ಹಾವೇರಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಜಿಲ್ಲಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸಾರಿಗೆ ಬಸ್ಗಳ ಕಾರ್ಯಾಚರಣೆ ಎಂದಿನಂತಿತ್ತು. ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು ಹೊರತುಪಡಿಸಿ ಜಿಲ್ಲೆ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ.
ಆದರೆ, ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರಬೇಕಿದ್ದ ಬಸ್ಸುಗಳು ಬರಲಿಲ್ಲ. ಜಿಲ್ಲೆಯಿಂದ ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ದೂರದ ಮಾರ್ಗಗಳಿಗೆ ಬಸ್ ಬಿಟ್ಟರೂ ಅವು ಗಮ್ಯ ತಲುಪಲು ಸಾಧ್ಯವಾಗಲಿಲ್ಲ. ಮುಷ್ಕರದ ಬಗ್ಗೆ ಮಾಹಿತಿ ಇದ್ದುದರಿಂದ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಿತ್ತು. ಗ್ರಾಮೀಣ ಭಾಗಗಳಿಗೆ ಬಸ್ಗಳು ಎಂದಿನಂತೆ ಸಂಚರಿಸಿದವು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋಗುವ ನೌಕರರಿಗೆ ಯಾವುದೇ ಸಮಸ್ಯೆಯಾಗದೇ ಎಂದಿನಂತೆ ಪ್ರಯಾಣ ಮಾಡಿದರು.
ಪರದಾಟ: ದೂರದ ನಗರ, ಊರುಗಳಿಗೆ ಹೋಗುವ ಹಾಗೂ ದೇವಸ್ಥಾನಕ್ಕೆ ಹೋಗಬೇಕಿದ್ದ ಕೆಲ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಬೇರೆ ಕಡೆಗಳಿಂದ ಬರಬೇಕಿದ್ದ ಬಸ್ಸುಗಳು ಬಾರದ್ದರಿಂದ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲೇ ಕಾಯುತ್ತ ಕುಳಿತಿದ್ದ ದೃಶ್ಯ ಕಂಡುಬಂತು.ಯಲ್ಲಮನ ಗುಡ್ಡಕ್ಕೆ ಹೋಗಬೇಕಿದ್ದ ಕೆಲ ಪ್ರಯಾಣಿಕರು ಬಸ್ ಬಿಡುವಂತೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಒತ್ತಾಯಿಸಿದ ಘಟನೆ ನಡೆಯಿತು. ಇಲ್ಲಿಂದ ಹುಬ್ಬಳ್ಳಿವರೆಗೆ ಮಾತ್ರ ನಾವು ಬಸ್ ಬಿಡುತ್ತೇವೆ, ನೀವು ಮುಂದೆ ಹೇಗೆ ಹೋಗುತ್ತೀರಿ ಎಂದು ಚಾಲಕ ಹೇಳಿದ್ದರಿಂದ ಸಿಟ್ಟಾದ ಪ್ರಯಾಣಿಕರು ಮಾತಿನ ಚಕಮಕಿ ನಡೆಸಿದರು. ಇಂಥ ಸಣ್ಣಪುಟ್ಟ ಘಟನೆ ಬಿಟ್ಟರೆ ಜಿಲ್ಲಾದ್ಯಂತ ಯಾವುದೇ ಸಮಸ್ಯೆ ಎದುರಿಸದೇ ಜನರು ಸಂಚಾರ ನಡೆಸಿದರು.
ಪ್ರಯಾಣಿಕರ ಸಂಖ್ಯೆ ಕಡಿಮೆ:
2 ಸಾವಿರ ಸಿಬ್ಬಂದಿ ಹಾಜರ್: ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಬಸ್ಗಳ ಕಾರ್ಯಾಚರಣೆ ಆಗಿದೆ. ಮುಷ್ಕರದ ಕಾರಣಕ್ಕೆ ಯಾವ ಬಸ್ ಕೂಡ ನಿಂತಿಲ್ಲ. 545 ಬಸ್ಗಳ ಕಾರ್ಯಾಚರಣೆ ನಡೆದಿದ್ದು, 2 ಸಾವಿರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ್ ತಿಳಿಸಿದರು.