ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಮರಳಿ ಗ್ರಾಮದ ಹೊರವಲಯದ 16 ಕೂಟದ ದೊರೆ ಶ್ರೀಚನ್ನಿಗರಾಯಸ್ವಾಮಿ ದೇವಸ್ಥಾನದ ಗೋಪುರದ ಮೇಲೆ ಮರ ಬಿದ್ದು ಗೋಪುರ ಹಾಗೂ ಗೋಪುರದ ಮೇಲಿದ್ದ ವಿಗ್ರಹಗಳು ಬಿರುಕು ಬಿಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಹಿಂಭಾಗದಲ್ಲಿದ್ದ ಹಿಟ್ಟಿ ಮರದ ಬುಡ ಕೊಳೆತು ಗಾಳಿಗೆ ಗುರುವಾರ ಬೆಳಗ್ಗೆ ದೇವಸ್ಥಾನದ ಗೋಪುರದ ಮೇಲೆ ಉರುಳಿ ಬಿದಿದ್ದೆ.ಮರ ಬಿದ್ದ ರಭಸಕ್ಕೆ ಗೋಪುರ ಮೇಲಿದ್ದ ಕಳಸ, ವಿಗ್ರಹಗಳು ಛಿದ್ರವಾಗಿವೆ. ಗೋಪುರ ಬಿರುಕು ಬಿಟ್ಟಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಶ್ರೀಚನ್ನಿಗರಾಯಸ್ವಾಮಿ ಪುರಾತನ ದೇವಾಲಯ. ಕೆಲ ವರ್ಷಗಳ ಹಿಂದೆ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿತ್ತು. ಈಗ ಮರ ಬಿದ್ದು ಮತ್ತೆ ದೇವಸ್ಥಾನದ ಗೋಪುರ ಬಿರುಕು ಬಿಟ್ಟಿರುವುದು ದುರಂತದ ಸಂಗತಿಯಾಗಿದೆ.
ಗ್ರಾಮದ ದೇವಸ್ಥಾನ ಕಮಿಟಿ ಸದಸ್ಯರು, ಮುಖಂಡರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಗ್ರಾಮ ಆಡಳಿತಾಧಿಕಾರಿ ಗೋಳಪ್ಪ ಅವರು ಸ್ಥಳಕ್ಕೆ ಪರಿಶೀಲನೆ ನಡೆಸಿದರು. ಘಟನೆ ವಿವರವನ್ನು ವರದಿ ಮೂಲಕ ತಹಸೀಲ್ದಾರ್ ಅವರಿಗೆ ಸಲ್ಲಿಸಲಾಗುವುದು. ಮುಜರಾಯಿ ಇಲಾಖೆಯಿಂದ ದೇವಸ್ಥಾನದ ರಿಪೇರಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡುವಂತೆ ಕಮಿಟಿ ಸದಸ್ಯರು, ಯಜಮಾನರು ಗ್ರಾಮ ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದರು.ಸಿಲಿಂಡರ್ ಸ್ಫೋಟಕ್ಕೆ ಮನೆ ಭಸ್ಮ
ಶ್ರೀರಂಗಪಟ್ಟಣ:ಸಿಲಿಂಡರ್ ಸ್ಫೋಟದಿಂದ ವಾಸದ ಮನೆಯೇ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಕೊಡಿಯಾಲ ಗ್ರಾಮದ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಗ್ರಾಮದ ರವಿ ಅವರ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮನೆಯಲ್ಲಿ ಇಡಲಾಗಿದ್ದ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿ ಉರಿದು ಸ್ಫೋಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಫೋಟದ ತೀವ್ರತೆಗೆ ಮನೆ ಚಾವಣಿ ಛಿದ್ರಗೊಂಡು ಮನೆಯಲ್ಲಿದ್ದ ಮನೆಯಲ್ಲಿದ್ದ ವಸ್ತುಗಳು ಚದುರಿ ಹೋಗಿವೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ಶಮನ ಕಾರ್ಯಾಚರಣೆ ಮಾಡಲಾಗಿದೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.