿ ಗೌರವಾಧ್ಯಕ್ಷ ಎಸ್.ಎಂ. ನೀಲಗುಂದ ತಿಳಿಸಿದ್ದಾರೆ.