ಕನ್ನಡಪ್ರಭ ವಾರ್ತೆ ಮಡಿಕೇರಿ
ಸಂಬಳ ಹೆಚ್ಚಳ, ಬಾಕಿ ವೇತನ ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನಿಗಮ ನೌಕರರು ಮುಷ್ಕರ ಆರಂಭಿಸಿದ್ದು, ಕೊಡಗು ಜಿಲ್ಲೆಯಲ್ಲೂ ಮುಷ್ಕರದ ಬಿಸಿ ಜನರಿಗೆ ತಟ್ಟಿದೆ.ಕೊಡಗಿನಲ್ಲಿ ಖಾಸಗಿ ಬಸ್ ಜತೆಗೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ಸರ್ಕಾರಿ ಬಸ್ ಸಂಚಾರಕ್ಕೆ ಯತ್ನ ಮಾಡಲಾಗಿದೆ. ಪ್ರಯಾಣಿಕರ ಕೊರತೆಯಿಂದ ನಿಗದಿತ ಮಾರ್ಗಗಳಿಗೆ ತೆರಳದೇ ಬಸ್ ಗಳು ನಿಂತಿದ್ದವು. ಬಸ್ ಸಂಚಾರ ಇಲ್ಲ ಎಂದು ಮಂಗಳವಾರ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ.
ಜಿಲ್ಲೆಯ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿರುವ ಖಾಸಗಿ ಬಸ್ ಗಳು ಸಂಚಾರ ಎಂದಿನಂತೆ ಕಂಡುಬಂತು. ಹೊರಜಿಲ್ಲೆಗಳಿಗೆ ಸಂಚರಿಸಲು ಖಾಸಗಿ, ಸರ್ಕಾರಿ ಬಸ್ ಗಳನ್ನು ನಿಯೋಜಿಸಲಾಗಿದ್ದರೂ ಮಡಿಕೇರಿ ಸರ್ಕಾರಿ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರ ಕೊರತೆ ಕಂಡುಬಂತು.ಹೊರ ಜಿಲ್ಲೆಗಳಿಗೂ ಖಾಸಗಿ ಬಸ್ಸುಗಳ ಸಂಚಾರ ನಡೆಸಿದವು. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಖಾಸಗಿ ಬಸ್ಸುಗಳು ಸಂಚರಿಸಿತು. ಸರ್ಕಾರಿ ಬಸ್ಸು ನಿಲ್ದಾಣದಿಂದ ಹೊರ ಜಿಲ್ಲೆಗಳಿಗೆ ಖಾಸಗಿ ಬಸ್ಸು ಸಂಚಾರ ಮಾಡಿತು.
ಖಾಸಗಿ ಬಸ್ಸುಗಳ ಸಂಚಾರ ವ್ಯವಸ್ಥೆ:ಸರ್ಕಾರಿ ಬಸ್ಸು ನಿಲ್ದಾಣಕ್ಕೆ ಕೆಎಸ್ಆರ್ ಟಿಸಿ ಅಧಿಕಾರಿಗಳು ಖಾಸಗಿ ಬಸ್ಸುಗಳ ಕರೆತಂದು ಮಡಿಕೇರಿಯಿಂದ ಸುಳ್ಯ, ಮಂಗಳೂರು, ಮಡಿಕೇರಿಯಿಂದ ಕೊಣನೂರು ಅರಕಲಗೂಡು ಹಾಸನಕ್ಕೆ ಖಾಸಗಿ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡಲಾಯಿತು.
