ಆಗುಂಬೆ ಘಾಟಿ ರಸ್ತೆಯಲ್ಲಿ ಸುರಂಗ ಮಾರ್ಗ ಅನಿವಾರ್ಯ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Feb 17, 2026, 01:45 AM IST
ಫೋಟೋ 16 ಟಿಟಿಎಚ್ 01: ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಪಟ್ಟಣದ ಆಗುಂಬೆ ವೃತ್ತದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಯಾಣಿಕರ ತಂಗುದಾಣದ ಶಂಕುಸ್ಥಾಪನೆಯನ್ನು ಶಾಸಕ ಆರಗ ಜ್ಞಾನೇಂದ್ರ ನೆರವೇರಿಸಿದರು. | Kannada Prabha

ಸಾರಾಂಶ

ಮಲೆನಾಡು ಕರಾವಳಿ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯನ್ನು ಸುರಂಗ ಮಾರ್ಗ ಅಥವಾ ಫ್ಲೈಓವರ್ ಮೂಲಕ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ತಾಲೂಕಿನ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸಂಪರ್ಕ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಮಲೆನಾಡು ಕರಾವಳಿ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯನ್ನು ಸುರಂಗ ಮಾರ್ಗ ಅಥವಾ ಫ್ಲೈಓವರ್ ಮೂಲಕ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ತಾಲೂಕಿನ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸಂಪರ್ಕ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ 15 ಲಕ್ಷ ರು. ಆರ್ಥಿಕ ನೆರವಿನೊಂದಿಗೆ ತೀರ್ಥಹಳ್ಳಿ ಪಟ್ಟಣದ ಆಗುಂಬೆ ವೃತ್ತದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಯಾಣಿಕರ ತಂಗುದಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕರಾವಳಿ ಸಂಪರ್ಕದ ದೃಷ್ಟಿಯಿಂದ ಆಗುಂಬೆ ಘಾಟಿ ಅಭಿವೃದ್ದಿ ಅಗತ್ಯವಾಗಿದ್ದು ಈ ಬಗ್ಗೆ ಡಿಪಿಆರ್ ಕೂಡಾ ಸಿದ್ದವಾಗಿದೆ ಎಂದು ಹೇಳಿದರು.

ಮಳೆಗಾಲದ ಅವದಿಯಲ್ಲಿ ಪ್ರಯಾಣಿಕರು ಅಂಗಡಿಕಟ್ಟೆಗಳಲ್ಲಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ನಿರ್ಮಾಣಗೊಳ್ಳುವ ತಂಗುದಾಣ ಅತ್ಯಂತ ಅಗತ್ಯವಾಗಿದೆ. ಯಾವುದೇ ಕಾಮಗಾರಿಗಳು ಸಾರ್ವಜನಿಕರಿಗೆ ಅನುಕೂಲ ಮತ್ತು ಪಟ್ಟಣದ ಶೋಭೆಗೆ ಪೂರಕವಾಗಿ ಅಚ್ಚುಕಟ್ಟಾಗಿ ಇದರ ನಿರ್ಮಾಣವಾಗಬೇಕಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪಟ್ಟಣದಲ್ಲಿ ವಾಹನಗಳ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಭಾರತೀಪುರದಿಂದ ರಂಜದಕಟ್ಟೆ ತಲುಪುವಂತೆ ಬೈಪಾಸ್ ರಸ್ತೆ ನಿರ್ಮಾಣದ ಸಲುವಾಗಿ ಸುಮಾರು 170 ಕೋಟಿ ರು. ವೆಚ್ಚದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕಾಮಗಾರಿಗೆ ಈಗಾಗಲೇ 8 ಕೋಟಿ ರು.ಮಂಜೂರಾಗಿದ್ದು ಕಾಮಗಾರಿ ಪ್ರಾರಂಭವಾಗಿದೆ ಎಂದರು.

ಪಟ್ಟಣದ ಕುವೆಂಪು ವೃತ್ತದಿಂದ ನೆಲ್ಲಿಸರ ಕ್ಯಾಂಪಿನವರೆಗಿನ ಹೆದ್ದಾರಿ ವಿಸ್ತರಣೆಗೆ 540 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಇದರಿಂದ ತೀರ್ಥಹಳ್ಳಿ ಶಿವಮೊಗ್ಗ ನಡುವಿನ 5 ಕಿಮೀ ಉಳಿತಾಯವಾಗಲಿದೆ. ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಆಯನೂರಿನಿಂದ ತೀರ್ಥಹಳ್ಳಿಗೆ ಸಂಪರ್ಕ Pಲ್ಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ವೇಗವಾಗಿ ಅಭಿವೃದ್ದಿಗೊಳ್ಳುತ್ತಿರುವ ಪಟ್ಟಣದ ಅಗತ್ಯಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಪೂರಕವಾಗಿ ಈ ತಂಗುದಾಣ ನಿರ್ಮಿಸಲಾಗುತ್ತಿದೆ. ಮಳೆಗಾಲದ ಅವಧಿಯಲ್ಲಿ ಪ್ರಯಾಣಿಕರು ತಂಗುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿರ್ಮಿಸಲಾಗುವ ಈ ತಂಗುದಾಣ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಎಚ್.ಎನ್.ವಿಜಯದೇವ್, ಪಪಂ ಸಿಓ ಡಿ.ನಾಗರಾಜ್, ಸದಸ್ಯರುಗಳಾದ ಸಂದೇಶ್ ಜವಳಿ, ರಹಮತ್ ಉಲ್ಲಾ ಅಸಾದಿ,ಸೊಪ್ಪುಗುಡ್ಡೆ ರಾಘವೇಂದ್ರ, ಬಿ.ಆರ್.ರಾಘವೇಂದ್ರ ಶೆಟ್ಟಿ,ಜ್ಯೋತಿ ಮೋಹನ್, ಶಬನಂ, ಯತಿರಾಜ್, ಮಂಜುಳಾ ನಾಗೇಂದ್ರ, ಸುಶೀಲಾ ಶೆಟ್ಟಿ, ನಾಗರಾಜ ಪೂಜಾರಿ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವರಾತ್ರಿ ಪ್ರಯುಕ್ತ ಕಾಶಿಪುರ ಉತ್ಸವ ಭವ್ಯ ಆಚರಣೆ
ಚಾಮರಾಜನಗರ: ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