ಭರಚುಕ್ಕಿ ಜಲಪಾತ ವೈಭವ ಕಣ್ತುಂಬಿಕೊಂಡ ಪ್ರವಾಸಿಗರು

KannadaprabhaNewsNetwork |  
Published : Aug 12, 2024, 01:00 AM IST
ಭರಚುಕ್ಕಿ ಜಲಪಾತದ ವೈಭವ ಕಣ್ತುಂಬಿಕೊಂಡ ಪ್ರವಾಸಿಗರು | Kannada Prabha

ಸಾರಾಂಶ

ಕರ್ನಾಟಕದ ನಯಾಗರ ಎಂತಲೇ ಪ್ರಸಿದ್ಧವಾಗಿರುವ ಭರಚುಕ್ಕಿ ಜಲಪಾತದ ತಾಣದಲ್ಲಿ ಆಯೋಜಿಸಿದ್ದ ಜಲಪಾತೋತ್ಸವದ ಎರಡನೇ ದಿನ ದೀಪಾಲಂಕಾರದ ಸೊಬಗು, ಪ್ರಕೃತಿಯ ದೃಶ್ಯಗಳನ್ನು ಭಾನುವಾರ ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕರ್ನಾಟಕದ ನಯಾಗರ ಎಂತಲೇ ಪ್ರಸಿದ್ಧವಾಗಿರುವ ಭರಚುಕ್ಕಿ ಜಲಪಾತದ ತಾಣದಲ್ಲಿ ಆಯೋಜಿಸಿದ್ದ ಜಲಪಾತೋತ್ಸವದ ಎರಡನೇ ದಿನ ದೀಪಾಲಂಕಾರದ ಸೊಬಗು, ಪ್ರಕೃತಿಯ ದೃಶ್ಯಗಳನ್ನು ಭಾನುವಾರ ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.

ಚೆಲುವ ಚಾಮರಾಜನಗರ ಅಭಿಯಾನದಡಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಭರಚುಕ್ಕಿ ಜಲಪಾತೋತ್ಸವ- 2024ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ವೇದಿಕೆಯಲ್ಲಿ ಡೊಳ್ಳು ಬಾರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಮುಸ್ಸಂಜೆಯಲ್ಲಿ ಕಾನನದ ನಡುವೆ ಹಾಲ್ನೊರೆಯಂತೆ ಭೋರ್ಗರೆದು ಧಮ್ಮಿಕ್ಕುತ್ತಿದ್ದ ಜಲಧಾರೆಗೆ ಅಳವಡಿಸಿದ್ದ ರಂಗುರಂಗಿನ ದೀಪಾಲಂಕಾರಕ್ಕೆ ಪ್ರವಾಸಿಗರ ಸಮ್ಮುಖದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಸ್.ತಂಗಡಗಿ ವಿದ್ಯುತ್ ಸ್ಪರ್ಶಕ್ಕೆ ಚಾಲನೆ ನೀಡಿದ್ದರು. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಉಗ್ರಾಣ ನಿಗಮ ಅಧ್ಯಕ್ಷ, ಕಾಡಾ ಅಧ್ಯಕ್ಷ ಮರಿಸ್ವಾಮಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ನಾಡು, ನುಡಿ, ದೇಶ ಪ್ರೇಮದ ಗೀತೆಗಳ ಇಮ್ಮೇಳದಲ್ಲಿ 101 ಅಡಿಯಿಂದ ಧುಮ್ಮಿಕ್ಕುವ ನೀರಿಗೆ ಸ್ಪರ್ಶಿಸಿದ ದೀಪಾಲಂಕಾರ ಕಾವೇರಿ ವೈಭವಕ್ಕೆ ರಂಗು ತಂದಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು, ಜಾನಪದ ಕಲಾವಿದರು ಶ್ರೀ ಮಂಟೇಸ್ವಾಮಿ, ಶ್ರೀ ಮಲೆಮಹದೇಶ್ವರ, ಶರಣರು ಹಾಗೂ ಸಿನಿಮಾ ಗೀತೆಗಳನ್ನು ಹಾಡಿ ಕಳೆ ತಂದರು. ಸಂಗೀತಪ್ರಿಯರು ಗಾಯಕರಾದ ಕಂಬದ ರಂಗಯ್ಯ, ಅನನ್ಯ ಭಟ್ ಹಾಡಿಗೆ ತಲೆದೂಗಿದರು.

ಅಂತೆಯೇ, ಪ್ರವಾಸಿಗರಿಗೆ ಭರಚುಕ್ಕಿ ಪ್ರವಾಸೋದ್ಯಮ ರಸದೌತಣ ಉಣಬಡಿಸಲು ಜಿಲ್ಲಾಡಳಿತ ಭಾನುವಾರವೂ ಸಂಜೆ 7 ರಿಂದ 9 ಗಂಟೆಯವರೆಗೆ ದೀಪಾಲಂಕಾರವನ್ನು ಪ್ರದರ್ಶಿಸಿತು.‌ ಅಂತೆಯೇ, ಎರಡನೇ ದಿನವೂ ಸಂಜೆ ಭರಚುಕ್ಕಿ ಅಂಗಳದಲ್ಲಿ ಕಲರ್‌ಫುಲ್ ವಾತಾವರಣ ಸೃಷ್ಟಿಯಾಗಿತ್ತು. ತಮಿಳುನಾಡು, ತೆಲಂಗಾಣ, ಬಳ್ಳಾರಿ, ಬೆಂಗಳೂರು, ಮೈಸೂರು, ಹಾಸನ, ತುಮಕೂರು, ಕನಕಪುರ, ರಾಮನಗರ ಇನ್ನಿತರ ಸ್ಥಳಗಳಿಂದ ಸಾವಿರಾರು ಮಂದಿ ಆಗಮಿಸಿ ಭರಚುಕ್ಕಿ ಜಲಪಾತದ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು. ಒಟ್ಟಾರೆ ಎರಡು ದಿನದ ಭರಚುಕ್ಕಿಯ ವೈಭವವನ್ನು ಪ್ರವಾಸಿಗರು ವೀಕ್ಷಿಸಿ ಕಣ್ತುಂಬಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!