ಮಡಿಕೇರಿಯಿಂದ ಹುಣಸೂರು ಮೈಸೂರು ಮಾರ್ಗಗಳಿಗೆ ಖಾಸಗಿ ಬಸ್ಸುಗಳ ಸಂಚಾರ ಮಾಡಿತು. ಒಂದು ಬಸ್ಸು ಭರ್ತಿಯಾಗುತ್ತಿದ್ದಂತೆ ಮತ್ತೊಂದು ಬಸ್ಸನ್ನು ಕೆಎಸ್ಆರ್ ಟಿಸಿ ಅಧಿಕಾರಿಗಳು ಕಳುಹಿಸಿದರು. ಇದುವರೆಗೆ ಶಕ್ತಿ ಯೋಜನೆಯ ಮೂಲಕ ಕೆಎಸ್ ಆರ್ ಟಿ ಸಿ ಮೂಲಕ ಉಚಿತವಾಗಿ ಮಹಿಳೆಯರು ಓಡಾಡುತ್ತಿದ್ದರು. ಆದರೆ ಮಂಗಳವಾರ ಹಣ ಪಾವತಿಸಿ ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ನಡೆಸಿದರು.ಬಸ್ಸುಗಳಿಲ್ಲದೆ ತೀವ್ರ ತೊಂದರೆ ಆಗುತ್ತಿದೆ. ಸರ್ಕಾರ ಕೆಎಸ್ಆರ್ ಟಿಸಿ ಬಸ್ಸುಗಳ ಸಿಬ್ಬಂದಿಯ ಸಮಸ್ಯೆ ಬಗೆಹರಿಸಲಿ. ಸಮಸ್ಯೆ ಬಗೆಹರಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಲಿ ಎಂದು ನೊಂದ ಪ್ರಯಾಣಿಕರು ಸುದ್ದಿಗಾರರೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಮೂರು ಪಟ್ಟು ದರ ವಸೂಲಿ :ಕೆಎಸ್ಆರ್ ಟಿಸಿ ಬಸ್ಸುಗಳ ಬಂದ್ ಹಿನ್ನೆಲೆಯಲ್ಲಿ ಕೆಲವು ಖಾಸಗಿ ವಾಹನಗಳಲ್ಲಿ ಪ್ರಯಾಣಿಕರಿಂದ ಮೂರು ಪಟ್ಟು ಗ್ರಾಹಕರಿಂದ ಪ್ರಯಾಣ ಶುಲ್ಕ ವಸೂಲಿ ಮಾಡಿದರು. ಮಡಿಕೇರಿಯಿಂದ ಮೈಸೂರಿಗೆ 500 ರು. ವಸೂಲಿ ಮಾಡಿದರು. ಆದರೆ ಸರ್ಕಾರಿ ಬಸ್ಸಿನಲ್ಲಿ 147 ರುಪಾಯಿ,
ಆದರೆ ಕ್ಯಾಬಿನಲ್ಲಿ 500 ರುಪಾಯಿ ವಸೂಲಿ ಮಾಡಲಾಯಿತು. ಮಡಿಕೇರಿ ಸರ್ಕಾರಿ ಬಸ್ಸು ನಿಲ್ದಾಣದಲ್ಲೇ 500 ವಸೂಲಿ ಮಾಡಿದ್ದು, ಕೇಳೋರಿಲ್ಲ ಹೇಳೋರಿಲ್ಲ ಎಂಬಂತಾಗಿತ್ತು.ಮೈಸೂರಿಗೆ 500 ಆದರೆ ಬೆಂಗಳೂರಿಗೆ ಇನ್ನೆಷ್ಟು? ಅಷ್ಟೊಂದು ದುಡ್ಡು ಕೊಟ್ಟು ಹೋಗಲಾಗದೆ ಮಹಿಳೆಯರ ಪರದಾಟ ನಡೆಸಿದರು.
ಇದುವರೆಗೆ ಸರ್ಕಾರದಿಂದ ಉಚಿತ ಪ್ರಯಾಣವಿತ್ತು. ಆದರೆ ಬೆಳಿಗ್ಗೆಯಿಂದ ಬೆಂಗಳೂರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೇನೆ. ಆದರೆ ಬಸ್ಸಿಲ್ಲದೆ ದಿಕ್ಕು ತೋಚದಂತೆ ಆಗಿದೆ.ಖಾಸಗಿ ವಾಹನ ಖಾಸಗಿ ಬಸ್ಸುಗಳಲ್ಲಿ ಡಬ್ಬಲ್ ವಸೂಲಿ ಮಾಡುತ್ತಿದ್ದಾರೆ. ಅಷ್ಟೊಂದು ಹಣ ಕೊಟ್ಟು ಹೋಗುವುದು ಹೇಗೆ. ಶ್ರೀಮಂತರೇನೋ ಎಷ್ಟಾದರೂ ಕೊಟ್ಟು ಹೋಗುತ್ತಾರೆ. ಆದರೆ ನಮ್ಮಂತವರು ಏನು ಮಾಡಬೇಕೆಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.
ವಿದ್ಯಾರ್ಥಿಗಳ ಪರದಾಟ!
ಕೆಎಸ್ ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ತೊಂದರೆಯನುಭವಿಸಿದರು. ಸರ್ಕಾರದಿಂದ ಬಸ್ ಪಾಸ್ ಮೂಲಕ ಉಚಿತ ಸಂಚಾರ ವ್ಯವಸ್ಥೆ ಇತ್ತು. ಆದರೆ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಖಾಸಗಿ ಬಸ್ ಹಾಗೂ ಮತ್ತಿತರ ವಾಹನಗಳಲ್ಲಿ ತೆರಳುವಂತಾಗಿದೆ. ಕೆಲವೊಂದು ಗ್ರಾಮೀಣ ಭಾಗದಲ್ಲೂ ಸರ್ಕಾರಿ ಬಸ್ ಸಂಚಾರ ಇಲ್ಲದ ಪರಿಣಾಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಸಮಸ್ಯೆ ಅನುಭವಿಸಿದರು.