ಗಜೇಂದ್ರಗಡ: ಶಾಲಾ ಪ್ರಧಾನಗುರು ಹಾಗೂ ಇಬ್ಬರು ಸಹ ಶಿಕ್ಷಕರನ್ನು ಶಾಲೆಯಿಂದ ಬೇರೇಡೆ ವರ್ಗಾವಣೆ ಮಾಡಬೇಕು ಎಂದು ಪಾಲಕರು ಹಾಗೂ ಎಸ್ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ ಘಟನೆ ಮಂಗಳವಾರ ನಡೆಯಿತು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೫ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದಾಗ ಶಾಲೆಗೆ ಆಗಮಿಸಿದ ಪಾಲಕರು ಹಾಗೂ ಎಸ್ಡಿಎಂಸಿ ಸದಸ್ಯರು ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕಾದ ಶಿಕ್ಷಕರು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಬೆಳಿಗ್ಗೆ ೯.೩೦ಕ್ಕೆ ಶಾಲೆ ಆರಂಭವಾಗುತ್ತದೆ. ಸಂಜೆ ೪.೩೦ಕ್ಕೆ ಶಾಲೆ ಬಾಗಿಲು ಹಾಕುತ್ತದೆ ಎನ್ನುವ ಮನಸ್ಥಿತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಶಾಲಾ ಪ್ರಧಾನಗುರು ಹಾಗೂ ಇಬ್ಬರು ಸಹ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಅಲ್ಲದೆ ಶಾಲೆಯಲ್ಲಿ ಅಡುಗೆಮನೆ ಕೊಠಡಿ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ಶಾಲಾ ಕೊಠಡಿಯನ್ನು ಅಡುಗೆ ಮನೆಯನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿ ಸ್ನೇಹಿ ವಾತಾವರಣ ಶಾಲೆಯಲ್ಲಿಲ್ಲ, ಶಾಲಾ ಕಂಪೌಡ್ ದುರಸ್ತಿ ಸೇರಿ ಇನ್ನಿತರ ಸಮಸ್ಯೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಎದುರು ಪಾಲಕರು ಹಾಗೂ ಬಡಾವಣೆಯ ಮುಖಂಡರು ದೂರಿದರು.
ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ರೇಣಿ, ಪುರಸಭೆ ಸದಸ್ಯ ಯಮನೂರ ತಿರಕೋಜಿ, ಮುಖಂಡರಾದ ಮಾರುತಿ ಚಿಟಗಿ, ದಾವಲ ತಾಳಿಕೋಟಿ, ಎಂ.ಬಿ.ಸೋಂಪುರ, ಹನಮಂತ ಶೇಷನವನ್ನರ, ಯಮನಪ್ಪ ಕಲ್ಗುಡಿ, ಮೂಬೂ ಹವಾಲ್ದಾರ್, ಯಲ್ಪಪ್ಪ ಚಿಟಗಿ, ಮುತ್ತಣ್ಣ ಗಡ್ಡದ, ಬಾಬು ಯಲಬಣುಚಿ ಹಾಗೂ ಬಿಆರ್ಸಿ ಎಂ.ಎ. ಫಣಿಬಂದ, ಬಸವರಾಜ ಅಂಗಡಿ, ಎ.ಕೆ. ಒಂಟಿ, ವಿ.ಎ. ಹಾದಿಮನಿ,ಎಸ್.ಕೆ. ಸರಗಣಾಚಾರಿ ಸೇರಿ ಇತರರು ಇದ್ದರು.