ಹಿರಿಯ ಪತ್ರಕರ್ತೆ ಭುವನೇಶ್ವರಿಗೆ ಶ್ರದ್ಧಾಂಜಲಿ

KannadaprabhaNewsNetwork | Published : Feb 14, 2024 2:19 AM

ಸಾರಾಂಶ

ವೃತ್ತಿ ಧರ್ಮದಲ್ಲಿ ಬದ್ಧತೆ ಹೊಂದಿದ್ದ ದಿವಂಗತ ಭುವನೇಶ್ವರಿಯವರು ಮಾಧ್ಯಮ ಕ್ಷೇತ್ರವನ್ನು ಶ್ರೀಮಂತವಾಗಿಸಿದವರಲ್ಲಿ ಒಬ್ಬರಾಗಿದ್ದರು. ಆಂಗ್ಲ ಪತ್ರಿಕೆಗಳಲ್ಲಿ ಸ್ಥಳೀಯ ಸುದ್ದಿಗಳಿಗೆ ಅವಕಾಶ ಕಡಿಮೆ. ಇವರ ಉತ್ತಮ ಬರಹದಿಂದ ವಾರಕ್ಕೆರಡು ಲೇಖನಗಳು ಹಿಂದೂ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.

ಗಣ್ಯರು, ಸಹೋದ್ಯೋಗಿಗಳಿಂದ ಪತ್ರಕರ್ತೆಗೆ ನುಡಿನಮನ । ಕುಟುಂಬದವರಿಗೆ ಪತ್ರಕರ್ತ ಸಂಘದಿಂದ ಸಾಂತ್ವಾನ

ಕನ್ನಡಪ್ರಭ ವಾರ್ತೆ ತುಮಕೂರು

ಕಳೆದ ಜನವರಿ 31ರಂದು ಅಗಲಿದ ಹಿರಿಯ ಪತ್ರಕರ್ತೆ ಭುವನೇಶ್ವರಿಯವರಿಗೆ ನಗರದ ಕನ್ನಡ ಭವನದಲ್ಲಿಂದು ಗಣ್ಯರು, ಸಹೋದ್ಯೋಗಿಗಳು ನುಡಿ ನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಕ್ರಿಯಾಶೀಲ ವರದಿಗಾರರಾಗಿದ್ದ ಭುವನೇಶ್ವರಿಯವರ ಅಗಲಿಕೆಯಿಂದ ಜಿಲ್ಲೆಯ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ರಾಷ್ಟ್ರೀಯ ಪತ್ರಿಕೆಯಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಅವರ ವಸ್ತುನಿಷ್ಠ ವರದಿಗಾರಿಕೆಯಿಂದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಭಾವಿಸುತ್ತೇನೆ. ಅನಿರೀಕ್ಷಿತವಾಗಿ ನಮ್ಮೆಲ್ಲರನ್ನು ಅಗಲಿರುವುದು ದುಃಖದ ಸಂಗತಿ. ಭಗವಂತನು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಪರಿಸರವಾದಿ ಯತಿರಾಜು ಮಾತನಾಡಿ, ವೃತ್ತಿ ಧರ್ಮದಲ್ಲಿ ಬದ್ಧತೆ ಹೊಂದಿದ್ದ ದಿವಂಗತ ಭುವನೇಶ್ವರಿಯವರು ಮಾಧ್ಯಮ ಕ್ಷೇತ್ರವನ್ನು ಶ್ರೀಮಂತವಾಗಿಸಿದವರಲ್ಲಿ ಒಬ್ಬರಾಗಿದ್ದರು. ಆಂಗ್ಲ ಪತ್ರಿಕೆಗಳಲ್ಲಿ ಸ್ಥಳೀಯ ಸುದ್ದಿಗಳಿಗೆ ಅವಕಾಶ ಕಡಿಮೆ. ಇವರ ಉತ್ತಮ ಬರಹದಿಂದ ವಾರಕ್ಕೆರಡು ಲೇಖನಗಳು ಹಿಂದೂ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿ, ವಸ್ತುನಿಷ್ಠ ವರದಿಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಪರವಾಗಿ ನಿಲ್ಲುತ್ತಿದ್ದ ವ್ಯಕ್ತಿತ್ವ ಅವರದು. ತಳ ಸಮುದಾಯ ಶೋಷಿತರ ಪರವಾಗಿ ವಿಶೇಷ ಲೇಖನಗಳ ಮೂಲಕ ಆಡಳಿತಶಾಹಿ ಸೆಳೆಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದ ಭುವನೇಶ್ವರಿ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಅವರ ಹೆಸರಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ನೀಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮನವಿ ಮಾಡಿದರು.

ಹಿರಿಯ ಪತ್ರಕರ್ತ ಚಿ.ನೀ. ಪುರುಷೋತ್ತಮ್ ಮಾತನಾಡಿ, ಭುವನೇಶ್ವರಿಯವರು ಜಿಲ್ಲೆಯ ಏಕೈಕ ಮಹಿಳಾ ಪತ್ರಕರ್ತೆಯಾಗಿ ಉತ್ತಮ ವರದಿಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅವರ ಅಗಲಿಕೆಯಿಂದ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನೋವುಂಟಾಗಿದೆ.ಅವರ ಕುಟುಂಬದವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ೧೦ಸಾವಿರ ರು. ನೀಡಲಾಗಿದ್ದು, ರಾಜ್ಯ ಸಂಘದಿಂದಲೂ ನೀಡಲಾಗುವುದು. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಸಂತಾಪ ವ್ಯಕ್ತಪಡಿಸಿದರು.

ಪತ್ರಕರ್ತರಾದ ಸೊಗಡು ವೆಂಕಟೇಶ್, ಶಶಿಧರ್ ದೋಣಿಹಕ್ಲು, ರಂಗರಾಜು, ಪಿ.ಡಿ. ಈರಣ್ಣ, ಸಾ.ಚಿ. ರಾಜಕುಮಾರ್, ಸುಬ್ರಹ್ಮಣ್ಯ, ಜಗನ್ನಾಥ್ ಕಾಳೇನಹಳ್ಳಿ, ಟಿ.ಎಚ್. ಸುರೇಶ್, ಪರಮೇಶ್, ದಿ.ಭುವನೇಶ್ವರಿ ಅವರ ಪತಿ ಪ್ರಕಾಶ್ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಭುವನೇಶ್ವರಿ ಪುತ್ರ ಅಮಿತ್ ಹಾಗೂ ತಂದೆ, ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ಜಿಲ್ಲೆ ಪತ್ರಕರ್ತರಾದ ಟಿ.ಇ. ರಘುರಾಮ್, ಚಂದ್ರಮೌಳಿ, ವಾರ್ತಾ ಇಲಾಖೆ ರೂಪಕಲಾ, ನಾಗೇಂದ್ರ ಸೇರಿದಂತೆ ಸ್ನೇಹಿತರು, ಸಹದ್ಯೋಗಿಗಳು ಉಪಸ್ಥಿತರಿದ್ದರು.

Share this article