ಕನ್ನಡಪ್ರಭ ವಾರ್ತೆ ಕಡೂರು
ಮಂಗಳವಾರ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಟನೆ ಕರೆ ಮೇರೆಗೆ ನಡೆದ ಮುಷ್ಕರದಿಂದ ಶಿವಮೊಗ್ಗ- ಬೆಂಗಳೂರು ರಾಷ್ರೀಯ ಹೆದ್ದಾರಿ ಹಾದು ಹೋಗುವ ಕಡೂರು ಪಟ್ಟಣದಲ್ಲಿ ಕೆಂಪು ಬಸ್ಸುಗಳಿಗೆ ಬದಲಾಗಿ ಖಾಸಗಿ ವಾಹನಗಳು ಸಂಚರಿಸುವ ಮುಖೇನ ಕೆ. ಎಸ್.ಆರ್ ಟಿ.ಸಿ ಬಸ್ ನಿಲ್ದಾಣದಲ್ಲೂ ಖಾಸಗಿ ಬಸ್ ಗಳು, ಕ್ರೂಸರ್ ಮತ್ತು ವಿವಿಧ ವಾಹನಗಳು ಪ್ರಯಾಣಿಕರನ್ನು ಕಾಯುತ್ತಾ ನಿಂತವು. ಇನ್ನು ಗ್ರಾಮೀಣ ಸಾರಿಗೆ ನಿಲ್ದಾಣದಲ್ಲಿ ಪ್ರಯಾಣಿಕರು, ಬಸ್ಸುಗಳು ಬರಲಿಲ್ಲ.
ಗ್ರಾಮೀಣ ಬಸ್ಸುಗಳು ಬೀದಿಗಿಳಿಯದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ತೊಂದರೆ ಅನುಭವಿಸಿದರು. ಮುಷ್ಕರದ ಬಗ್ಗೆ ತಿಳಿದಿದ್ದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಿಂದ ವರ್ತಕರು, ರೈತರು, ಅಷ್ಟಾಗಿ ಪಟ್ಟಣಕ್ಕೆ ಬರಲಿಲ್ಲ. ಆಟೋಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿತ್ತು, ಜರೂರು ಇದ್ದ ಜನರು ಆಟೋಗಳನ್ನೇ ಆಶ್ರಯಿಸಬೇಕಾಯಿತು.ಅಲ್ಲದೆ ಬಸ್ ನಿಲ್ದಾಣದಲ್ಲಿ ಅಂಗಡಿಗಳು ಮತ್ತು ಹೋಟೆಲ್ ಕೂಡ ಮುಚ್ಚಿದ್ದವು. ಪ್ರಯಾಣಿಕರಿಗಿಂತ ಬಂದೋ ಬಸ್ತಿಗೆ ಬಂದಿದ್ದ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ಕಂಡು ಬಂದಿತು.
-- ಬಾಕ್ಲ್ ಸುದ್ದಿಗೆ---
ನಮ್ಮ ಬಸ್ ಡಿಪೋ ಶೆಡ್ಯೂಲ್ ನಲ್ಲಿ ಆದೇಶ ಬಾರದ ಕಾರಣ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಜನರ ಪ್ರಯಾಣಕ್ಕೆ ತೊಂದರೆ ಆಗದಂತೆ ನಮ್ಮ ಮೇಲಾಧಿಕಾರಿ ಆದೇಶದಂತೆ ಪೊಲೀಸರ ಭದ್ರತೆಯಲ್ಲಿ ಚಿಕ್ಕಮಗಳೂರು ಕಡೆಗೆ ತೆರಳಲು ಮೂರು ಬಸ್ಸುಗಳನ್ನು ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ಕಡೂರು ಬಸ್ ಡಿಪೋ ವ್ಯವಸ್ಥಾಪಕ ಅರುಣ ಮಾಹಿತಿ ನೀಡಿದರು. ಅದಕ್ಕೂ ಮುಂಚೆಯೇ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಯೋಜಿಸಿದ್ದರೂ ಜನರು ಇರಲಿಲ್ಲ. ಬೆಳಿಗ್ಗೆ ಸಾರಿಗೆ ನೌಕರರು ಬಂದರೂ ಕರ್ತವ್ಯಕ್ಕೆ ಹಾಜರಾಗದೆ ಮತ್ತೆ ವಾಪಸ್ ತೆರಳಿದರು. ನಮ್ಮ ಡಿಪೋದಲ್ಲಿ 86 ಶೆಡ್ಯೂಲ್ ಇದ್ದು 90 ಬಸ್ಸುಗಳು ಮತ್ತು 127 ಉದ್ಯೋಗಿಗಳು ಇದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಕಾದು ನೋಡುವ ಮೂಲಕ ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.
ಕಡೂರು ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಕರೆದೊಯ್ಯಲು ಖಾಸಗಿ ಬಸ್ಸುಗಳು ಮತ್ತು ಕ್ರೂಸರ್ ವಾಹನಗಳು ನಿಂತಿರುವುದು.