ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ: ಬಾಚರಣಿಯಂಡ ಪಿ. ಅಪ್ಪಣ್ಣ

KannadaprabhaNewsNetwork |  
Published : Aug 05, 2025, 11:47 PM IST
ಚಿತ್ರ :  4ಎಂಡಿಕೆ2 : ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ ಕಾರ್ಯಕ್ರಮ.  | Kannada Prabha

ಸಾರಾಂಶ

ಜಾನಪದ ಕಥೆಗಳು ಪ್ರಕೃತಿಯಲ್ಲಿನ ನೈಜ ಪುಷ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಾನಪದ ಕಥೆಗಳು ಪ್ರಕೃತಿಯಲ್ಲಿನ ನೈಜ ಪುಷ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ ನೀಡಿದ್ದಾರೆ.ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಮತ್ತು ಕಾಮಧೇನು ಗೋಶಾಲೆ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ - ಕಥೆ ಹೇಳುವ ಸ್ಪರ್ಧೆಯ ತೀರ್ಪುಗಾರರಾಗಿ ಅವರು ಮಾತನಾಡಿದರು.

1940ರ ದಶಕದಲ್ಲಿ ಖ್ಯಾತ ಕಲಾವಿದ ಕರೀಂಖಾನ್ ಅವರು ಜಾನಪದ ಕಲೆ, ಸಾಹಿತ್ಯಕ್ಕೆ ಹೊಸ ರೂಪು ನೀಡಿದರು. ಅನಂತರವೇ ಕರ್ನಾಟಕದಲ್ಲಿ ಜಾನಪದ ಕಥೆ, ಕವನಗಳಿಗೆ ಆದ್ಯತೆ ದೊರಕಿತ್ತು ಎಂದೂ ಬಾಚರಣಿಯಂಡ ಅಪ್ಪಣ್ಣ ಸ್ಮರಿಸಿದರು.

ಹೊಸ ಚಿಂತನೆ ಸೃಷ್ಟಿಸುವಂತಾಗಬೇಕು: ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್. ಟಿ. ಕಥಾ ಸಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಕಾಲಘಟ್ಟದಲ್ಲಿ ಕಥೆ ಹೇಳಲು ಅಮ್ಮ- ಅಪ್ಪನಿಗೆ ವ್ಯವಧಾನವಿಲ್ಲ. ಕಥೆ ಕೇಳಲೂ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಮಕ್ಕಳಿಗೆ ಆಸಕ್ತಿ ಇಲ್ಲದಂತಾಗಿದೆ. ಇಂಥ ಕಾಲದಲ್ಲಿ ಕಥಾ ಸಮಯದಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕಥೆಗಳನ್ನು ಕೇಳುವ ಹೊಸ ಚಿಂತನೆ ಸೃಷ್ಟಿಸುವಂತಾಗಬೇಕೆಂದು ಸಲಹೆ ನೀಡಿದರು. ಹಿರಿಯ ಲೇಖಕ ಬಾರಿಯಂಡ ಜೋಯಪ್ಪ ಮಾತನಾಡಿ, ಕಾಲ ಬದಲಾದರೂ ಇತಿಹಾಸವನ್ನು ಮರೆಯದೇ ಇತಿಹಾಸದ ಪ್ರಮುಖ ಕಥೆಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರಲ್ಲದೇ, ಹಳೇ ಕಾಲದಲ್ಲಿ ದಟ್ಟಾರಣ್ಯದ ನಡುವೇ ಒಂಟಿ ಮನೆಗಳಲ್ಲಿ ಜನ ವಾಸವಾಗಿದ್ದರೂ ವನ್ಯಜೀವಿಗಳ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ ಬದಲಾದ ಕಾಲದಲ್ಲಿ ನಾಡಿಗೇ ವನ್ಯಜೀವಿಗಳು ನುಗ್ಗಿ ದಾಂದಲೆ ಸೖಷ್ಟಿಸುತ್ತಿವೆ. ವನ್ಯಜೀವಿ- ಮಾನವನ ನಡುವಿನ ಸೌಹಾರ್ದ ಸಂಬಂಧಿತ ಕಥೆಗಳೂ ಇಂದಿನ ಅಗತ್ಯದಂತಿದೆ ಎಂದರು. ಕಥಾ ಸಮಯದಂಥ ಚಿಂತನೆಗೊಡ್ಡುವ ಕಾರ್ಯಕ್ರಮಗಳು ಅತ್ಯಂತ ಮೌಲ್ಯಯುತವಾಗಿದೆ ಎಂದೂ ಅವರು ಬಣ್ಣಿಸಿದರು.

