ಕೊಪ್ಪಳ: ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಲೋಕಾರ್ಪಣೆ ಸಂಬಂಧಿಸಿ ಹಲವು ವಿಷಯಗಳ ಕುರಿತು ಮಂಗಳವಾರ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಜೊತೆ ಹುಬ್ಬಳ್ಳಿಯಲ್ಲಿ ಸಂಸದ ಸಂಗಣ್ಣ ಕರಡಿ ಚರ್ಚಿಸಿದ್ದಾರೆ.
ಜ.22ರಂದು ಮರ್ಯಾದಾ ಪುರುಷ ಶ್ರೀರಾಮನ ಮಂದಿರ ಲೋಕಾರ್ಪಣೆಯಾಗಲಿದೆ. ರಾಮನ ಬಂಟ ಹನುಮನ ಜನ್ಮಭೂಮಿ ಅಂಜನಾದ್ರಿ ಬಳಿಯ ಗಂಗಾವತಿಯಿಂದ ಅಯೋಧ್ಯೆಗೆ ವಿಶೇಷ ರೈಲು ಬಿಡಲು ಒತ್ತಡ ತರಲಾಗಿದೆ. ರೈಲ್ವೆ ಅಧಿಕಾರಿಗಳು ತಾಂತ್ರಿಕವಾಗಿ ಪರಿಶೀಲಿಸುತ್ತಿದ್ದಾರೆ. ವಾರದೊಳಗೆ ಮತ್ತೊಂದು ಸಭೆ ಇದ್ದು, ಅಲ್ಲಿ ನಿರ್ಧಾರವಾಗಲಿದೆ. ಗಂಗಾವತಿ- ಅಯೋಧ್ಯೆಗೆ ವಿಶೇಷ ರೈಲು ಬಿಡಲು ವಿಶ್ವಾಸವಿದೆ ಎಂದರು.ಗದಗ- ವಾಡಿ ರೈಲು ಮಾರ್ಗ ಲೋಕಾರ್ಪಣೆ ಮಾಡಿ ಕುಷ್ಟಗಿ ವರೆಗೆ ರೈಲು ಓಡಿಸುವುದು, ಗಿಣಿಗೇರಾ-ರಾಯಚೂರು ರೈಲು ಮಾರ್ಗದ ಕಾರಟಗಿ ಯಿಂದ ಸಿಂಧನೂರು ವರೆಗೆ ರೈಲು ಓಡಿಸುವುದು ಬಗ್ಗೆ ಚರ್ಚಿಸಲಾಗಿದೆ. ತಿಂಗಳೊಳಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುದ್ದಿ, ಸಂತೋಷ್ ಕಲೋಜಿ, ನರಸಿಂಗರಾವ್ ಕುಲಕರ್ಣಿ, ಸಿದ್ದರಾಮ ಸ್ವಾಮಿ, ವಿರುಪಾಕ್ಷಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಸದ ಸಂಗಣ್ಣ ಕರಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಮನವಿ ಮಾಡಿದರು. ಗಂಗಾವತಿ-ಅಯೋಧ್ಯೆಗೆ ವಿಶೇಷ ರೈಲು ಸಂಚರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.