ಕೋರಂ ಅಭಾವದಿಂದ ಎರಡನೇ ಬಾರಿಗೆ ತುಂಬಲ ಗ್ರಾಪಂ ಸಾಮಾನ್ಯ ಸಭೆ ಮುದೂಡಿಕೆ

KannadaprabhaNewsNetwork |  
Published : Jun 27, 2025, 12:48 AM IST
55 | Kannada Prabha

ಸಾರಾಂಶ

ಅಧ್ಯಕ್ಷ ರಾಮನಂಜಯ್ಯ ಅವರಿಗೆ ಅಧಿಕಾರದ ದುರಾಸೆ ಹೆಚ್ಚಾಗಿದೆ. ಹಾಗಾಗಿ ಚುನಾವಣಾ ಪೂರ್ವದಲ್ಲಿ ನಡೆದ ಆಂತರಿಕ ಒಪ್ಪಂದವನ್ನು ಮುರಿದು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತಾಲೂಕಿನ ತುಂಬಲ ಗ್ರಾಪಂನಲ್ಲಿ ಗುರುವಾರ ಕರೆದಿದ್ದ ಸಾಮಾನ್ಯ ಸಭೆ ಸದಸ್ಯರ ಕೋರಂ ಅಭಾವದಿಂದ ಎರಡನೇ ಬಾರಿಗೆ ರದ್ದಾಯಿತು.

ಒಟ್ಟು 13 ಸದಸ್ಯರ ಸಂಖ್ಯಾಬಲ ಹೊಂದಿರುವ ಪಂಚಾಯ್ತಿಯಲ್ಲಿ ಸಭೆ ನಡೆಸಲು 7 ಮಂದಿ ಸದಸ್ಯರ ಹಾಜರಿ ಅವಶ್ಯಕತೆ ಇದ್ದು, ಗುರುವಾರ ನಡೆದ ಸಭೆಗೆ ಓರ್ವ ಸದಸ್ಯರ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಮನಂಜಯ್ಯ ಕೋರಂ ಇಲ್ಲದೆ ಸಭೆಯನ್ನು ರದ್ದುಗೊಳಿಸಿದರು.

ಅಧ್ಯಕ್ಷ ರಾಮನಂಜಯ್ಯ ಅವರ ಮೇಲೆ ಸದಸ್ಯರಿಗೆ ವಿಶ್ವಾಸವಿಲ್ಲದೆ ಇಂದಿನ ಸಭೆಗೆ ಸದಸ್ಯರು ಗೈರಾಗಲು ಕಾರಣವೆನ್ನಲಾಗಿದೆ.

ಸಭೆಗೆ ಅಧ್ಯಕ್ಷ ರಾಮನಂಜಯ್ಯ, ಸದಸ್ಯರಾದ ಬಸವರಾಜು, ರತ್ನಮ್ಮ, ಸರಸ್ವತಮ್ಮ, ಪದ್ಮ ಹಾಗು ಅನಿತಾ ಪಾಲ್ಗೊಂಡಿದ್ದರೆ, ಉಪಾಧ್ಯಕ್ಷೆ ಉಮಾ, ಮಾಜಿ ಉಪಾಧ್ಯಕ್ಷ ಸತೀಶ್, ಚಂದ್ರಶೇಖರ್ (ಗುಂಡ), ಶೇಖರ್, ಸದಸ್ಯರಾದ ಕಂಬಯ್ಯ, ಸುಲೋಚನಾ, ಮಣಿಯಮ್ಮ ಗೈರಾಗುವ ಮೂಲಕ ಅಧ್ಯಕ್ಷರ ಮೇಲೆ ತಮಗೆ ವಿಶ್ವಾಸವಿಲ್ಲ ಎಂಬ ಸಂದೇಶ ರವಾನಿಸಿದರು.

