ಕನ್ನಡಪ್ರಭ ವಾರ್ತೆ ಹಾನಗಲ್ಲ
ತಾಲೂಕಿನ ಯಳ್ಳೂರಿನಲ್ಲಿ ಇತ್ತೀಚೆಗೆ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿ ಕುಮಾರಗೌಡ ಮರಿಗೌಡರನನ್ನು ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿಯಲ್ಲಿ ಹಾನಗಲ್ಲ ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ದಿನದಿಂದಲೇ ಪರಾರಿಯಾದ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ರಚಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗಣಾರೆ, ಎಎಸ್ಪಿ ಸಿ. ಗೋಪಾಲ, ಡಿವೈಎಸ್ಪಿ ಮಂಜುನಾಥ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಹಾನಗಲ್ಲ ಸಿಪಿಐ ಎಸ್.ಆರ್. ಶ್ರೀಧರ, ಪಿಎಸ್ಐಗಳಾದ ಯಲ್ಲಪ್ಪ ಹಿರಗಣ್ಣನವರ, ಸಂಪತ್ಕುಮಾರ, ಕ್ರೈಂ ಪಿಎಸ್ಐ ಹಳ್ಳಿಯವರ ಅವರನ್ನು ಒಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ತಡರಾತ್ರಿ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿಯಲ್ಲಿ ಆರೋಪಿಯನ್ನು ಬಂಧಿಸಿ ಹಾನಗಲ್ಲ ಪೊಲೀಸ್ ಠಾಣೆಗೆ ತರಲಾಗಿದ್ದು, ಗುರುವಾರ ಎಳವಟ್ಟಿಯಲ್ಲಿ ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿ ಸಿಪಿಐ ಎಸ್.ಆರ್. ಶ್ರೀಧರ ಹಾಗೂ ಪಿಎಸ್ಐ ಯಲ್ಲಪ್ಪ ಹಿರಗಣ್ಣನವರ ನೇತೃತ್ವದಲ್ಲಿ ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.