91 ಲಕ್ಷ ರು.ಗೆ ಕನ್ನ: ಶಿವಮೊಗ್ಗ, ದಾವಣಗೆರೆಯ ಇಬ್ಬರ ಬಂಧನ

KannadaprabhaNewsNetwork |  
Published : Feb 28, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಯ ಕಚೇರಿಯಲ್ಲಿದ್ದ ₹91 ಲಕ್ಷ ದೋಚಿದ್ದ ಕ್ಯಾಷಿಯರ್ ಸೇರಿದಂತೆ ಇಬ್ಬರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಧನಂಜಯ ಹಾಗೂ ದಾವಣಗೆರೆಯ ಪ್ರವೀಣ್‌ ನಾಯಕ್‌ ಬಂಧಿತರಾಗಿದ್ದಾರೆ.

- ಬೆಂಗಳೂರಿನ ಸದಾಶಿವ ನಗರದ ರಿಯಲ್ ಎಸ್ಟೇಟ್ ಕಂಪನಿ ಕಚೇರಿಯಲ್ಲಿ ನಡೆದಿದ್ದ ಘಟನೆ

- - -

- ಶಿವಮೊಗ್ಗ ಜಿಲ್ಲೆಯ ಧನಂಜಯ, ದಾವಣಗೆರೆಯ ಪ್ರವೀಣ್‌ ನಾಯಕ್‌ ಆರೋಪಿಗಳು

- ಕಳ್ಳರು ರಿಯಲ್ ಎಸ್ಟೇಟ್ ಕಚೇರಿ ಬೀಗ ಒಡೆಯಲು ಸುತ್ತಿಗೆ ಬಳಸಿದ್ದರು

- ಪರಾರಿಯಾಗುವಾಗ ಅವಸರದಲ್ಲಿ ಸುತ್ತಿಗೆಯ ಬ್ಯಾಗ್‌ ಮರೆತಿದ್ದರು

- ಬ್ಯಾಗ್‌ ಮೇಲಿದ್ದ ಶಿವಮೊಗ್ಗ ಅಂಗಡಿ ಹೆಸರಿನ ಜಾಡು ಹಿಡಿದ ಪೊಲೀಸರಿಗೆ ಕಳವಿನ ಜಾಲ ಪತ್ತೆ

- - - ಕನ್ನಡಪ್ರಭ ವಾರ್ತೆ ಬೆಂಗಳೂರು ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಯ ಕಚೇರಿಯಲ್ಲಿದ್ದ ₹91 ಲಕ್ಷ ದೋಚಿದ್ದ ಕ್ಯಾಷಿಯರ್ ಸೇರಿದಂತೆ ಇಬ್ಬರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಧನಂಜಯ ಹಾಗೂ ದಾವಣಗೆರೆಯ ಪ್ರವೀಣ್‌ ನಾಯಕ್‌ ಬಂಧಿತರಾಗಿದ್ದಾರೆ.

ಆರೋಪಿಗಳಿಂದ ₹81 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕ್ಯಾಷಿಯರ್‌ನ ಸ್ನೇಹಿತ ಶಿವಮೊಗ್ಗದ ತಿಪ್ಪೇಶ್ ಹಾಗೂ ಆತನ ಸಹಚರನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಸದಾಶಿವನಗರ ಸಮೀಪ ನರಸಿಂಹ ಎಂಬರಿಗೆ ಸೇರಿದ ರಿಯಲ್ ಎಸ್ಟೇಟ್ ಕಂಪನಿ ಕಚೇರಿ ಬೀಗ ಮುರಿದು ₹91 ಲಕ್ಷ ಹಣ ಕಳ್ಳತನವಾಗಿತ್ತು. ಈ ಬಗ್ಗೆ ಕಂಪನಿ ಮಾಲಿಕ ನೀಡಿದ ದೂರಿನ ಮೇರೆಗೆ ತನಿಖೆ ಮಾಡಿದ ಇನ್ಸ್‌ಪೆಕ್ಟರ್ ಪ್ರದೀಪ್ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಜಮೀರ್ ಆವಟಿ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಕ್ಯಾಶಿಯರ್ ಹಾಗೂ ಆತನ ಸ್ನೇಹಿತನನ್ನು ಸೆರೆ ಹಿಡಿದಿದ್ದಾರೆ.