ಪ್ರತೀ ಅಂಶದಲ್ಲಿಯೂ ಒಂದೊಂದು ಕಥೆಯಿದೆ: ಅಸೀಮಾ ಮಾಸ ಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ, ಸೃಷ್ಟಿಯ ಪ್ರತೀ ಅಂಶದಲ್ಲಿಯೂ ಒಂದೊಂದು ಕಥೆಯಿದೆ. ಬೇರೊಬ್ಬರ ಕಣ್ಣಲ್ಲಿ ಪ್ರತೀಯೋರ್ವರೂ ಒಂದು ಕಥೆಯಾಗುತ್ತೇವೆ ಎಂದರಲ್ಲದೇ ಕೂಡುಕುಟುಂಬ ಪದ್ಧತಿ ಕಡಮೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ಕಥೆಗಳಲ್ಲ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ನಾದಿನಿಯ ಪಾತ್ರಗಳೇ ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂಥ ಸಂಬಂಧಗಳ ಬಗ್ಗೆ ಮಕ್ಕಳಿಗೆ ಗೊತ್ತೇ ಇಲ್ಲದಾದಾಗ ಆ ಪಾತ್ರಗಳನ್ನು ಕಥೆಗಳಲ್ಲಿ ಹೇಗೆ ಸೃಷ್ಟಿಸಲು ಸಾಧ್ಯ ಎಂದೂ ಕಳವಳ ವ್ಯಕ್ತಪಡಿಸಿದರು.ವಿರಾಜಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನ ರೀತಿಯಲ್ಲಿ ಕಥಾ ಸಮಯ ಆಯೋಜಿಸಿದ್ದು ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದೆ ಎಂದರು. ವಿದ್ಯಾರ್ಥಿಗಳಲ್ಲಿ ಕಥೆ ಬರೆಯಲು ಇಂಥ ಕಾರ್ಯಕ್ರಮ ಪ್ರೋತ್ಸಾಹ ನೀಡುತ್ತದೆ ಎಂದು ಅವರು ಹೇಳಿದರು.

ಭಾಷೆಯ ಗಟ್ಟಿತನ ಮುಖ್ಯವಾಗಬೇಕು: ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಯಾವುದೇ ಬರಹ ಆಗಿರಲಿ ಅದರಲ್ಲಿ ಭಾಷಾ ಸೌಂದರ್ಯ, ಭಾಷೆಯ ಗಟ್ಟಿತನ ಮುಖ್ಯವಾಗಬೇಕು. ಕ್ರಿಯಾತ್ಮಕತೆ ಕಥೆಗಳ ಮೂಲವಾಗಿರಬೇಕು. ಬಾವಿಯೊಳಗಿನ ಕಪ್ಪೆಯಂತೆ ಕಥೆಗಾರನ ಕಥಾ ಸೃಷ್ಟಿ ಇರದೇ ಪ್ರತೀ ಕಥೆಯಲ್ಲಿಯೂ ನಾವೀನ್ಯತೆ ಕಂಗೊಳಿಸಬೇಕೆಂದು ಸಲಹೆ ನೀಡಿದರು.ಕೊಡಗು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ರಾಮಚಂದ್ರ ಭಟ್ ಮಾತನಾಡಿ, ಹಿರಿಯ ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಮಾತನಾಡಿದರು.

ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ ನ ಟ್ರಸ್ಟಿ ಕೆ.ಕೆ. ಶ್ಯಾಮ, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಷಾ ಪ್ರೀತಮ್ ಸ್ವಾಗತಿಸಿ, ನಿರೂಪಿಸಿದರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ವಿರಾಜಪೇಟೆ ತಾಲೂಕು ಸಂಘದ ನಿರ್ದೇಶಕರು, ಸದಸ್ಯರು, ಜಿಲ್ಲಾ ಸಂಘದ ನಿರ್ದೇಶಕರಾದ ಶಿವಪ್ಪ, ಗುರುದರ್ಶನ್, ಸಂಘದ ಸದಸ್ಯರು, ಗೋಶಾಲಾ ಸಂರಕ್ಷಣಾ ಟ್ರಸ್ಟ್ ಪ್ರಮುಖರು ಹಾಜರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದು ಕಥೆಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.-----------------------------ಕಥಾ ಸಮಯ ಸ್ಪರ್ಧಾ ವಿಜೇತರು.ಸಾರ್ವಜನಿಕ ವಿಭಾಗ - ಪ್ರಥಮ - ಕಿಗ್ಗಾಲು ಗಿರೀಶ್ , ದ್ವಿತೀಯ - ಮೀದೇರೀರ ಕವಿತಾ ರಾಮು . ತೃತೀಯ - ಕೂಡಕಂಡಿ ಓಂಶ್ರೀ ದಯಾನಂದಕಾಲೇಜು ವಿಭಾಗ - ಪ್ರಥಮ - ಮದನ್ ಚೇರಂಬಾಣೆ, ದ್ವಿತೀಯ - ರಾದಿಕ, ತೃತೀಯ - ರಕ್ಷಿತಾಪ್ರಾಥಮಿಕ , ಪ್ರೌಢಶಾಲಾ ಶಾಲಾ ವಿಭಾಗ - ಪ್ರಥಮ - ಡೀನ್ಸ್ ಸಾಲ್ವೋ ಡಿಸೋಜಾ, ದ್ವಿತೀಯ - ಹಷ್ಮಿತಾ, ತೃತೀಯ ಎಂ.ಪಿ. ತಷ್ಮಿತ

PREV

Recommended Stories

ದೊಡ್ಡೆತ್ತಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹6 ಲಕ್ಷ ಲಾಭ: ವಸಂತಕುಮಾರ್‌
ಕೃಷ್ಣಮೂರ್ತಿಪುರಂ ಅಭಿನವ ಮಂತ್ರಾಲಯದಲ್ಲಿ ರಾಯರ ಆರಾಧನೆ