ಈ ಹಿಂದೆ ಮೇ 12 ರಂದು ಅಧ್ಯಕ್ಷ ರಾಮನಂಜಯ್ಯ ಸಾಮಾನ್ಯ ಸಭೆ ಕರೆದು ಕೋರಂ ಕೊರತೆ ಉಂಟಾಗಲಿದೆ ಎಂಬುದನ್ನು ಅರಿತು ಕ್ಷುಲ್ಲಕ ಕಾರಣವೊಡ್ಡಿ ಸಭೆಯನ್ನು ಮುಂದೂಡಿದ್ದರು ಎನ್ನಲಾಗಿದೆ.

ಆಂತರಿಕ ಒಪ್ಪಂದ ಮುರಿದ ರಾಮನಂಜಯ್ಯ:

ಅಧ್ಯಕ್ಷ ರಾಮನಂಜಯ್ಯ ಕರೆದಿದ್ದ ಸಾಮಾನ್ಯ ಸಭೆಗೆ ಗೈರಾದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷರ ನಡೆಯನ್ನು ಖಂಡಿಸಿದರು.

ಮಾಜಿ ಉಪಾಧ್ಯಕ್ಷ ಶೇಖರ್ ಮಾತನಾಡಿ, ಅಧ್ಯಕ್ಷ ರಾಮನಂಜಯ್ಯ ಅವರಿಗೆ ಅಧಿಕಾರದ ದುರಾಸೆ ಹೆಚ್ಚಾಗಿದೆ. ಹಾಗಾಗಿ ಚುನಾವಣಾ ಪೂರ್ವದಲ್ಲಿ ನಡೆದ ಆಂತರಿಕ ಒಪ್ಪಂದವನ್ನು ಮುರಿದು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಎಂದು ಆರೋಪಿಸಿದರು.ಸದಸ್ಯರೊಬ್ಬರ ಹೈಜಾಕ್....!

ಒಂದು ಬಾರಿ ರದ್ದಾಗಿದ್ದ ಸಾಮಾನ್ಯ ಸಭೆಯಿಂದ ಬೇಸರಗೊಂಡಿದ್ದ ಅಧ್ಯಕ್ಷರು ಈ ಬಾರಿಯ ಸಾಮಾನ್ಯ ಸಭೆಯನ್ನು ನಡೆಸಲೇಬೇಕೆಂಬ ಉದ್ದೇಶ ಹೊಂದಿದ್ದರು.

ಅಂತೆಯೇ ಸದಸ್ಯರೊಬ್ಬರನ್ನು ಹೈಜಾಕ್ ಮಾಡಿದ ಕುತೂಹಲಕಾರಿ ಘಟನೆ ಕೂಡ ನಡೆಯಿತು. ಸಭೆ ನಡೆಸಲು 7 ಸದಸ್ಯರ ಬಲಬೇಕಿತ್ತು. ಒಬ್ಬರು ಸದಸ್ಯರ ಕೊರತೆ ಎದುರಾಗಿತ್ತು. ಆಗ ಕಣ್ಣಿಗೆ ಬಿದ್ದದ್ದು ಗ್ರಾಮದ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಸದಸ್ಯ ಸತೀಶ್.

ಅವರನ್ನುಕಾರಿಗೆ ಹತ್ತಿಸಿಕೊಂಡ ಅಧ್ಯಕ್ಷರ ಸಂಬಂಧಿಯೊಬ್ಬರು ತಾಲೂಕಿನಾದ್ಯಂತ ಸುತ್ತಾಡಿಸಿ 11.30ರ ವೇಳೆಗೆ ಪಂಚಾಯಿತಿ ಬಳಿ ತಂದು ಇಳಿಸಿದರು. ಆದರೆ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ಕಾರಿನಿಂದಿಳಿದ ಸತೀಶ್ ಸಭಾಂಗಣಕ್ಕೆ ತೆರಳಲೇ ಇಲ್ಲ. ಹಾಗಾಗಿ ಸಾಮಾನ್ಯ ಸಭೆ ರದ್ದಾಯಿತು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