ಹಣದಾಸೆಗೆ ಕೃತ್ಯ: ಸದಾಶಿವ ನಗರದ ದೇವಸಂದ್ರದಲ್ಲಿ ನೆಲೆಸಿದ್ದ ಶಿವಮೊಗ್ಗದ ಧನಂಜಯ, 3 ವರ್ಷಗಳಿಂದ ನರಸಿಂಹ ಮಾಲೀಕತ್ವದ ಬಿಲ್ಡರ್ಸ್ ಅಂಡ್ ಮೈನಿಂಗ್ ಬಿಸಿನೆಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿದ್ದ. ಮಾಲೀಕನ ವಿಶ್ವಾಸ ಗಳಿಸಿ ಹಣಕಾಸು ವಹಿವಾಟಿನ ಬಗ್ಗೆ ತಿಳಿದುಕೊಂಡಿದ್ದ. ಬಳಿಕ ಕಂಪನಿಯ ಹಣ ಕಳ್ಳತನ ಮಾಡಲು ಯೋಜಿಸಿ ಈ ಬಗ್ಗೆ ಸ್ನೇಹಿತ ತಿಪ್ಪೇಶ್ ಜತೆ ಮಾತುಕತೆ ನಡೆಸಿದ್ದ. ಕೊನೆಗೆ ಆ ಗೆಳೆಯ ಸಹ ಹಣದಾಸೆಗೆ ಕೃತ್ಯಕ್ಕೆ ಸಹಕರಿಸಲು ಒಪ್ಪಿಕೊಂಡನು ಎಂದು ಪೊಲೀಸರು ಹೇಳಿದ್ದಾರೆ. ಕಳ್ಳತನಕ್ಕೆ ಧನಂಜಯ್ ಸಂಚು ರೂಪಿಸಿದ್ದ. ತರುವಾಯ ತಿಪ್ಪೇಶ್ ಮೂಲಕ ಪ್ರವೀಣ್ ನಾಯಕ್ ಹಾಗೂ ಮತ್ತೊಬ್ಬ ಧನಂಜಯ್‌ ಪರಿಚಯವಾಗಿದ್ದಾರೆ. ಆರೋಪಿ ಪ್ರವೀಣ್‌ ಕಾರನ್ನು ಬಳಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಫೆ.13ರಂದು ನಸುಕಿನಲ್ಲಿ ತಮ್ಮ ಸಂಚನ್ನು ಆರೋಪಿಗಳು ಕಾರ್ಯರೂಪಕ್ಕಿಳಿಸಿದ್ದರು.

ಸೆರೆಯಾಗಿದ್ದು ಹೇಗೆ?:

ಕಳ್ಳತನದ ಬಳಿಕ ಶಿವಮೊಗ್ಗಕ್ಕೆ ಆರೋಪಿಗಳು ಪರಾರಿಯಾಗಿದ್ದರು. ಆದರೆ ತಂಡ ಸಿಕ್ಕಿ ಬೀಳಲು ಸುತ್ತಿಗೆ ತಂದಿದ್ದ ಬ್ಯಾಗ್ ಮಹತ್ವದ ಸುಳಿವು ನೀಡಿದೆ. ಕಚೇರಿಯ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು, ಹಣವಿದ್ದ ಕೋಣೆಗೆ ನೇರವಾಗಿ ಹೋಗಿದ್ದು ಕೃತ್ಯದಲ್ಲಿ ಪರಿಚಿತರ ಪಾತ್ರದ ಬಗ್ಗೆ ಗುಮಾನಿಗೆ ಎಡೆ ಮಾಡಿತು.

ಬೀಗ ಒಡೆಯಲು ತಂದಿದ್ದ ಬ್ಯಾಗ್ ಅನ್ನು ಕೃತ್ಯ ಎಸಗಿದ ನಂತರ ಪರಾರಿಯಾಗುವ ಅವಸರದಲ್ಲಿ ಸ್ಥಳದಲ್ಲೇ ಬಿಟ್ಟು ಕಳ್ಳರು ಹೋಗಿದ್ದರು. ಆ ಬ್ಯಾಗ್‌ ಮೇಲೆ ಶಿವಮೊಗ್ಗ ಅಂಗಡಿಯ ಹೆಸರಿತ್ತು. ಆಗ ಕೃತ್ಯದಲ್ಲಿ ಶಿವಮೊಗ್ಗ ಕಡೆಯವರ ಪಾಲ್ಗೊಳ್ಳುವಿಕೆಗೆ ಕುರುಹು ಸಿಕ್ಕಿತು. ಈ ಸುಳಿವು ಆಧರಿಸಿ ಬೆಂಗಳೂರು-ಶಿವಮೊಗ್ಗ ಹೆದ್ದಾರಿಯ ಟೋಲ್‌ಗಳ ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ಹಿಂದೆ ಸಿಂಬಲ್ ಇದ್ದ ಕಾರಿನ ಸುಳಿವು ಲಭಿಸಿತ್ತು. ಈ ಮಾಹಿತಿ ಬೆನ್ನತ್ತಿದ್ದಾಗ ಪ್ರವೀಣ್ ಬಲೆಗೆ ಬಿದ್ದ. ಆತನ ವಿಚಾರಣೆ ನಡೆಸಿದಾಗ ಕ್ಯಾಶಿಯರ್ ಧನಂಜಯ ಮುಖವಾಡ ಕಳಚಿತು ಎಂದು ಪೊಲೀಸರು ವಿವರಿಸಿದ್ದಾರೆ.

- - -

(ಬಾಕ್ಸ್‌) * ತಂದೆ ಮನೆಯಲ್ಲಿ ಹಣ ಇಟ್ಟಿದ್ದರು

ಈ ಕೃತ್ಯದಲ್ಲಿ ದೋಚಿದ್ದ ಹಣವನ್ನು ಪ್ರವೀಣ್ ಗ್ಯಾಂಗ್ ಧನಂಜಯ್ ತಂದೆ ಮನೆಯಲ್ಲಿ ಇಟ್ಟು ಪರಾರಿಯಾಗಿತ್ತು. ವಿಚಾರಣೆ ಬಳಿಕ ಆ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರರಿಗೆ ಸಚಿವ ಸ್ಥಾನ ನೀಡಿ
56 ಸಾವಿರ ಹುದ್ದೆಗಳ ಭರ್ತಿ ಹೇಳಿಕೆ ಬಿಜೆಪಿ ಹೋರಾಟದ ಫಲ